ಸೋಮವಾರ, ಅಕ್ಟೋಬರ್ 31, 2011

ದ್ವಿಪದಿಗಳು




ಈ ವರ್ಷವೂ ಅಷ್ಟೇ ವಸಂತನ ಸಮ್ಮುಖದಲ್ಲಿ
ಹೊಸ ಚಿಗುರಿನಿಂದ ಕಂಗೊಳಿಸುವ ಮರ ಹಳೆಯದಾಗುವುದು


ನಿನ್ನೆ ರಾತ್ರಿ ಹಣತೆ ಹಚ್ಚಿಟ್ಟು ಮಲಗಿದೆವು
ಎದ್ದಾಗ ಎವೆಗಳ ಮೇಲೆ ಬರೀ ಕಾಡಿಗೆ ಕಪ್ಪು


ಮನೆ ಬಾಗಿಲಲಿ ನೂರೆಂಟು ಹಣತೆ ಹಚ್ಚಿಟ್ಟ ಮೇಲಾದರೂ ನಿನಗೆ ನೆನಪಾಗಲಿಲ್ಲ
ಅಖಂಡ ಭೂಮಿಗೆ ಸೂರ್ಯನೊಬ್ಬನೆ ಎಂಬುದ ನೀನು ನೋಡಿಯೂ ಕಲಿಯಲಿಲ್ಲ


ಕೊಂಡವರ ಮನೆಯ ಜಗುಲಿಯೇರಿ ಹಣತೆ ಬೆಳಕಾಯಿತು
ಹಣತೆ ಮಾರುವ ಕುಂಬಾರನ ಬದುಕು ಇನ್ನೂ ಬೀದಿ ಬದಿಗಿತ್ತು


ಸೂರ್ಯನನ್ನು ಕಂಡ ಕೂಡಲೇ
ಭೂಮಿಯ ಕಪ್ಪು ಚರಿತ್ರೆ ಬಣ್ಣ ಬದಲಿಸಿತು



ಬೆಳಗಾಯಿತೆಂದು ನಾವು ಸಂಭ್ರಮ ಪಟ್ಟೆವು
ಇಂದೂ ಸಾವು ಒಂದಡಿ ಹೆಜ್ಜೆ ಮುಂದೆಬಂದಿತು



ಬೀದಿ ಬಾಗಿಲು ಬಾಯಿ ಬಿಟ್ಟಿತು ಬೆಳಗಾಯಿತೆಂದು
ಕೆಲವು ಸುಂದರ ಕನಸುಗಳ ಕೊಲೆ ನೆಡದೆ ಹೋಯಿತು



ಬುದ್ದನ ಅನುಯಾಯಿಯಾಗುವದಾದರೆ ಹಣತೆ ಹಚ್ಚು
ಬುದ್ದನಾಗುವದಾದರೆ ಉರಿವ ಹಣತೆಯ ತೈಲವಾಗು


ಈಗಲೂ ಅಷ್ಟೇ ಊರ ಜನ ಸತ್ತ ಸುದ್ದಿ ಬಂದರೆ
ಹಲಿಗೆ ಬಾರಿಸುವನ ಆಶ್ರಯ ಮನೆಯಲಿ ಹೊಗೆ ಕಾಣುವುದು
೧೦

ನನ್ನ ಕೈಯಿಂದೇನು ? ಇಳಿಹೊತ್ತು
ಸೂರ್ಯನ ಕೈಯಿಂದಲೂ ಭೂಮಿ ಕೈತಪ್ಪಿತು

೧೧
ಕೇರಿ ಉರಿದು ಹೊಗುವುದ ನಿಂತು ನೋಡುವ ಊರಿನ ಮೂಗಿಗೆ
ಉರಿಯಲಿ ಬೆಂದ ಆಕಳಿನ ಮಾಂಸದ ವಾಸನೆಯಷ್ಟೇ ಕಿರಿಕಿರಿ
೧೨

ನಮ್ಮ ಕೇರಿಗೂ ಬೆಳಕು ಬೇಕೆಂದು ಹಠ ಹಿಡಿದ ಹುಡುಗರ ಕನಸು ಬಿತ್ತು
ಎಚ್ಚರಾದಾಗ ರಾತ್ರಿಯೇ ಉರಿದುಹೋದ ಕೇರಿಯ ಬೂದಿ ಮೂಗಿಗಡುರುತ್ತಿತ್ತು
೧೩

ಇಷ್ಟು ದೂರ ನಡೆದು ಬಂದಿದ್ದೇನೆ
ಹಾದಿಯಲ್ಲಿ ಮೂಡಿದ ಹೆಜ್ಜೆಗಳಷ್ಟೇ ನನ್ನ ಪರಿಚಯ
೧೪

ಅನಪೇಕ್ಷಿತ ಇಚ್ಚೆಗಳ ಆಸ್ತಿ ದೊಡ್ಡದಿತ್ತು
ಹಾದಿಯುದ್ಧಕ್ಕೂ ಸಾಗಿ ಬಂತು ಬದುಕಿನ ಬಡತನ
೧೫
ಈಜುವದಕೇನು ವಿಶಾಲ ಸಮುದ್ರವಿದೆಯೆಂದು ಮೀನು ತುಸು ಮೇಲೆದ್ದಿತು
ನೂರಾರು ಗಾವುದ ದೂರದಲಿರುವ ಹದ್ದಿನ ಕಣ್ಣಿಗೆ ಅಷ್ಟು ಸಾಕಿತ್ತು ...
೧೬
ಮನ್ನಿಸು, ಹೂಗಳನ್ನಲ್ಲ ನಿನ್ನ ಸಮಾಧಿಯ ಮೇಲೆ ಬರೀ ಅಕ್ಷರಗಳನಿಟ್ಟೆ
ಓದಿದವರ ಎದೆಯಲ್ಲಿ ಅಕ್ಷರಗಳು ನಿನಗೆ ಮರುಹುಟ್ಟು ಕೊಟ್ಟವು ..!
೧೭
ನೀವು ಹರ್ಷದಿಂದ ಹೂಮಾಲೆ ತಂದಾಗ ನಾ ತಲೆಬಾಗದೆ ಇರಲಾರೆ
ಹೂಗೋಣು ಮುರಿದು ಮಾಲೆ ಮಾಡಿರುವಾಗ ನಾ ತಲೆಯೆತ್ತುವುದಾದರೂ ಹೇಗೆ ?
೧೮
ಈ ರಾತ್ರಿ ಸಾಲು ಸಾಲು ಹಣತೆ ಹಚ್ಚಿ ಹುಡುಕಿದರೇನು ?
ಕತ್ತಲಲಿ ಬೆಳಕಿನ ಸ್ವಿಚ್ಚು ಎಲ್ಲಿದೆಯೆಂದು ಭೂಮಿಗಷ್ಟೇ ಗೊತ್ತು
೧೯
ಆ ಕವಿ ಒಂದು ಜನಾಂಗದ ಕಣ್ಣು ತೆರೆಯಿಸಿದರೆಂಬ ಮಾತಿಗೇಕೆ ಕೋಪ
ಕವಿ ಕೊಟ್ಟ ಕಣ್ಣು ಆ ಕವಿ ತೋರಿದ ದಾರಿಗಷ್ಟೇ ದೀಪ
೨೦
ಲೋಕದ ತುಂಬ ಬೆಳಕು ಬೀದಿಗೆ ಬಂದಿತು
ಹಬ್ಬದ ದಿನ ಮನೆಯೊಳಗಿನ ಕತ್ತಲು ತಣ್ಣಗಿತ್ತು    

ಗುರುವಾರ, ಅಕ್ಟೋಬರ್ 27, 2011

ದೀಪಾವಳಿ – ಕೆಲ ಪದ್ಯಗಳು



-ಲಡಾಯಿ ಬಸು


ಹಣತೆ ಸುಟ್ಟುಕೊಳ್ಳುವಾಗ
ಲೋಕಕ್ಕೆ
ಬೆಳಕಿನ ಸಂಭ್ರಮ ..!

ನಿನಗೆ
ಬೆಳಕಿನ ಅನುಭವವಾಗುವುದು
ನೀನು ಹಣತೆಯಾದರಷ್ಟೇ  ..!

ಹಣತೆ ಹಚ್ಚಿಟ್ಟವರ ಓಣಿಯಲ್ಲಿ ಸಂಚಾರವಿತ್ತು
ಬರೀ ಚಾಳೀಸು ತೊಟ್ಟ ಕುರುಡರೇ ಎದುರಾದರು ..!

ಇಡೀ ಇರುಳು
ಪ್ರೇಮಿಸಿದ ಫಲವೆನ್ನುವ ಹಾಗೆ
ಕತ್ತಲು ಬೆಳಕಾಗಿ ಮಾರ್ಪಟ್ಟಿತು
ಹೆಚ್ಚೇನಿಲ್ಲ
ಪ್ರೇಮಿಸುವದೆಂದರೆ
ಕತ್ತಲನ್ನು ಬೆಳಕಾಗಿಸುವುದು
ಇದು ಇರುಳಿನ
ನೀತಿಪಾಠವಂತೂ ಅಲ್ಲ ..!

ಸೂರ್ಯನಿರುವ ಹಗಲಿನಲ್ಲಿ
ಹಣತೆ ಹಚ್ಚುವ
ನಿನ್ನ  ಸಂಭ್ರಮಕೆ ಏನನ್ನಲಿ ?
ಉರಿವ ಹಣತೆ
ಹೇಳುವುದು ಇದನ್ನೇ
ಸುಡದೆ ಬೆಳಕಾಗಲು
ಬರದು ..!


ತನ್ನಷ್ಟಕ್ಕೆ ತಾನು
ಉರಿದು ಬೆಳಕಾದ
ಸೂರ್ಯನ ಪಾಠ ಓದಲಾಗದ
ಕುರುಡರು
ಈ ದಿನ ಹಣತೆ ಹಚ್ಚಿ
ಕತ್ತಲೆ ಕಳೆಯಲೆಂದು
ಪ್ರಾರ್ಥನೆಗೆ ಕುಳಿತರು
ಒಂದು ಕರುಣೆಯ ನೋಟ
ಬಿಟ್ಟರೆ
ಅವರ ನಡೆ
ನನ್ನ ಶಬ್ದಗಳಿಗೆ ನಿಲುಕದು
ಎಲ್ಲ ದಾಖಲೆ ಮುರಿದಿದೆ
ಕುರುಡರ ಲೋಕದಲ್ಲಿ
ಕನ್ನಡಿಯ ಮಾರಾಟ
-ಚಿತ್ರಕೃಪೆ- ಅಂತರ್ಜಾಲ

ಶನಿವಾರ, ಸೆಪ್ಟೆಂಬರ್ 17, 2011

ಹನಿ ಕವಿತೆಗಳು

ಬಿ ಎಂ ಬಷೀರ್
















ಫೈಲುಗಳ ನಡುವೆ ಧೂಳು ತಿನ್ನುತ್ತಿದ್ದ ಕೆಲವು ಹನಿಗವಿತೆಗಳು.

ರಜಾ
ನನ್ನೆದುರಲ್ಲೇ ಮಿಲಿಟರಿ ವ್ಯಾನೊಂದು
ಸರಿದು ಹೋದದ್ದು

ಪುಟ್ಟ ಮಗು ಅದರೆಡೆಗೆ ಕೈ ಬೀಸಿ
‘ಟಾ..ಟಾ..’ ಎಂದದ್ದು

ಬಾಗಿಲ ಪಕ್ಕ
ಕುಳಿತ ಯೋಧನೊಬ್ಬ
ಅದನ್ನು ಸ್ವೀಕರಿಸಿದ್ದು
ಒಂದೇ ಕ್ಷಣಕ್ಕೆ ನಡೆದು ಹೋಯಿತು!

ಇನ್ನು ಯುದ್ಧಕ್ಕೆ ರಜಾ!

ಪಾವತಿ
ಗುಲಾಬಿ ಮತ್ತು ಕವಿತೆ ಜತೆ
ಬರುತ್ತಿದ್ದೇನೆ
ಧಾರಾವಿಯ ಕಪ್ಪು ಬೆಳಕಿನ ದಾರಿ ಒಡೆದು
ಎದ್ದು ಬಂದ ಪುಟ್ಟ ಮಗು
ಗುಲಾಬಿಯನ್ನು ಕೈ ಮಾಡಿ ಕರೆಯಿತು
ನನ್ನ ಕವಿತೆ ಗುಲಾಬಿಯ ಜೊತೆ
ಮಗುವಿನ ಕಣ್ಣಲ್ಲಿ
ಇಂಗಿ ಹೋಯಿತುಪಡೆದ ಸಾಲ ಮರಳಿದಂತೆ

ತಾಯಿ
ಅವಳ ಮಡಿಲಲ್ಲಿ ಮುಳುಗೇಳುತ್ತಿದ್ದ ಮಗು
ಪಕ್ಕನೆ ಅವಳ ಮುಖ ಪರಚಿ ಬಿಟ್ಟಿತು
ಆ ಗಾಯವನ್ನು ಆರದಂತೆ
ಜೋಪಾನ ಇಟ್ಟು
ನರಳುತ್ತಾಳೆ ತಾಯಿಇಂದಿಗೂ ಸುಖದಿಂದ!

ಮೌನ

ಸಾವು ಹಗುರ
ಅದು ಬಿಟ್ಟು ಹೋಗುವ
ಮೌನ
ಹೊರಲಾಗದಷ್ಟು ಭಾರ!

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

ಬುಧವಾರ, ಸೆಪ್ಟೆಂಬರ್ 14, 2011

ಇರುಳ -ಬೆಳಕಿನ ಸೊಲ್ಲು -೩


ಒಂದೆಡೆ ಹಣತೆ
ಮತ್ತೊಂದೆಡೆ ಬೆಂಕಿ ಹುಳುಗಳ ಗುಂಪು
ಹಗಲು ಇರುಳಿನೊಂದಿಗೆ
ಪರಿ ಪೈಪೋಟಿಗೆ ಬೀಳಬಾರದಿತ್ತು
ಹಗಲಿನಲಿ ದಾಟಲಾಗದ
ಗಡಿಗಳನು
ಇರುಳು ದಾಟಿದೆ
ಏನು ಮಾಡಲಿ
ಪ್ರೀತಿ ಇರುವುದು
ಬದನಾಮ ರಸ್ತೆಯಲ್ಲೇ ..!
ಬೆಳಕಿನ ದಾಸನಾದರೆ
ಕತ್ತಲು ಕಳೆಯುತ್ತದೆಂದರು ;
ಸರ್ವತಾ ನನ್ನಿಂದಾಗದು
ಎಂದು ಹೇಳಿ ಕಳಿಸಿದೆ ....!
ಬೆಳಕು
ಅಹಂಕಾರದ ಪಟ್ಟಕ್ಕೆರಿತು ;
ಕತ್ತಲಾಗಲು
ಬೇರೇನು ಬೇಕಿತ್ತು ...?
ಲೋಕದ ಹಾಗೆ
ಹಗಲಿರಳುಬೆಳಕಿನದೇ ದ್ಯಾನವಾಗಿ
ಬೆಳಕಿನ ಬೆನ್ನಟ್ಟಿ ಹೊರಟೆ
ದಾರಿ ಮದ್ಯ ಒಂದು ಸಲ
ಹಿಂತಿರುಗಿ ನೋಡಿದೆ
ಕತ್ತಲು ಬೆನ್ನ ಹಿಂದಿತ್ತು
ಆಗಷ್ಟೇ
ನಂಬಿಕೆಗೆ ಅರ್ಹವಾದುದು
ಮುಂದಿರುವುದಲ್ಲ
ಬೆನ್ನ ಹಿಂದೆ ಬರುವುದು
ಎಂದಿತು ವಿವೇಕ ...
ಲೋಕವೇ ಏನಾದರೂ
ಅಂದುಕೋ
ವಿವೇಕವನ್ನು ಮೀರಲಾರೆ ...!
ಹೀಗೂ ಅಂದರಂತೆ
ಹಿಂದಿನವರು ; ಬೆಳಕು
ಇಲ್ಲದಿರುವುದೇ ಕತ್ತಲೆಯ ಹೆಸರು
ನಾನೂ ಹುಡುಕುತ್ತಿದ್ದೇನೆ
ಬೆಳಕಿನಲ್ಲಿ ಕತ್ತಲನ್ನು
ಕಾಣಲೊಲ್ಲದು ...!
ಇರುಲಾಯಿತು ;
ಹೊರಗಿದ್ದ ಬೆಳಕು
ಒಳಮನೆಗೆ ಬಂದಿತು
ಬೀದಿ ಬಾಗಿಲು
ಮುಚ್ಚಿ ಬಿಟ್ಟವು
ಬೆಳಕೂ ಬಂಧಿಯಾಯಿತು ...!

ಕತ್ತಲಾಯಿತು ;
ಇರುಳು ಬೆಳಕಿಗೆ
ಮರುಹುಟ್ಟು ಕೊಟ್ಟಿತು

-ಅನಾಮಿಕ

ಗಾಯ ಮತ್ತು ಇತರ ಕತೆಗಳು

ಬಿ . ಎಂ . ಬಷೀರ್













ಧ್ಯಾನ
ಶಿಷ್ಯ ಕಣ್ಣು ಮುಚ್ಚಿ ಧ್ಯಾನಸ್ಥನಾಗಿದ್ದ.
ಸಂತ ಹೇಳಿದ. ‘‘ಮೂರ್ಖ...ಯಾಕೆ ಹೇಡಿಯಂತೆ ಕಣ್ಣು ಮುಚ್ಚಿದ್ದೀಯ? ಕತ್ತಲಲ್ಲಿ ಏನನ್ನು ಹುಡುಕುತ್ತಿದ್ದೀಯ? ತೆರೆ ಕಣ್ಣನ್ನು, ನೋಡು ಜಗವನ್ನು. ಬೆಳಕಲ್ಲಿ ಹುಡುಕು’’

ಕೇಳುವುದು!
ಆತ ಹೆಣ್ಣು ನೋಡುವುದಕ್ಕೆ ಹೋಗಿದ್ದ.
ಹೆಣ್ಣನ್ನು ನೋಡಿದವನೇ ಕೇಳಿದ ‘‘ನಿಮಗೆ ಹಾಡುವುದಕ್ಕೆ ಬರುತ್ತದೆಯೆ?’’
ಹೆಣ್ಣು ತಕ್ಷಣ ಮರು ಪ್ರಶ್ನಿಸಿದಳು
‘‘ನಿಮಗೆ ಕೇಳುವುದಕ್ಕೆ ಬರುತ್ತದೆಯೆ?’’

ಮರ
ಒಂದು ಬೀಜ ಯಾರದೋ ಕೈಯಿಂದ ತಪ್ಪಿ ಉದುರಿ ಒದ್ದೆ ಮಣ್ಣಿನ ಮೇಲೆ ಬಿತ್ತು.
ನಾಲ್ಕೇ ದಿನದಲ್ಲಿ ಅದು ಮೊಳಕೆ ಒಡೆಯಿತು.
ಕೆಲವು ಸಮಯ ಕಳೆದರೆ ಗಿಡವಾಗಿ, ಮರವಾಯಿತು.
ಹೂ ಬಿಟ್ಟಿತು...ಹಣ್ಣಾಯಿತು....
ಒಬ್ಬಾತ ಬಂದವನೇ ಘೋಷಿಸಿದ ‘‘ಇದು ನನ್ನ ಮರ’’

ಅಮ್ಮ!
ಒಂದು ಕಡೆ ಕೋಮುಗಲಭೆ ನಡೆಯುತ್ತಿತ್ತು.
ಪುಟಾಣಿಯೊಬ್ಬ ಆ ಗಲಭೆಯಲ್ಲಿ ಸಿಲುಕಿಕೊಂಡ.
ಗುಂಪೊಂದು ಮಗುವನ್ನು ತಡೆದು ಕೇಳಿತು ‘‘ನಿನ್ನದು ಯಾವ ಧರ್ಮ?’’
ಮಗು ಹೇಳಿತು ‘‘ನನಗೆ ನನ್ನ ಅಮ್ಮ ಬೇಕು...’’
‘‘ಹೋಗಲಿ...ನಿನ್ನ ಅಮ್ಮನ ಧರ್ಮವೇನು?’’ ಗುಂಪು ಕೇಳಿತು.
‘‘ಅಮ್ಮ...’’ ಮಗು ಅಳುತ್ತಾ ಉತ್ತರಿಸಿತು.

ಹಿಮಕರಡಿಗಳು
ಒಬ್ಬ ಶಿಷ್ಯ ಬಂದು ಸಂತನಲ್ಲಿ ಹೇಳಿದ ‘‘ಗುರುಗಳೇ...ನಾನು ಹೆಚ್ಚಿನ ಜ್ಞಾನ ಮತ್ತು ತಪಸ್ಸಿಗಾಗಿ ಹಿಮಾಲಯಕ್ಕೆ ಹೋಗಬೇಕೆಂದಿದ್ದೇನೆ...ಅಪ್ಪಣೆಕೊಡಿ...’’
‘‘ಜನವೇ ಇಲ್ಲದಲ್ಲಿ ಜ್ಞಾನಾರ್ಜನೆ ಹೇಗಾಗುತ್ತದೆ ಶಿಷ್ಯ?’’
ಶಿಷ್ಯ ಹೇಳಿದ ‘‘ಹಿಮಾಲಯದಂತಹ ಪುಣ್ಯ ಸ್ಥಳದಲ್ಲಿ ತಪಸ್ಸು ಮಾಡಿದರೆ ಬೇಗ ಜ್ಞಾನೋದಯವಾಗಬಹುದಲ್ಲವೆ?’’
ಸಂತ ಗೊಣಗಿದ ‘‘ಹಿಮಕರಡಿಗಳು ಶತಶತಮಾನಗಳಿಂದ ಹಿಮಾಲಯದಲ್ಲೇ ಬದುಕುತ್ತಿವೆ. ಒಂದೇ ಒಂದು ಹಿಮಕರಡಿಗೂ ಜ್ಞಾನೋದಯವಾದ ಸುದ್ದಿ ನನಗೆ ಈವರೆಗೆ ತಿಳಿದು ಬಂದಿಲ್ಲ’’

ಪ್ರಪಂಚ
ಬೇರೆ ಬೇರೆ ಆಶ್ರಮಗಳಲ್ಲಿ ಕಲಿತ ಶಿಷ್ಯರು ಒಟ್ಟು ಸೇರಿದ್ದರು
ಅವರೆಲ್ಲ ಬೇರೆ ಬೇರೆ ಪಂಥಗಳಿಗೆ ಸೇರಿದವರು.
ಒಬ್ಬ ಹೆಮ್ಮೆಯಿಂದ ಹೇಳಿದ ‘‘ನನ್ನ ಗುರುಗಳು ನನಗಾಗಿ ತಾವು ಬರೆದ ಅಪರೂಪದ ಬೃಹತ್ ಗ್ರಂಥವನ್ನೇ ಬಿಟ್ಟು ಹೋಗಿದ್ದಾರೆ’’
ಇನ್ನೊಬ್ಬ ಹೇಳಿದ ‘‘ನನಗಾಗಿ ನನ್ನ ಗುರುಗಳು ಇಡೀ ವಿದ್ಯಾಸಂಸ್ಥೆಯನ್ನೇ ಬಿಟ್ಟು ಹೋಗಿದ್ದಾರೆ.
ಮಗದೊಬ್ಬ ಹೇಳಿದ ‘‘ನನಗಾಗಿ ನನ್ನ ಗುರುಗಳು ಹೊಸ ಸಿದ್ಧಾಂತವೊಂದನ್ನು ಬಿಟ್ಟು ಹೋಗಿದ್ದಾರೆ.’’
ಒಬ್ಬ ಶಿಷ್ಯ ಸುಮ್ಮಗೆ ಕೂತಿದ್ದ. ಉಳಿದವರೆಲ್ಲ ಕೇಳಿದರು ‘‘ನಿನಗಾಗಿ ನಿನ್ನ ಗುರುಗಳು ಏನು ಬಿಟ್ಟು ಹೋಗಿದ್ದಾರೆ?’’
ಆತ ಉತ್ತರಿಸಿದ ‘‘ನನಗಾಗಿ ಅವರು ಈ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾರೆ’’

ಆಸೆ
ಸಂತ ಮರಣಶಯ್ಯೆಯಲ್ಲಿದ್ದ.
ಶಿಷ್ಯರೆಲ್ಲ ಅವನ ಸುತ್ತುಗೂಡಿದ್ದರು.
ಒಬ್ಬ ಶಿಷ್ಯ ಕೇಳಿದ ‘‘ಗುರುಗಳೇ ನಿಮ್ಮದೇನಾದರೂ ಅಂತಿಮ ಆಸೆಯಿದೆಯೆ?’’
ಸಂತ ‘‘ಹೂಂ’’ ಎಂದ.
ಎಲ್ಲ ಶಿಷ್ಯರು ಮುತ್ತಿಕೊಂಡು ‘‘ಹೇಳಿ ಗುರುಗಳೇ’’ ಎಂದರು.
‘‘ಸಾಯುವ ಮೊದಲು ನಾನು ಯಾವುದಕ್ಕಾಗಿಯಾದರೂ ಆಸೆ ಪಡಬೇಕು. ಹೇಳಿ, ಅಂತಹ ವಸ್ತುವೇನಾದರೂ ಈ ಜಗತ್ತಿನಲ್ಲಿದೆಯೆ?’’

ಗಾಯ
ವೈದ್ಯರು ಕೇಳಿದರು ‘‘ಯಾವುದೇ ಇರಿತದ ಗಾಯ ಕಾಣ್ತಾ ಇಲ್ವಲ್ಲ?’’
‘‘ಇಲ್ಲ ಸಾರ್ ತುಂಬಾ ನೋವಾಗುತ್ತಿದೆ...ಡಾಕ್ಟರ್...ಏನಾದ್ರು ಮಾಡಿ...’’
‘‘ಗಾಯ ಆದದ್ದು ಹೇಗೆ’’
‘‘ಗೆಳೆಯನೊಬ್ಬ ಇರಿದ ಡಾಕ್ಟರ್’’
‘‘ಹೌದಾ? ಯಾವುದರಿಂದ?’’
‘‘ಮಾತಿನಿಂದ....’’

ಚಿಟ್ಟೆ
ಅದೊಂದು ಪರೀಕ್ಷೆ ಹಾಲ್.
ಎಲ್ಲರೂ ಬೆವರುತ್ತಾ, ಬೆದರುತ್ತಾ ಗಂಭೀರವಾಗಿ ಪರೀಕ್ಷೆ ಬರೆಯುತ್ತಿದ್ದರು.
ಅಷ್ಟರಲ್ಲಿ ಅಲ್ಲಿಗೆ ಹಾರುತ್ತಾ ಒಂದು ಬಣ್ಣದ ಚಿಟ್ಟೆ ಬಂತು.
‘‘ಚಿಟ್ಟೆ’’ ಯಾರೋ ಪಿಸುಗುಟ್ಟಿದರು.
ಎಲ್ಲರ ದೃಷ್ಟಿ ಚಿಟ್ಟೆಯಕಡೆಗೆ.
ಒಮ್ಮೆಲೆ ಕಲರವ
ಸೆಕ್ಷನ್ ಉಲ್ಲಂಘಿಸಿ ಆ ಪರೀಕ್ಷೆ ಹಾಲಿಗೆ ಬಂದು ಎಲ್ಲರ ಪರೀಕ್ಷೆಯ ಭಯವನ್ನು ತನ್ನ ರೆಕ್ಕೆಯೊಳಗೆ ಕಟ್ಟಿಕೊಂಡು ಚಿಟ್ಟೆ ನಿಧಾನಕ್ಕೆ ಹಾರಿ ಹೋಯಿತು.
ಈಗ ಎಲ್ಲರೂ ನಗು ನಗುತ್ತಾ ಪರೀಕ್ಷೆ ಬರೆಯತೊಡಗಿದರು.
ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

ಶುಕ್ರವಾರ, ಸೆಪ್ಟೆಂಬರ್ 2, 2011

ಇರುಳ - ಬೆಳಕಿನ ಸೊಲ್ಲು -೨


ಕೊಳ್ಳುಬಾಕರ ಅಗಸಿಯಲ್ಲಿ ಹಾಯ್ದು ಬಂದೆ
ಬೆಳಕಾದ ಸೂರ್ಯನಿಗೆ ಬೆಲೆ ಎಷ್ಟೆಂದು ಕೇಳುವ ಮನಸಾಯಿತು ..
ಇರುಳಿನಲಿ
ಸಿಕ್ಕಾದ ಮುಂಗುರುಳ
ಬೆಳಗಿನಲಿ ಬಿಡಿಸಿಕೊಳ್ಳುವಾಗ
ಕೆನ್ನೆಯೂ
ಆ ಸೂರ್ಯನಂತೆ
ಕೆಂಪು ಕೆಂಪು ...!
ಇಳಿಸಂಜೆ ಹೊತ್ತಾದರೂ
ನನಗೆ ಬೆಲೆ ಬರಲಿಲ್ಲ...
ಕೊಳ್ಳುವ ಲೋಕದ
ತಪ್ಪೇನಿತ್ತು ಇದರಲ್ಲಿ ...?
ರೊಕ್ಕ ಕೊಟ್ಟು
ಕೊಳ್ಳುವಂತದ್ದೇನೂ ಇರಲಿಲ್ಲ ನನ್ನ ಬಳಿ

-ಅನಾಮಿಕ

ಗುರುವಾರ, ಸೆಪ್ಟೆಂಬರ್ 1, 2011

ಇರುಳ - ಬೆಳಕಿನ ಸೊಲ್ಲು



ಹಗಲೆಂದರೆ ಬೆಳಕು
ಇರುಳೆಂದರೆ ಕತ್ತಲು
ಹೆಚ್ಚೇನಿಲ್ಲ
ಕುರುಡರ ಪಾಠಕ್ಕೆ
ಒಂದೇ ಸಾಲು ....!

ಲೋಕದ ಪಟ್ಯದಲಿ
ಇನ್ನೂ
ನೋವು , ಬಡತನ
ಜಾತಿ -ಮತದ ಪದಗಳು
ಹೇರಳವಾಗಿ ಕಾಣುತ್ತಿವೆ ; ಈ ದಿನವಾದರೂ
ಬೆಳಗಾಯಿತೆಂದು
ಹೇಗೆ ಹೇಳಲಿ ....?

ಹಗಲ ಕಣ್ಣಿಂದ
ಇರುಳ ನೋಡುವುದ
ನಿಲ್ಲಿಸಿದೆ ;
ಈಗ
ಇರುಳು
ಬರೀ ಕತ್ತಲೆಂದು
ಹೇಳುವುದು ನನ್ನಿಂದಾಗದು ...!

ನಿನಗೂ ಮಿತಿಯಿದೆ
ನನಗೂ ಮಿತಿಯಿದೆ ಮಿತಿಯ ಬದುಕಿನ ಬಗ್ಗೆ
ಅಸಮಾಧಾನದ ದೀಪ
ಬೆಳಗಾಗುವ ತನಕ
ಉರಿಯಲಿ ಬಿಡು
ಈ ಕ್ಷಣ ನನಗೆ
ನೆನಪಿನಲ್ಲಿ ಉಳಿದಿರುವುದಿಷ್ಟೇ
ಮಿತಿಗಳಿಲ್ಲದ್ದು
ಮಾನವೀಯವಾಗಿಯೂ ಇರಲ್ಲ ...!

ಬೆಳಕ ಬಲ್ಲವ
ಇರುಳಾಯಿತು ಎನ್ನಲಾರ
ಇರುಳ ಬಲ್ಲವ
ಬೆಳಕಾಯಿತು ಎನ್ನಲಾರ
ಇರುಳು ಬೆಳಕಿನ ಬೀಜ
ಬೆಳಕು ಇರುಳಿನ ಬೀಜ
ಹೊರ ಪದರಷ್ಟೇ
ಕಪ್ಪು -ಬಿಳಿ ಬಣ್ಣ
ಎಂಬುದು
ನೀನು ಇಲ್ಲದಿದ್ದಾಗಷ್ಟೇ
ಅರಿವಿಗೆ ಬರುವುದು ...!

ಬೆಳಗಾಯಿತು
ನಿಜ ;
ಬರೀ ಕತ್ತಲೆಯಲ್ಲ
ಕನಸೂ
ಹಾಸುಗೆಯಿಂದ
ಎದ್ದು ನಡೆಯಿತು ..


ಬೆಳಗು
ಕತ್ತಲು ಇಲ್ಲದಿರುವುದಕ್ಕೊಂದು
ಹೆಸರು ..;
ನೆನಪಿಡು
ಬೆಳಕಿನಲ್ಲಿ
ಕನ್ನಡಿ ಇದ್ದರಷ್ಟೇ
ನಿನಗೆ ನಿನ್ನ
ಮುಖ ಕಾಣುವುದು ..!

ರಾತ್ರಿ ಬರೆದ
ಸಾವಿನ ಕವನ
ಮುಂದುವರಿಸಿದೆ
ಸುಮ್ಮನೆ
ಹಗಲು -ರಾತ್ರಿ ತದ್ವಿರುದ್ದ
ಅಂದವರಾರು ...!

ಇರುಳು
ಕಣ್ಣಿಲ್ಲದವನ ಕೈಯಲ್ಲಿ
ಕಂದೀಲಿದ್ದರೂ
ಕಣ್ಣಿದ್ದವನು ಪ್ರಪಾತದ
ಪಾಲಾಗುವುದು ತಪ್ಪುವುದು ...!
೧೦
ಬೆಳಗಾದ ಮೇಲೂ
ಆರಿ ಹೋಗದ
ಹಣತೆಯ ಹಾಗೆ ನೀನು
ನನ್ನ ಬೆಳಕಿನ ಲೋಕದ
ಕತ್ತಲೆ ಕಳೆಯಲು
ಉರಿಯುತ್ತಲೇ ಇದ್ದಿ ..!
೧೧
ಇನ್ನೂ
ಉಳಿದೇ ಇತ್ತು
ಬೆಳಕಿನ ಹಂಬಲ
ಇರುಳಿಗೆ ಮಾತು ಕೊಟ್ಟವರು
ಉಳಿಯುವದಾದರೂ ಹೇಗೆ
ನನ್ನ ಬಳಿ ..
೧೨
ಸೂರ್ಯ ಬರುತ್ತಿರುವ ಹಾಗೆ
ಎಲ್ಲ ದೀಪಗಳು
ಆರುವವು ಎಂದಲ್ಲ ..
ಸೂರ್ಯನ ಬೆಳಕು
ಎಷ್ಟಿದ್ದರೂ
ಸಾಲದಾಯಿತೇನೋ
ಸ್ಮಶಾನದ ದೀಪ
ಆರದೇ ಉಳಿಯುವುದು ...!
-ಅನಾಮಿಕ

ಕವಿತೆ


ಪಾದಗಳ ರಕ್ಷೆಯಾದ
ಚಪ್ಪಲಿ
ಕಾಲಲ್ಲಿದ್ದಾಗ ಹೇಗಿತ್ತೋ
ಕೈಗೆ ಬಂದಾಗಲೂ
ಹಾಗೆ ಇತ್ತು ;
ಕೈ -ಕಾಲು ಇರುವ
ಮನುಷ್ಯನ
ಕಲ್ಪನೆಯ ಅಪಮಾನದ
ಕಳಂಕ
ಚಪ್ಪಲಿಗೆ ಮೆತ್ತಿದ ಮೇಲೆ
ಚಪ್ಪಲಿಯಾಗಿ ಉಳಿಯದೆ
ಗಾಳಿಯಲಿ ತೂರಾಡಿತು

ಮನುಕುಲದ ಚರಿತ್ರೆ
ಹೀಗೇನೆ ;
ಯಾರದೋ ಕಲ್ಪನೆ ಗಾಳಿಯಲಿ ಇನ್ನ್ಯಾರದೋ ತೂರಾಟ
ಅಷ್ಟೇ ..!

-ಅನಾಮಿಕ

ಹನಿ... ಹನಿ...



ನಿನ್ನ ಕಾಲು ನೋವಿನ ಸುದ್ದಿ ಈಗಷ್ಟೆ ತಲುಪಿತು
ನಿನ್ನೆ ರಾತ್ರಿ ನನ್ನ ಕನಸಿನಲ್ಲಿ ನೀನು ಅಷ್ಟು ಓಡಾಡಬಾರದಿತ್ತು

ಇದೆಂಥ
ನೋಟ ಗೊತ್ತಿಲ್ಲ
ಇರುಳಿನಲಿ ಚಂದ್ರನ
ಕಂಡು
ಲೋಕ ಬೆಳಗಿನಲಿ
ಹಬ್ಬ ಆಚರಿಸುತ್ತಿದೆ
ಅದಕ್ಕೆಂದೇ
ಕರುಣಾಳು ಹಗಲು
ಕನಸ ಬಿಟ್ಟು ಬಂದವರಿಗೆ
ರೊಟ್ಟಿ ಕೊಡುತ್ತಿದೆ

ಬೆಳಕು
ಕಣ್ಣು ತೆರೆಯಿಸಿದೆಂದರು ;
ಎದ್ದು ನೋಡಿದೆ
ಬೆಳಗಿನಲಿ ಮರಕ್ಕೆ ಜೋತು ಬಿದ್ದಿತ್ತು
ಬೆಳಕು ಕುರುಡಾಗಿಸಿದ
ಕನ್ಕಪ್ಪಡಿ ..!

- ಅನಾಮಿಕ

ಮೂರು ಹನಿ



ಬೆಳಗಾಯಿತು ;
ನನ್ನದಷ್ಟೇಯಲ್ಲ
ಲೋಕದ ಎಲ್ಲ
ಗಾಯಗಳು
ಬೀದಿ ತಲುಪಿದವು

ಎಷ್ಟು ನಿರಾಳವಾಗಿ ರೆಕ್ಕೆ ಬಿಚ್ಚಿದೆ
ಕನ್ಕಪ್ಪಡಿ ಇರುಳಿನಲ್ಲಿ ;
ಏನೂ ಕಾಣುವುದಿಲ್ಲವೆಂದು ಈಗಲೂ ಇರುಳನ್ನೇಕೆ
ದೂರುತ್ತಿ ..

ನಿನ್ನ ನಾಜೂಕು ಬೆರಳುಗಳಿಂದ
ನನ್ನ ಹೆಸರನ್ನ ಎದೆಯ ಮೇಲೆ ಬರೆಯಿಸಿಕೊಳ್ಳುವ
ಆಸೆ ಇನ್ನೂ ಇತ್ತು
ಬದುಕು ನಿನ್ನೆ ದಿನ
ನನ್ನ ಬೆರಳುಗಳಿಂದ ನಿನ್ನ ಹೆಸರನ್ನ
ನಿನ್ನ ಸಮಾದಿಯ ಮೇಲೆ
ಬರಿಯಿಸಿತು ....

- ಅನಾಮಿಕ

ಇಳಿಸಂಜೆ ಹೊತ್ತು




ನೆರೆಗೂದಲು
ಬೆಳಕಿಗೆ ಹೊಳೆವಾಗ
ಎಲ್ಲ ಸಾಕೆನಿಸಿ
ಇಳಿಸಂಜೆ ಹೊತ್ತು
ಕಣ್ಮುಚ್ಚಿ ಕುಳಿತ ಜೀವವೇ
ತೆರೆ ಕಣ್ಣು
ಹೊರಗಿನ ಬೆಳಕು
ಹೊರಗಡೆಯೇ ಉಳಿದಿದೆ

ಎಲ್ಲ ದಾಟಿ ಬಂದ ಮೇಲೆ
ನಿನಗಿರುವ ಹಾಗೆ
ನನಗೂ ಉಳಿಯಲಿ
ಒಲವುಯಿತ್ತವರನ್ನೇ ಎಣಿಯಾಗಿಸದ
ನೆಮ್ಮದಿ
ಇರುವಷ್ಟೇ ಹಾಸುಗೆಯಲ್ಲಿ
ಕಣ್ಮುಚ್ಚುವ ತಾಳ್ಮೆ
ನಡೆದ ಹಾದಿಯ ಬಗ್ಗೆ
ಹಿಡಿಯಷ್ಟು ಹೆಮ್ಮೆ

ಕಣ್ಮುಚ್ಚಿ ಕುಳಿತ ಜೀವವೇ
ತೆರೆ ಕಣ್ಣು
ಹೊರಗಿನ ಬೆಳಕು
ಹೊರಗಡೆಯೇ ಉಳಿದಿದೆ

- ಅನಾಮಿಕ

ಶನಿವಾರ, ಆಗಸ್ಟ್ 27, 2011

ಒಂಟಿತನ..



- ಎಂ. ಎಸ್. ರುದ್ರೇಶ್ವರಸ್ವಾಮಿ.
ಒಂಟಿತನ
ಅವಳೀಗ ಬೆಳಕಿಗೆ ಮುಖ-
ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದಾಳೆ.
ಬೆಳಕೆಂದರೆ ಅವಳಿಗೆ ಭಯ
ಸಾಕೆನಿಸಿದೆ ಅವಳಿಗೆ ಬೆಳಕಿನ
ಸದ್ದು ಸಂಭ್ರಮ ಹೊಸಹುಟ್ಟು
ಅವಳ ಪಾಡು ಅವಳಿಗೆ.
ಯಾರಿಗೂ ಬೇಕಿಲ್ಲದ
ನಡುಪ್ರಾಯದ ಅವಳಿಗೆ
ನಡುಕ, ಕದ್ದುಮುಚ್ಚಿ ಬೆಳಕು
ಒಳಗೆ ಬರಬಹುದೆಂದು. ಅದಕ್ಕೆ
ಅವಳೀಗ ಕಿಟಕಿ ಬಾಗಿಲು
ಮುಚ್ಚಿಟ್ಟಿರುತ್ತಾಳೆ. ರಾತ್ರಿಯ
ಮಾತು ಬೇರೆ. ದೂರದ ನಕ್ಷತ್ರ
ಕಟ್ಟುವುದು ಕಷ್ಟ ಸಂಬಂಧ.
ಕತ್ತಲ ಜೊತೆ ಮಾತಿಲ್ಲದ
ಸಂವಾದ ನಡೆಸುತ್ತಾಳೆ. ಕತ್ತಲು
ಅವ್ವನಂತೆ, ತಣ್ಣನೆಯ ಪ್ರೀತಿ.
ತೊಡೆ ಮೇಲೆ ತಲೆ ಇಟ್ಟು,
ಮಲಗುತ್ತಾಳೆ. ಒಂಟಿತನದ
ಕಣ್ಣೀರು, ನಸಕು ಹರಿಯುವ
ತುಸು ಮುಂಚೆ, ಮುಗ್ಢತೆ
ಪರಿಶುದ್ಧತೆಯ ಪಾರಿಜಾತ-
ಹೂವಾಗಿ ಚೆಲ್ಲಿದೆ ಗಿಡ-
ದಡಿಯಲ್ಲಿ ಘಮ ಘಮಿಸುವ
ಪರಿಮಳ.
ಯಾರಿಗೂ ಸೇರದೆ
ಎಲ್ಲವೂ ತನ್ನೊಳಗಿದ್ದಂತೆ

ಸೋಮವಾರ, ಆಗಸ್ಟ್ 22, 2011

ನಾನು ನಿನ್ನನ್ನು ಮತ್ತೆ ಬಂದು ಸೇರುತ್ತೇನೆ……..

ಅಮೃತಾ ಪ್ರೀತಂ
ಮೂಲ ಪಂಜಾಬಿ;
ಇಂಗ್ಲೀಷಿಗೆ: ನಿರುಪಮಾ ದತ್ತ
ಕನ್ನಡಕ್ಕೆ: ಉದಯ್ ಇಟಗಿ
(ಕವಯತ್ರಿ ಅಮೃತಾ ಪ್ರೀತಂ ಕಾಯಿಲೆಯಿಂದ ಹಾಸಿಗೆ ಹಿಡಿದಾಗ ತನ್ನ ಪತಿ ಇಮ್ರೋಜ್ ಗೋಸ್ಕರ ಈ ಕವನ ಬರೆದಿದ್ದು. ಇಮ್ರೋಜ್ ಒಬ್ಬ ಚಿತ್ರಕಲಾವಿದನಾಗಿದ್ದ.)
-
ನಾನು ನಿನ್ನನ್ನು ಮತ್ತೆ ಬಂದು ಸೇರುತ್ತೇನೆ
ಎಲ್ಲಿ ಮತ್ತು ಹೇಗೆ? – ನನಗೆ ಗೊತ್ತಿಲ್ಲ.
ಬಹುಶಃ, ನಾನು ನೀನು ಬಿಡಿಸುವ ಚಿತ್ರಕ್ಕೆ
ಕಲ್ಪನೆಯ ವಸ್ತುವಾಗಬಹುದು.
ಅಥವಾ ನಿನ್ನ ಕ್ಯಾನ್‍ವಾಸ್ ಮೇಲೆ
ನೀನೆ ಬಿಡಿಸಿಟ್ಟ ನಿಗೂಢ ಗೆರೆಗಳೆಲ್ಲೆಲ್ಲೋ ಅಡಗಿಕೊಂಡು
ನಿಧಾನವಾಗಿ ಕ್ಯಾನ್‍ವಾಸ್ ತುಂಬಾ ಹರಡಿಕೊಂಡು
ನಿನ್ನನ್ನೇ ದಿಟ್ಟಿಸಿ ನೋಡುತ್ತಾ ಕುಳಿತುಕೊಳ್ಳಬಹುದು.
ಪ್ರಾಯಶಃ, ನಾನೊಂದು ಸೂರ್ಯ ರಶ್ಮಿಯಾಗಿ
ನಿನ್ನ ಬಣ್ಣಗಳ ಆಲಿಂಗನದಲ್ಲಿ ಕಳೆದುಹೋಗಬಹುದು.
ಇಲ್ಲವೇ ನಿನ್ನ ಕ್ಯಾನ್‍ವಾಸ್ ಮೇಲೆ
ನಾನೇ ಬಣ್ಣ ಬಳಿದುಕೊಂಡು
ಒಂದು ಚಿತ್ರವಾಗಿ ಮೂಡಬಹುದು.
ಒಟ್ಟಿನಲ್ಲಿ ಖಂಡಿತ ನಿನ್ನ ಸಂಧಿಸುತ್ತೇನೆ
ಆದರೆ ಹೇಗೆ ಮತ್ತು ಎಲ್ಲಿ? – ನನಗೆ ಗೊತ್ತಿಲ್ಲ.
ಬಹುಶಃ, ನಾನೊಂದು ನೀರಿನ ಬುಗ್ಗೆಯಾಗಬಹುದು.
ಬುಗ್ಗೆಯಾಗಿ ಅದರಿಂದ ಉಕ್ಕುವ
ನೊರೆನೊರೆ ನೀರಿನ ಹನಿಗಳನ್ನು
ನಿನ್ನ ಎದೆಯ ಮೇಲೆ ಚಿಮುಕಿಸಿ ಉಜ್ಜುತ್ತೇನೆ.
ಉಜ್ಜುತ್ತಾ ಉಜ್ಜುತ್ತಾ ನಿನ್ನನ್ನು ನನ್ನೆದೆಗೆ ಒತ್ತಿಕೊಂಡು ಮುತ್ತಿಡುತ್ತೇನೆ
ನನಗೆ ಇದು ಬಿಟ್ಟರೆ ಬೇರೇನೂ ಗೊತ್ತಿಲ್ಲ
ಏನಾದರಾಗಲಿ, ನಾನು ನಿನ್ನೊಂದಿಗಿರುತ್ತೇನೆ.
ಈ ದೇಹ ಹೋದರೆ
ಎಲ್ಲವೂ ಹೋದಂತೆ.
ಆದರೆ ಅದರೊಂದಿಗೆ ಹೆಣೆದುಕೊಂಡ
ನೆನಪಿನ ದಾರದುಂಡೆಗಳು
ಮತ್ತೆ ಎಳೆ ಎಳೆಯಾಗಿ ಬಿಚ್ಚಿಕೊಳ್ಳತೊಡಗುತ್ತವೆ.
ನಾನು ಆ ಎಳೆಗಳನ್ನೆ ಹಿಡಿದುಕೊಂಡು
ಮತ್ತೆ ದಾರದುಂಡೆಗಳನ್ನಾಗಿ ಸುತ್ತುತ್ತೇನೆ.
ಸುತ್ತುತ್ತಾ ಸುತ್ತುತ್ತಾ ಅಲ್ಲಿ ನಿನ್ನ ಕಾಣುತ್ತೇನೆ.
ಆ ಮೂಲಕ ಮತ್ತೆ ನಿನ್ನನ್ನು ಬಂದು ಸೆರುತ್ತೇನೆ..

ಹನಿಗಳು




ಬೆಳಗಾಯಿತೆಂಬ
ಸಂಭ್ರಮ
ಕತ್ತಲಲ್ಲಿ ಬೆಳಕಾದ
ಹಣತೆಗಳ ಆರಿಸುವುದು ..!

ಹೂ
ಗಿಡದಿಂದ
ಉದುರಿಬಿದ್ದರೇನಾಯ್ತು .../
ಗಾಳಿ ಹೊತ್ತೊಯ್ದ
ಗಂಧದಲಿ ಬದುಕುವುದು ..!

ಕಣ್ಣೆದುರಿನ ಕತ್ತಲನು
ಇಂಚಿಂಚಾಗಿ ನುಂಗದೆ
ಬೆಳಕಾಗಲು ಬರದು ...
ಆ ಸೂರ್ಯ
ಕಲಿತ ಪಾಠ
ಇಷ್ಟೇ ..!

ಇಳಿಬಿದ್ದ ಬೇರುಗಳೇ
ಗಟ್ಟಿ ಇರಲಿಲ್ಲ
ಆದರೂ ನಿನಗಿರುವುದು
ಗಾಳಿಯ ಮೇಲಷ್ಟೇ ಅಪಾದನೆ ..!

ಕತ್ತಲಾಗದಿದ್ದರೆ
ಏನಾಗುತ್ತಿತ್ತು ..?
ಏನಿಲ್ಲ
ಬೆಳಕು ಅಗ್ಗವಾಗಿಯೇ
ಉಳಿದು ಹೋಗುತ್ತಿತ್ತು

ನಿನ್ನ ಹಾಗೆ
ಮುಗಿಲು ಕಣ್ಣು
ತೆರೆಯಿತು
ಹೊರಗೂ ಬೆಳಕಾಯಿತು ...!

ಹಗಲಿಡೀ
ಎಷ್ಟೊಂದು ಬೆಳಕಿತ್ತು
ಆದರೇನು ...?
ಬಗ್ಗಿ ಒಂದಿಷ್ಟನ್ನೂ
ಎತ್ತಿಕೊಳ್ಳಲಾಗದು ...!

ನಿನಗೆ
ಹಗಲು ತೊಡಿಸಿದ
ಬಟ್ಟೆಗಳನು
ಇರುಳು ಬಿಚ್ಚಿಡಿಸಿತು
ಬೆಳಕು ಮಾತ್ರ
ಹಾಗೇ ಉಳಿಯಿತು ..!

ನೀನು ಕಣ್ಣು
ತೆರೆದರಷ್ಟೇ ಬೆಳಕು
ಆರಂಭದ ಪಾಠದ
ಅಕ್ಷರಗಳು
ಹೆಚ್ಚೆನಿರುವುದಿಲ್ಲ ...!
೧೦
ನೀ
ಒಳಗಿರುವಷ್ಟು ಹೊತ್ತು
ಬೆಳಕು
ಅನಾದಿಯೇ ...!
೧೧
ಕತ್ತಲೆಯಿದ್ದರೆ
ಸೂರ್ಯನಿದ್ದು ಹೋದ ಮನೆಯಲ್ಲಿ
ಮಿಂಚು ಹುಳುವೂ
ಗುರ್ತಿಸಲ್ಪಡುವುದು...!
೧೨
ಬೆಳಕಲ್ಲ
ಕತ್ತಲು
ಹಣತೆ ಹಚ್ಚುವುದ
ಕಲಿಸಿತು ...!
೧೩
ಕತ್ತಲಾಯಿತೆಂದೇ
ಹಣತೆಯಾಗುವ ಅವಕಾಶ
ಕೆಲವರಿಗಾದರೂ ಸಿಕ್ಕಿತು ..!

-ಅನಾಮಿಕc


ಬೆಳಗಾಯಿತೆಂಬ
ಸಂಭ್ರಮ
ಕತ್ತಲಲ್ಲಿ ಬೆಳಕಾದ
ಹಣತೆಗಳ ಆರಿಸುವುದು ..!

ಹೂ
ಗಿಡದಿಂದ
ಉದುರಿಬಿದ್ದರೇನಾಯ್ತು .../
ಗಾಳಿ ಹೊತ್ತೊಯ್ದ
ಗಂಧದಲಿ ಬದುಕುವುದು ..!

ಕಣ್ಣೆದುರಿನ ಕತ್ತಲನು
ಇಂಚಿಂಚಾಗಿ ನುಂಗದೆ
ಬೆಳಕಾಗಲು ಬರದು ...
ಆ ಸೂರ್ಯ
ಕಲಿತ ಪಾಠ
ಇಷ್ಟೇ ..!

ಇಳಿಬಿದ್ದ ಬೇರುಗಳೇ
ಗಟ್ಟಿ ಇರಲಿಲ್ಲ
ಆದರೂ ನಿನಗಿರುವುದು
ಗಾಳಿಯ ಮೇಲಷ್ಟೇ ಅಪಾದನೆ ..!

ಕತ್ತಲಾಗದಿದ್ದರೆ
ಏನಾಗುತ್ತಿತ್ತು ..?
ಏನಿಲ್ಲ
ಬೆಳಕು ಅಗ್ಗವಾಗಿಯೇ
ಉಳಿದು ಹೋಗುತ್ತಿತ್ತು

ನಿನ್ನ ಹಾಗೆ
ಮುಗಿಲು ಕಣ್ಣು
ತೆರೆಯಿತು
ಹೊರಗೂ ಬೆಳಕಾಯಿತು ...!

ಹಗಲಿಡೀ
ಎಷ್ಟೊಂದು ಬೆಳಕಿತ್ತು
ಆದರೇನು ...?
ಬಗ್ಗಿ ಒಂದಿಷ್ಟನ್ನೂ
ಎತ್ತಿಕೊಳ್ಳಲಾಗದು ...!

ನಿನಗೆ
ಹಗಲು ತೊಡಿಸಿದ
ಬಟ್ಟೆಗಳನು
ಇರುಳು ಬಿಚ್ಚಿಡಿಸಿತು
ಬೆಳಕು ಮಾತ್ರ
ಹಾಗೇ ಉಳಿಯಿತು ..!

ನೀನು ಕಣ್ಣು
ತೆರೆದರಷ್ಟೇ ಬೆಳಕು
ಆರಂಭದ ಪಾಠದ
ಅಕ್ಷರಗಳು
ಹೆಚ್ಚೆನಿರುವುದಿಲ್ಲ ...!
೧೦
ನೀ
ಒಳಗಿರುವಷ್ಟು ಹೊತ್ತು
ಬೆಳಕು
ಅನಾದಿಯೇ ...!
೧೧
ಕತ್ತಲೆಯಿದ್ದರೆ
ಸೂರ್ಯನಿದ್ದು ಹೋದ ಮನೆಯಲ್ಲಿ
ಮಿಂಚು ಹುಳುವೂ
ಗುರ್ತಿಸಲ್ಪಡುವುದು...!
೧೨
ಬೆಳಕಲ್ಲ
ಕತ್ತಲು
ಹಣತೆ ಹಚ್ಚುವುದ
ಕಲಿಸಿತು ...!
೧೩
ಕತ್ತಲಾಯಿತೆಂದೇ
ಹಣತೆಯಾಗುವ ಅವಕಾಶ
ಕೆಲವರಿಗಾದರೂ ಸಿಕ್ಕಿತು ..!

-ಅನಾಮಿಕ

ಶನಿವಾರ, ಆಗಸ್ಟ್ 20, 2011

ಕವಿ ಗುಲ್ಜಾರ್...



 ುಲ್ಜಾರ್ ಕವಿತೆ ನನಗೆ ತುಂಬಾ ಇಷ್ಟ. ಅದೆಂತಹ ಕಲ್ಪನೆ. ಅದೆಂತಹ ಪ್ರಸ್ತುತಿ. ಒಂದೇ ಕವಿತೆ ಕೇಳಿದ್ರೆಸಾಕು..ಗುಲ್ವಾರ್ ಮನಕ್ಕಿಳಿದು ಬಿಡುತ್ತಾರೆ.

ವಯಸ್ಸು ಅದೆಷ್ಟೋ ಆದ್ರೂ ಕವಿತೆ ಉಗಮಿಸೋ ಮನಸ್ಸು ಇನ್ನು ಜವಾನ್ ಹೈ...ಇನ್ನ ಸ್ಪಷ್ಟ ದೃಷ್ಟಿಕೋನ ಇಟ್ಟುಕೊಂಡಿದೆ ಹೊಸ ಪ್ರಯೋಗಗಳಿಗೆ ತೆರೆದು ಕೊಳ್ಳುತ್ತದೆ.


ಕವಿ
ಗುಲ್ಜಾರ್ ಆಗಿನಿಂದಲೂ ಬರೀತಾ ಇದ್ದಾರೆ. ಈಗಲೂ ಗುಲ್ಜಾರ್ ಉತ್ಸಾಹ ನಿಲ್ಲುವ ನಿಶಾನೆ ತೋರುತ್ತಿಲ್ಲ. ಸಾಗುತ್ತಲ್ಲೇ ಇದೆ ಭಾವಾಲೋಕದಲ್ಲಿ...


ಗುಲ್ಜಾರ್
ಕವಿತೆ ಇತ್ತೀಚಿನ ಇಸ್ಕಕೀಯಾ ಸಿನಿಮಾದಲ್ಲೂ ಇದ್ದವು.`ದಿಲ್ ಥೋ ಬಚ್ಚಾ ಹೈ ಜೀ' ಅಂತಲೇ ವಯಸ್ಸಿನಲ್ಲೂ ಚಂಚಲ ಮನದ ಮಸ್ತಿ ಬರೆದಿದ್ರು. ದಿಲ್ ಸಾ ಕೋಯಿ ಕಮೀನಾ ನಹೀ ಅಂದವರೂ ಇದೇ ಗುಲ್ಜಾರ್...


ಇದೇನೋ ಸಿನಿಮಾ ಮಾತಾಯಿತು. ತೆರೆ ಹಿಂದೆ ಗುಲ್ಜಾರ್ ಕವಿತಾ ಪ್ರೀಯರು ಸಾಕಷ್ಟು ಜನ. ಅದಕ್ಕೋ ಏನೋ...ಯು ಟ್ಯೂಬ್ ನಲ್ಲಿ ಗುಲ್ಚಾರ್ ಪೊಯೆಟ್ರಿ ಅಂತ ಬರೆದು ಕೀ ಬೋರ್ಡ್ ಎಂಟರ್ ಕೀ ಹೊಡೆದ್ರೆ ಆಯಿತು. ಸಾಲು..ಸಾಲು ಗುಲ್ಚಾರ್ ಕವಿತೆಗಳು ಸಿಗುತ್ತವೆ. ಅವರೇ ಹೇಳಿದ ಕವಿತೆ ಒಂದಷ್ಟು ತುಣುಕು ಇಲ್ಲಿವೆ...ಅವುಗಳನ್ನ ತರ್ಜುಮೆ ಮಾಡೋ ಪುಟ್ಟ ಪ್ರಯತ್ನ ಮಾಡಿದ್ದೇನೆ..


ನೀ ಧರೆಗಿಳಿಸಿದ ದಿನ

ತೋಟದಲ್ಲಿ ಈಗಲೂ

ಖಾಯಂ ಆಗಿದೆ...


ರಂಗು
ಮಾಸಿಲ್ಲ..

ದಿನವೂ ಕೆಟ್ಟು ಹೋಗಿಲ್ಲ.

ನೀ ಬಿಟ್ಟು ಹೊದಂತೇನೆ ಇದೆ.

ಇಲ್ಲಿ
ಬರೋ ಅಳಿಲಿಗೆ

ಈಗೀಗ ನಾನೂ ನಿನ್ನಂತೆ

ಬಿಸ್ಕತ್ ತಿನಿಸುತ್ತೇನೆ...

ಆದ್ರೂ, ಅಳಿಲು ನನ್ನ

ಅನುಮಾನಿಸುತ್ತವೆ.

ಅವು ನಿನ್ನ ಇನ್ನು

ಮರೆತಿಲ್ಲವೋ ಏನೊ..


ದಿನದ
ಸ್ಕಾರ್ಪ್ ತೆಗೆದು

ಹಾಕುತ್ತೇನೆ. ನೀ ಬಿಟ್ಟು

ದಿನದ ನೆನಪನ್ನು ಧರಿಸಿ

ಕೊಂಡು ಜೀವಿಸುತ್ತೇನೆ....
ಜೀವಿಸುತ್ತಿದ್ದೇನೆ....


ಇಂತಹ
ಕವಿತೆಗಳು ಹಲವು ಇವೆ. ಒಂದಕ್ಕಿಂತ ಒಂದು ವಿನೂತನ. ಭಾವ ಪರವಶರಾಗುವ ಮನಸಿದ್ದರೆ ಆಯಿತು. ಕವಿ ಗುಲ್ಚಾರ ಕವನಗಳು ಮೈ..ಮನ ಆವರಿಸಿಕೊಳ್ಳುತ್ತವೆ. ಹೊಸ ಉತ್ಸಾಹ...ಹೊಸ ಹುಮ್ಮಸ್ಸು ಮೂಡುತ್ತದೆ...ಅದಕ್ಕೇ ಗುಲ್ಜಾರ್ ಹೇಳಿರಬೇಕು... ನೋವು....ಬಹಳ ದಿನದ್ದಲ್ಲ ಅಂತ...ಹೌದು..! ಕವಿತೆಯೊಂದರ ಸಾಲುಗಳಲ್ಲಿ ಗುಲ್ಚಾರ ಮಾತು ಹೇಳಿದ್ದಾರೆ. ಅದರ ತಾತ್ಪರ್ಯ ಥರ ಇದೆ...


ನೋವು ಕೆಲವೇ ಕ್ಷಣದ್ದು..

ಅದಕ್ಕೆ ಅಷ್ಟೊಂದು ಶಕ್ತಿಯಿಲ್ಲವೇ ಇಲ್ಲ...

ಬಂದು ಹೋಗುತ್ತದೆ..ಬಂದು ಕಾಡುತ್ತದೆ

ಅಷ್ಟೆ. ಚಿಂತಿಸಬೇಕಿಲ್ಲ ಅಂತಾರೆ...


ಥರ ಗುಲ್ಚಾರ್ ಕವಿತೆಗಳಿಂದ ಕಾಡುತ್ತಾರೆ. ವಿಶಿಷ್ಟ ಕಂಚಿನ ಕಂಠದಿಂದ ಆಕರ್ಷಿಸುತ್ತಾರೆ. ಅದೆಷ್ಟೋ ಜನಕ್ಕೆ ಗುಲ್ಚಾರ್ ಚಿರಪರಚಿತ. ನನಗೆ ಈಗಷ್ಟೆ ಮನದಲ್ಲಿ ಇಳಿದಿದ್ದಾರೆ...


-ರೇವನ್

ಬರುವಿರಾ, ಹಳೆಯ ಹೆಜ್ಜೆಗಳು ಕರೆದಾಗ...



ಬಿಟ್ಟು ಹೋದ ಹೆಜ್ಜೆಗಳನು ಮತ್ತೆ ಹೆಕ್ಕಲು ಬಂದಾಗ

ಬಿತ್ತಿದ ಬೀಜ ಮರವಾಗಿತ್ತು 
ಮರದ ನೆರಳಲಿ ಹೆಜ್ಜೆಗಳು ಮರೆಯಾಗಿ
ಕಲ್ಲಿನ ಶಿಖರವಾಗಿತ್ತು

ಎಲ್ಲೆಲ್ಲೋ ಅಲೆದು ಏನೇನೋ ಅಳೆದು
ಮುಷ್ಟಿಯೊಳಗಿನ ಮುತ್ತನು ಹಿಡಿದುಕೊಂಡು
ಬಿಟ್ಟು ಹೋದ ಹೆಜ್ಜೆಗಳ ಕಾಲುಗಳಿಗೆ 
ಗೆಜ್ಜೆ ಕಟ್ಟಿ ಕುಣಿಯಲೆಂದು ಬಂದರೆ

ಅಲ್ಲಿ ಪಾರ್ತಿಸುಬ್ಬನ ಪದ್ಯಗಳನು
ಯೂ ಟ್ಯೂಬ್ ನೊಳಗಿಟ್ಟ 
ಭಾಗವತರ ಬೋಳು ಮಂಡೆಗೆ ಮುಂಡಾಸು ಏರಿದೆ
ಕತ್ರಿನಾಳ ಶೀಲಾ ಕಿ ಜವಾನಿಯ ನೆನಪಲ್ಲಿ

ಇನ್ನೊಮ್ಮೆ ಸಿಗುವೆ ಎಂದು ವಾಗ್ದಾನ ನೀಡಿದ
ಮಾವಿನ ಮರದ ಕರುಳ ನೆರಳು 
ಬಟಾ ಬಯಲಾಗಿದೆ ಅಂತಸ್ತುಗಳನು ಲೆಕ್ಕ ಹಾಕುತ್ತಾ
ಬಾನೆತ್ತರ ಎದ್ದು ನಿಂತ ಮಹಾ ಮಹಡಿಗಳೊಳಗೆ

ಮುದ್ದುಕಂಗಳ ಮುಗ್ದೆಯ ತುಟಿಯಂಚಿನ ಸಣ್ಣ
ಸ್ಪರ್ಶಕೆ ಮರೆತು ಹೋದ ತರಗತಿಯ ಪಾಠಗಳು
ವಾರನ್ ಬಫೆಟ್‍ನ ಉಪನ್ಯಾಸದ ಸೀ.ಡಿ.ಗಳಲಿ
ಷೇರು ಮಾರುಕಟ್ಟೆಯ ವ್ಯವಹಾರದ ಪಂಚಾಂಗವನು ಹಾಕಿದೆ


ಜಾರಿ ಬಿದ್ದು ಗುರುತಿಗೊಂದು ಶಾಶ್ವತ ಕಳೆಯನು 
ಕೊಟ್ಟ ಬಯಲ ಕಲ್ಲು
ಕರಗಿ ಹೋಗಿದೆಯೋ, ಉರುಳಿ ಹೋಗಿದೆಯೋ
ಅಲ್ಲ ಅಂಚಿನೊಳಗಿನ ಮಸಣದ ಗೋರಿಗೆ ಆಸರೆಯಾಗಿದೆಯೋ


ಮತ್ತೆ ಹೆಕ್ಕಲು ಬಂದಾಗ ಆ ಹಳೆಯ  ಹೆಜ್ಜೆಗಳೇನಾದರೂ
ಕರಿಬೂಟಿಗೆ ತಗುಲಿ ಅಪ್ಪಾ ಎಂದು ಕರೆದರೆ
ಹೆಗಲ ಮೇಲಿನ ಚೀಲದೊಳಗೆ ತುಂಬಲು, ಗೆಳೆಯರೇ
ನೀವ್ಯಾರಾದರೂ ಹೊರಟು ಬರುವಿರಾ 

ಅಂತಸ್ತಿನ ಕಟ್ಟಡದ ಮೂವತ್ತನೇ ಮಹಡಿಯಿಂದ
ಸುಂದರ ಸಂಜೆಯನೂ ನುಂಗಿದ ಮಧ್ಯಾಹ್ನದ ಮೀಟಿಂಗ್‍ನಿಂದ
ಒಂದೊಂದಿಂಚೂ ಮುಂದುವರಿಯದ ಮಾರ್ಗದೊಳಗಿನ ದಟ್ಟಣೆಯಿಂದ
ಸ್ಥಿತಿಯನು ವಿಸ್ತರಿಸುವ ಫೇಸ್‍ಬುಕ್ಕಿನ ಸ್ಟೇಟಸ್‍ನಿಂದ.

ಬಾನಾಡಿ

ಮಂಗಳವಾರ, ಆಗಸ್ಟ್ 16, 2011

ನಾವು ಕಂಡೇ ಕಾಣುತ್ತೇವೆ...

 

ಕಾಲದ ಅನಂತತೆಯ ಸ್ಲೇಟಿನ ಮೇಲೆ
ಬರೆದ ಶಾಶ್ವತ ಸತ್ಯಶಾಸನ ನಿಜವಾಗುವುದ
ನಾವು ಕಂಡೇ ಕಾಣುತ್ತೇವೆ...

ನಿರಂಕುಶ ಪ್ರಭುತ್ವದ ಅಪರಿಮಿತ ಮಹಾಪರ್ವತ
ರೌದಿಯಾಗಿ ಹಾರಾಡುವುದನ್ನು,
ಪ್ರಭುಗಳ ನೆತ್ತಿ ಮೇಲೆ ಸಿಡಿಲು ಅಪ್ಪಳಿಸುವುದನ್ನು
ನಾವು ಕಂಡೇ ಕಾಣುತ್ತೇವೆ...

ಎಲ್ಲ ಕಿರೀಟಗಳು, ಮುಕುಟಮಣಿಗಳು ಕಿತ್ತೆಸೆಯಲ್ಪಡುವುದನ್ನು,
ದರ್ಪದ ಸಿಂಹಾಸನಗಳೆಲ್ಲ ಸಮಾಧಿ ಸೇರುವುದನ್ನು
ನಾವು ಕಂಡೇ ಕಾಣುತ್ತೇವೆ...

ಸುಳ್ಳಾಡುವ ಮುಸುಡಿಗಳು ಮರೆಯಾಗಿ
ನಮ್ಮಂಥ ನಿರ್ಲಕ್ಷಿತ ಜೀವಂತ ಮುಖಗಳು
ನಿರಾಕರಿಸಲ್ಪಟ್ಟ ಗದ್ದುಗೆಗಳನೇರುವುದನ್ನು
ನಾವು ಕಂಡೇ ಕಾಣುತ್ತೇವೆ...

ನಾನೂ ಇರುವೆನಿಲ್ಲಿ, ನೀವೂ ಇರುವಿರಿ
ಇದೆಲ್ಲ ನಿಜವಾಗುವುದನ್ನು
ನಾವು ಕಂಡೇ ಕಾಣುತ್ತೇವೆ...

ಮೂಲ: ಫೈಜ್ ಅಹ್ಮದ್ ಫೈಜ್

ಕನ್ನಡಕ್ಕೆ: ದಿಲ್

ಸೋಮವಾರ, ಆಗಸ್ಟ್ 15, 2011

ಅಮೃತಾ ಪ್ರೀತಂ ಕವನ

ಮೈನೆ ಜಬ್ ತೆರಿ ಸೇಜ್
ಪರ್ ಪೈರ್ ರಖ್ಖಾ ಥಾ,
ಮೈ ಏಕ್ ನಹಿ ಥಿ, ದೊ ಥಿ.

ಏಕ್ ಸಮೂಚಿ ಬ್ಯಾಹಿ
ಔರ್ ಏಕ್ ಸಮೂಚಿ ಕಂವಾರಿ.
ತೆರಿ ಭೋಗ್ ಕಿ ಖಾತಿರ್
ಮುಝೆ ಉಸೆ ಕತ್ಲ್ ಕರ್ನಾ ಥಾ
ಮೈನೆ ಕತ್ಲ್ ಕಿಯಾ ಥಾ
ಪರ್ ಜ್ಯೂಂಹಿ ಮೈ ಶೀಶೇ ಕೆ
ಸಾಮನೆ ಆಯೀ,
ವಹ್ ಸಾಮನೆ ಖಡೀಥಿ
ವಹಿ ಜೊ ಅಪ್ನೆ ತರಫಸೆ ಮೈನೆ
ರಾತ್ ಕತ್ಲ್ ಕೀ ಥಿ
ಓ ಖುದಾಯಾ, ಕ್ಯಾ ಸೆಜ್ ಕಾ
ಅಂಧೇರಾ ಬಹುತ್ ಗಾಢಾ ಥಾ?
ಮುಝೇ ಕಿಸೇ ಕತ್ಲ ಕರನಾ ಥಾ
ಕಿಸೇ ಕತ್ಲ ಕರ್ ಭೈಠಿ.
ಕನ್ಯೆ
ಮೊದಲ ರಾತ್ರಿಯ ನಿನ್ನ ಮಧುಮಂಚಕೆ
ಬಂದಾಗ ನಾ ಒಬ್ಬಳಾಗಿರಲಿಲ್ಲ
ಎರಡಾಗಿದ್ದೆ.
ಒಬ್ಬ ಸಂಪೂರ್ಣ ವಿವಾಹಿತೆ
ಒಬ್ಬ ಸಂಪೂರ್ಣ ಕನ್ಯೆ.
ನಿನ್ನ ಭೋಗಕ್ಕಾಗಿ ನಾನು ಆಕೆಯನ್ನು
ಕೊಲ್ಲಬೇಕಿತ್ತು. ಕೊಂದೆ ಕೂಡಾ.
ಆದರೆ ನಾನು ಕನ್ನಡಿಯ
ಎದುರಿಸಿದಾಕ್ಷಣ
ಆಕೆ ಎದುರಿಗೆ ಬಂದಳು
ಅವಳೇ, ನಾನು ನಾನಾಗಿಯೇ
ರಾತ್ರಿ ಕೊಲೆಗೈದೆನಲ್ಲಾ ಅವಳೇ
ಓ ದೇವರೇ, ಮಧುಮಂಚದ ಕತ್ತಲು
ಅಷ್ಟು ದಟ್ಟವಾಗಿತ್ತೇ
ಯಾರ ಕೊಲೆ ಮಾಡಬೇಕಿತ್ತು ನಾನು
ಕೊಂದೆ ಯಾರನ್ನ?

ಅನುವಾದ  :  
-ಶ್ರೀಕಾಂತ್ ಪ್ರಭು

ಭಾನುವಾರ, ಆಗಸ್ಟ್ 14, 2011

You Are The One

 Shelley Reeder


Dreamer


Poem By: Shelley Reeder

ಶನಿವಾರ, ಆಗಸ್ಟ್ 13, 2011

ಹೂವಕಟ್ಟುವ ಕಾಯಕ



  • ಹೂವಕಟ್ಟುವ ಕಾಯಕ

    • ವೈದೇಹಿ 

    • ಅಬ್ಬಲಿಗೆ ಹಗುರಕ್ಕೆ ಸೇವಂತಿ ಜೊತೆ ಬೇಡ

      ಭಾರ ಜಗ್ಗಿ ಮಾಲೆ ತೂಕ ತಪ್ಪುತ್ತೆ

      ಆಚೆಗಿಡು ಅವುಗಳನು ಬೇರೆ ಕಟ್ಟು

      ಹೂವಾದರೇನು, ಒಂದನೊಂದು ಮರೆಸದ ಹಾಗೆ 

      ಆಯಬೇಕು ನೋಡು ಮೊತ್ತ ಮೊದಲು

      ಮಲ್ಲಿಗೆಯ ಜೊತೆಗೆ ಮಲ್ಲಿಗೆಯೆ ಸಮ ಕಣೆ

      ಇದ್ದರಿರಲಿ ಎರಡು ಪಚ್ಚೆಕದಿರು

      ದುಂಡುಮಲ್ಲಿಗೆ ಮರುಗ ಎಂದಿನಿಂದಲೂ ಒಂದು

      ಹೊಂದುವುದು ಜಾಜಿಯೂ ತಂಗಿಯಂತೆ

      ಕಾಕಡಾ ಮತ್ತು ಪಂಚಪತ್ರೆಯ ಜೋಡಿ

      ಮಾಲೆಯನು ಬಲುಬೇಗ ಉದ್ದ ಮಾಡಿ

      ಸ್ವಲ್ಪ ಹೂವಲೆ ದೊಡ್ಡ ಹಾರ ಕಟ್ಟಿದ ಲಾಭ

      ನೀಡುವುದು ಕಂಡೆಯ, ಸುಲಭದಲ್ಲಿ!

      ದಾಸವಾಳವೆ? ಇರಲಿ ಬಿಡಿಬಿಡೀ ಅದರಷ್ಟಕ್ಕೆ

      ಅರಳಿದರೆ ಬೇಕದಕೆ ಅಂಗೈಯಗಲ ಜಾಗ

      ಗುಲಾಬಿಗೋ ಕಟ್ಟಿದರೂ ಬಿಟ್ಟರೂ ಖೇರಿಲ್ಲ

      ಎಷ್ಟಂತಿ ಹಮ್ಮು, ಪಾಪ, ಮುಳ್ಳಿದ್ದರೂ!

      ಬಣ್ಣ ಬಣ್ಣದ ರತ್ನಗಂಧಿಯನು ಕೊಯ್ದು

      ತೊಟ್ಟುಗಳ ಹೆಣೆಯೋಣ ಕಡಿಯದಂತೆ

      ಸಂಜೆಮಲ್ಲಿಗೆ ವಿವಿಧ ಜುಟ್ಟುಜುಟ್ಟಿಗೆ ಗಂಟು

      ಕಸ್ತೂರಿತೆನೆಯ ಜೊತೆ ಕೇಪಳದ ಕೆಂಪು

      ಹಗ್ಗ ಹಂಗಿಲ್ಲದೆಯೆ ಹೆಣೆವ ಕ್ರಮವಿದೆ ಎಷ್ಟು

      ದಾರದಾಧಾರದಲೆ ಪೋಣಿಸುವವೆಷ್ಟು !

      ಕಟ್ಟಿದರೆ ಶಂಖಪುಷ್ಪ ನಿತ್ಯಪುಷ್ಪದಂಥವು

      ನಲುಗುವವು ಹಾn ಹೂ ಬುಟ್ಟಿಯಲ್ಲಿಡು, ಸ್ವಸ್ಥ

      ಇರಲಲ್ಲಿ ಅವು ಕಟ್ಟಿ ಅವುಗಳೊಳಗೇ ನಂಟು

      ನಮ್ಮದೇ ಮಾತು ಆಲಿಸುತ ನೋಡಿಲ್ಲಿ

      ಹೊತ್ತು ಹೋದದ್ದೇ ತಿಳಿಸದೆ

      ಕೈಯೊಳಗೆ ಕೈಯಿಟ್ಟು ಸಜಾjಗಿ ಶಿಸ್ತಾಗಿ

      ಮಾರುದ್ದ ಮಾಲೆಯಲಿ ಈ ಹೂಗಳು

      ಮೂರೆಳೆ ನಾಕೆಳೆ ಎರಡೆಳೆ ಒಂದೆಳೆ

      ದಾರ ಉದಾರ ಶೂನ್ಯಾಧಾರ ಸೂತ್ರದಲಿ

      ಯಾವ ಉದ್ದೇಶಕ್ಕೋ ಹೊರಟು ನಿಂತಿಹವು


      ಕಟ್ಟಿದ್ದು ನಾವು ಹೂವ ಮಾತ್ರವೆ ಏನು?

      ಕಲಿಸಿಲ್ಲವೆ ಅದು ಕಟ್ಟುವ ಪಾಠವನ್ನು

      ನಿತ್ಯವೂ ಹೊಸ ಹೂವು ನಿತ್ಯ ಹೊಸ ಕ್ಷಣದಂತೆ

      ನಿತ್ಯವೂ ಹೊಸ ಪಾಠ ಪುಟ ತೆರೆಯುವಂತೆ
      ಹೂ ಪತ್ರೆ ರಾಶಿಯಿದೆ ಕಟ್ಟೋಣ ಬಾ ಸಖೀ

      ಕರೆ ಅವಳನು ಅವನನೂ ಎಳೆಯರನೂ ಬೆಳೆಯರನೂ

      ಕಲಿಯೋಣ ಎಲ್ಲರೂ ಹೂವ ಕಟ್ಟುವುದನು

      ಕಟ್ಟುವ ಬಗೆ ಬಗೆಯ ಕಲೆ ಕಲಿಯೋಣ ಬಾ

      ಕಟ್ಟಿ ಮನದೇವರಿಗೆ ಸಲಿಸೋಣ ಬಾ

ಗದ್ದರ್ ಹಾಡು- ಪಾದದ ಮೇಲೆ ಹುಟ್ಟು ಮಚ್ಚೆಯಾಗಿ ತಂಗ್ಯಮ್ಮಾ…









ರಕ್ಷಾ ಬಂಧನ, ಬಹುಶ: ರಕ್ತ ಸಂಬಂಧಯಿಲ್ಲದೆಯೂ ಒಂದು ಕಮ್ಮನೆಯ ಅಕ್ಕ-ತಂಗಿ, ಅಣ್ಣ-ತಮ್ಮ೦ದಿರ ಪ್ರೀತಿಯನ್ನು ಎಂಥವರಿಗೂ ಮೊಗೆದು ಕೊಡಬಹುದಾದ ಹಬ್ಬ. ಮತ್ತು ರಾಖಿ ಹಬ್ಬದ ಕುರಿತು ಈಗಾಗಲೇ ಬೇರೆ ಬೇರೆ ಭಾಷಾ ಸಾಹಿತ್ಯದಲ್ಲಿ ಸಾಕಷ್ಟು ಬರೆಯಲಾಗಿದೆ. ಸಿನಿಮಾಗಳಲ್ಲಂತೂ ಎಕರೆಗಟ್ಟಲೆ ತೋರಿಸಲಾಗಿ ರಾಖಿ ಕಟ್ಟಿಸಿಕೊಂಡರೆ ಕಡ್ಡಾಯವಾಗಿ ಏನಾದರು ಗಿಫ್ಟ್ ಕೊಡಲೇಬೇಕೆಂಬ ಗೊತ್ತುವಳಿ ಒಂದು ಜಾರಿಯಾದಂತಿದೆ.
ಆದರೆ ದಶಕ ಹಿಂದೆ ತೆಲುಗುವಿನಲ್ಲಿ ಆರ್ ನಾರಾಯಣ ಮೂರ್ತಿ ನಿರ್ಮಿಸಿದ’ಓರಾಯ್ ರಿಕ್ಷಾ’ ಸಿನಿಮಾಕ್ಕೆ ಗದ್ದರ್ ಬರೆದ ‘ಮಲ್ಲೆ ತೀಗಕು ಪಂದಿರಿ ವೋಲೆ’ ಹಾಡು ಎಂಥ ಅಧ್ಬುತವಾಗಿ ಮೂಡಿ ಬಂದಿದೆ ಎಂದರೆ ಇವತ್ತಿಗೂ ರಕ್ಷಾ ಬಂಧನ ದಿವಸ ಆ ಹಾಡನ್ನು ಪ್ರಾರ್ಥನೆ ಗೀತೆ ಎಂಬಂತೆ ಜನ ಮತ್ತೆ ಮತ್ತೆ ಕೇಳುತ್ತಾರೆ.
ಒಬ್ಬ ಬಡ ರಿಕ್ಷಾ ತುಳಿಯುವ ಅಣ್ಣನ ನಿವೇದನೆ ಈ ಹಾಡು. ಜಾನಪದ ಸೊಗಡನ್ನು ಜನರ ಭಾಷೆಯಲ್ಲೇ ಹೆಣೆದು ಅವರನ್ನು ಎಚ್ಚರಗೊಳಿಸುವ ಅದೆಷ್ಟೋ ಗೀತೆ ರಚಿಸಿರುವ ಗದ್ದರ್ ಈ ಗೀತೆ ರಚನೆಗೆ ಆಂಧ್ರ ಪ್ರದೇಶದ ನಂದಿ ಅವಾರ್ಡ್ ಬಂದರು ಸ್ವೀಕರಿಸಲಿಲ್ಲ. ವಂದೇ ಮಾತರಂ ಶ್ರೀನಿವಾಸ್ ಹಾಡಿರುವ ಈ ಗೀತೆಯ ಭಾಷಾಂತರ ಇಲ್ಲಿದೆ.
ಕನ್ನಡಕ್ಕೆ : ರಮೇಶ ಅರೋಲಿ.

ಮಲ್ಲಿಗೆ ಬಳ್ಳಿಗೆ ಹಂದರ ವೋಲೆ
ಮಬ್ಬುಗತ್ತಲಲ್ಲಿ ಬೆಳದಿಂಗಳ ವೋಲೆ
ನಿನ್ನ ಪಾದದ ಮೇಲೆ ಹುಟ್ಟು ಮಚ್ಚೆಯಾಗಿ ತಂಗ್ಯಮ್ಮ
ಒಡ ಹುಟ್ಟಿದ ಋಣ ತೀರಿಸುವೆನೆ ತಂಗ್ಯಮ್ಮ
ಮೈನೆರೆದ ಮರು ಘಳಿಗೆಯಿಂದಲೆ
ಹೆಣ್ಣುಮಗು ಮೇಲೆ ಏಸೊಂದು ಎಣಿಕೆ
ಕಾಣುವುದೆಲ್ಲ ನೋಡದಿರೆ೦ದರು
ನಗುವ ಮಾತಿಗೂ ನಗಬೇಡೆ೦ದರು
ಅಂಥ ಅಣ್ಣ ನಾನಾಗಲಾರೆ ತಂಗ್ಯಮ್ಮ
ನಿನ್ನ ಬಾಲ್ಯಕಾಲದ ಗೆಳೆಯನಮ್ಮ ತಂಗ್ಯಮ್ಮ
ಕಾಡಿನೊಳಗೆ ನವಿಲು ವೋಲೆ ತಂಗ್ಯಮ್ಮ
ಆಟ ಆಡಿಕೋ ಹಾಡು ಹಾಡಿಕೋ ತಂಗ್ಯಮ್ಮ IIಮಲ್ಲಿಗೆ ಬಳ್ಳಿಗೆ ಹಂದರ ವೋಲೆ II
ಬಳಲಿ ಹೋಗಿ ನೀ ಕಳೆಗುಂದಿದ್ದರೆ
ಬೆನ್ನುಮೂಳೆ ಆಗಿ ಒಳ ಬಂದೆನಮ್ಮ
ಒಂದುಕ್ಷಣ ನೀ ಕಾಣದಿದ್ದರೆ
ನನ್ನ ಕಣ್ಣಾಲಿಗಳು ಕಮರಿ ಹೋದವು
ಒಂದು ಕ್ಷಣ ನೀ ಮಾತುಬಿಟ್ಟರೆ ತಂಗ್ಯಮ್ಮ
ನಾ ದಿಕ್ಕಿಲ್ಲದ ಹಕ್ಕಿಯಾದೇನೆ ತಂಗ್ಯಮ್ಮ
ತುತ್ತು ತಿನ್ನದೇ ಮುನಿಸಿಕೊಂಡರೆ ತಂಗ್ಯಮ್ಮ
ನನ್ನ ಭುಜಬಲವೇ ಬಿದ್ದು ಹೋದಿತೆ ತಂಗ್ಯಮ್ಮ IIಮಲ್ಲಿಗೆ ಬಳ್ಳಿಗೆ ಹಂದರ ವೋಲೆ II
ಓದಿದಷ್ಟು ನಿನ್ನ ಓದಿಸ್ತೀನಮ್ಮ
ಬೆಳೆಯುವಷ್ಟು ನಿನ್ನ ಬೆಳೆಸ್ತೀನಮ್ಮ
ಜೋಡೊಂದು ಕೂಡೋ ಹೊತ್ತಿಗೆ
ಹೂವೋ ಎಲೆಯೋ ಜೋಡಿಸ್ತಿನಮ್ಮ
ಮೆಚ್ಚಿದವಗೆ ಕೊಡುವೆ ನಿನ್ನ ತಂಗ್ಯಮ್ಮ
ನನ್ನ ಕಣ್ಣೀರಿಂದ ಕಾಲು ತೊಳೆಯುವೆ ತಂಗ್ಯಮ್ಮ
ರಿಕ್ಷಾ ಗಾಡಿಯ ತೇರು ಮಾಡುವೆ ತಂಗ್ಯಮ್ಮ
ನಿನ್ನ ಅತ್ತೆಮನೆಗೆ ಹೊತ್ತೊಯ್ಯುವೆ ತಂಗ್ಯಮ್ಮ IIಮಲ್ಲಿಗೆ ಬಳ್ಳಿಗೆ ಹಂದರ ವೋಲೆ ಈ
- ನಿಮ್ಮ ಅಭಿಮತ ತಿಳಿಸಿ

ಜಟಾಯು ಪಕ್ಷಿಗೆ ಶ್ರದ್ಧಾಂಜಲಿ ಜ್ಯೋತಿ ಗುರುಪ್ರಸಾದ್

ಹದಿನಾಲ್ಕು ವರ್ಷ ಸಂಪೂರ್ಣ
ಮನದಿಚ್ಛೆಯ ನಲ್ಲನ ಜೊತೆ-ಜೊತೆಗೇ
ನಾರು ಮಡಿಯುಟ್ಟು ಹಣ್ಣು ಹಂಪಲು ಉಂಡು
ಪಕ್ಷಿ ಸಂಕುಲದ ಇಂಚರವ ಆಲಿಸಿ
ತನ್ನೆದೆಗೂಡ ಹಕ್ಕಿಗೆ ಓಗೊಟ್ಟ ಸೀತೆ
ಮಾಯೆ ತಿಳಿಯದೆ ಆ ಜಿಂಕೆಯ ಮೋಹಿಸಿಬಿಟ್ಟಳು
ಆ ಮೋಹವೂ-ಜಿಂಕೆಯ ಚೆಂದವೂ
ರಾಮನಿಗಿಂತ ಹೆಚ್ಚಾಗಿರಲಿಲ್ಲ; ಅವನಿಗಿಂತ ಹೊರತಾಗಿರಲಿಲ್ಲ
ರಾಮನೇಕೆ ಅರಿಯದೇ ಹೋದ?
ಸರಿ ಏನೇನೋ ಆಗಿ ಹೋಯಿತು.
ರಾವಣನ ಬಂಧು ಮಾರೀಚ ವಧೆಯಾಗುವುದರ ಜೊತೆಗೆ
ಮುಗ್ಧ ಮುದ್ದು ಜಟಾಯು ಪಕ್ಷಿಯೂ
ಸೀತೆಗಾಗಿ ಹೋರಾಡುತ್ತ ಪ್ರಾಣ ಒಪ್ಪಿಸಿಬಿಟ್ಟಿತು.
ಜಟಾಯು ಪಕ್ಷಿಗೆ ಶ್ರದ್ಧಾಂಜಲಿ
ಸಲ್ಲಿಸುವೋಪಾದಿಯಲ್ಲಿ ಇಂದು
ವಾಲ್ಮೀಕಿಯಾಶ್ರಮದಲ್ಲಿ ತನ್ನೆರಡು ಕಂದಗಳೊಡನೆ
ಮತ್ತದೇ ವನವಾಸದ ಜೀವನದಲ್ಲಿರುವ ಸೀತೆಗೆ ಮಾತ್ರ
ಪ್ರೇಮವೆಂದರೆ ರಾಮ ಮಾತ್ರ.
ಈ ರಾಮನೇ ಅವಳಿಗೆ ಸದಾ ಸಂಗಾತಿ
ಗುಣಗಳ ಒಡೆಯ; ಎದೆಯಾಳುವ ಅವಳ
ಭೂಪತಿ,
ಮರೆತೂ ಕೂಡ ಒಂದು ಚಿಕ್ಕ ಬಿಂದುವಿಗೂ
ಅವನ ಅಗಲಿ ಪಲ್ಲಟವಾಗುವುದಿಲ್ಲ ಈ ಬೆರೆತಿರುವ ಮನ;
ನಲ್ಲನ ಸೇರಿರುವ ಹೃದಯ
ಅವನ ಕಾಣಿಕೆ ಲವಕುಶರನ್ನು
ತನ್ನೊಳಗಿಳಿದ ರಾಮ ಸ್ವರೂಪದ
ತಂದೆತನವನ್ನೂ ನೀಡುತ್ತಾ ಕಾಪಾಡುತ್ತಿದ್ದಾಳೆ
ಒಬ್ಬಂಟಿ ತಾಯಿ ಸೀತೆ.
ವಾಲ್ಮೀಕಿಯಾಶ್ರಮದಲ್ಲಿ ಪುಣ್ಯವತಿಯಾಗಿ
ನೆಲೆ ನಿಂತ ಸೀತೆಯ ಕಣ್ಣು
ತನ್ನ ರಾಮನಿಗಾಗಿಯೇ ಹುಡುಕುತ್ತಿದೆ
ಅವಳ ನಂಬಿಕೆ ಇಷ್ಟೆ-
ಅವನ ಅಂತರರಂಗದಲ್ಲಿ ನೆಲೆ ನಿಂತಿರುವ ನಲ್ಲೆ ನಾನೇ;
ನಾನೊಬ್ಬಳೇ
ನನ್ನ ನಲ್ಲ ಅವನೇ-ಅವನೊಬ್ಬನೇ
ಈ ಸತ್ಯಕ್ಕೆ ಶರಣಾಗಿ ರಾಮ ಮತ್ತೆ ಬಂದೇ ಬರುವನು.
ಕರುಳಕರೆಗೆ ಓಗೊಡದ ರಾಮ ಈ ಭೂಮಿಯ ಮೇಲೆ
ಇರಲು ಸಾಧ್ಯವೇ ಇಲ್ಲ.
ಮತ್ತೆ ನಾ ನೋಡುವ ರಾಮ
ನನ್ನದೇ ಕಂದಗಳ ತಂದೆ ರಾಮ-ಸತ್ಯವ್ರತ ರಾಮ
ಮಾಡಿದ ತಪ್ಪು ತಿದ್ದಿಕೊಂಡು
ವಿಸ್ಮೃತಿಯಿಂದ ಸ್ಮೃತಿಯೆಡೆಗೆ ನಡೆಯುವ ರಾಮ
ನನ್ನ ನಲ್ಲ ರಾಮ. ಅವನು ಮಾತ್ರ ರಾಮ.
--ಜ್ಯೋತಿ ಗುರುಪ್ರಸಾದ್

ಮಂಗಳವಾರ, ಆಗಸ್ಟ್ 9, 2011

ಎತ್ತೆತ್ತಲೂ….


3

ಅನು ಪಾವಂಜೆ ಕವಿತೆ.



ಅನು ಪಾವಂಜೆ
ಇದುವರೆಗೆ
ಸ್ತಭ್ಧವಾಗಿತ್ತು ಸುತ್ತಲು….
ಮತ್ತೆ ಸ್ವಲ್ಪ ಗಾಳಿ
ಬೀಸೋ ಸೂಚನೆ..
ಎಲೆಗಳ ತೊನೆದಾಟ …
ನರ್ತನ…
ಅರಳಿದ ಹೂವಿನ ಕ೦ಪು …
ಇಗಲೂ
ಮೋಡ ಮುಸುಕಿದ
ಕತ್ತಲು….
ಆದರೆ ಚ೦ದದ
ಕತ್ತಲು…
ಕೃಷ್ಣನ ಮೈಬಣ್ಣದ
ಕತ್ತಲು..
ತು೦ತುರು ಹನಿವ
ಕತ್ತಲು…
ಮತ್ತೆ ಹಸಿ ಮಣ್ಣಿನ
ಮೈಯರಳಿಸೋ
ಪರಿಮಳ
ಎತ್ತೆತ್ತಲೂ…

ಎರಡು ಹನಿಗಳು

೧ 
ಒಂದು ರೂಪಾಯಿ 
ಒಂದು ಬೀಜ 
ಆ ಒಂದು ಮಗುವಿನಿಂದಾಗಿ 
ಕ್ಷಮಿಸು 
ನೀನಿಲ್ಲದ ಮೇಲೆಯೂ 
ನಾನು ಕನಸುಗಾರನಾಗಿಯೀ 
ಉಳಿದೆ  
೨ 
ರಾತ್ರಿ ಬರೆದ 
ಸಾವಿನ ಕವನ 
ಹಗಲು ಮುಂದುವರಿಸಿದೆ
ಸುಮ್ಮನೆ ಹಗಲು  ರಾತ್ರಿಗಳು 
 ತದ್ವಿರುದ್ಧ ಅಂದವರಾರು ...

-ಅನಾಮಿಕ 

ಇಂಡಿಯಾ ಮತ್ತು ಈರುಳ್ಳಿ




ನಾನು ಈರುಳ್ಳಿ ಸುಲಿಯುತ್ತಿದ್ದೆ
ಗೆಳೆಯ ಹೇಳುತ್ತಿದ್ದ
ಮುಸ್ಲಿಮರನ್ನು ಮುಗಿಸಬೇಕು
ಒಂದು ಸಿಪ್ಪೆಯ ಸುಲಿದೆ
ಕ್ರೈಸ್ತರನ್ನು ಕಳಿಸಬೇಕು
ಇನ್ನೊಂದು ತೆಗೆದೆ
ಹಿಂದುಳಿದವರನ್ನು ಹಿಮ್ಮೆಟ್ಟಿಸಬೇಕು
ಮತ್ತೊಂದು ತೆಗೆದೆ
ಹೀಗೆ ನಾನು ತೆರೆಯುತ್ತ ಹೋದೆ
ಗೆಳೆಯ ಸುಲಿಯುತ್ತ ಹೋದ

ಕೊನೆಗೆ ಉಳಿದಿದ್ದು
ನನ್ನ ಅವನ ಕಣ್ಣುಗಳಲ್ಲಿ ನೀರು ಮಾತ್ರ
-ರಾಜು ಹೆಗಡೆ

ಬುಧವಾರ, ಆಗಸ್ಟ್ 3, 2011

ರಮಝಾನ್ ಪದ್ಯಗಳು.


ಬಿ .ಎಂ . ಬಷೀರ್


ಇಂದಿನಿಂದ ರಮಝಾನ್. ಇನ್ನು ಒಂದು ತಿಂಗಳು ನನಗೆ ಉಪವಾಸ. ಯಾಕೋ ತಾಯಿಯ ನೆನಪಾಗುತ್ತಾ ಇದೆ. ಅತ್ತಾಳದ ರಾತ್ರಿ(ರಾತ್ರಿ ಸುಮಾರು 4 ಗಂಟೆಗೆ ಎದ್ದು ಉಣ್ಣುವುದನ್ನು ಅತ್ತಾಳ ಎಂದು ಕರೆಯುತ್ತಾರೆ. ಹಾಗೆ ಉಂಡು, ನಮಾಝ್ ಮಾಡಿ ಮಲಗಿದರೆ, ಬಳಿಕ ಮರುದಿನ ರಾತ್ರಿ 7 ಗಂಟೆಯವರೆಗೆ ಹನಿ ನೀರೂ ಕುಡಿಯುವಂತಿಲ್ಲ) ತಾಯಿ ಎದ್ದು ನಮ್ಮನ್ನೆಲ್ಲ ‘ಏಳಿ ಮಕ್ಕಳೇ ಏಳಿ...’ ಎಂದು ಎಬ್ಬಿಸುತ್ತಿದ್ದಳು. ನಾವೋ ಸೋಂಭೇರಿಗಳು. ‘ಏಳಿ ಮಕ್ಕಳೇ...’ ಎಂದು ಕೂಗಿ ಕೂಗಿ ತಾಯಿಯ ಗಂಟಲ ಪಸೆ ಆರಿದ ಬಳಿಕ, ಮೆಲ್ಲಗೆ ಎದ್ದು ಕೂರುತ್ತಿದ್ದೆವು. ನಿದ್ದೆಗಣ್ಣಲ್ಲೇ ಅತ್ತಾಳ ಉಂಡು, ನಿದ್ದೆಗಣ್ಣಲ್ಲೇ ನೋಂಬಿನ ನಿಯತ್ತು ಹೇಳಿ, ಮಲಗಿ ಬಿಡುತ್ತಿದ್ದೆವು. ಈಗ ನಮ್ಮನ್ನು ಎಬ್ಬಿಸುವ ತಾಯಿಯ ದನಿಯೇ ಇಲ್ಲ. ಮೊಬೈಲ್ ಅಲಾರಾಂಗೆ ಎದ್ದು, ತಂಗಿ ಮಾಡಿಟ್ಟ ಅನ್ನ ಉಂಡು, ತಾಯಿಯನ್ನು, ದೇವರನ್ನು ನೆನೆದು ಮಲಗಬೇಕು.
ಬಾಲ್ಯದಲ್ಲಿ ನನ್ನ ಮದರಸದ ಗುರುಗಳು ಹೇಳಿದ್ದು ಈಗಲೂ ನನಗೆ ನೆನಪಿದೆ ‘‘ರಮಝಾನ್ ತಿಂಗಳಲ್ಲಿ ತಿನ್ನುವುದಕ್ಕೆ ಏನೂ ಸಿಗದೇ ಇದ್ದರೆ ಕೆಲವೊಮ್ಮೆ ನಾಯಿಯೂ ಹಸಿದಿರುತ್ತದೆ. ಹಾಗೆಂದು ಅದು ರಮಝಾನ್ ವ್ರತ ಹಿಡಿದಿದೆ ಎಂದು ಹೇಳುವುದಕ್ಕಾಗುತ್ತದೆಯೆ? ರಮಝಾನ್‌ನ ಉಪವಾಸ ನಮ್ಮನ್ನು ಒಳ್ಳೆಯ ಮನುಷ್ಯರಾಗಿ ತಿದ್ದುವುದಕ್ಕೆ ಸಹಾಯವಾಗಬೇಕು. ತಪ್ಪಿ ನೀರು ಕುಡಿದರೆ ನಿಮ್ಮ ಉಪವಾಸಕ್ಕೆ ತೊಂದರೆಯಾಗುವುದಿಲ್ಲ. ಆದರೆ ಇನ್ನೊಬ್ಬರನ್ನು ನೋಯಿಸಿದರೆ, ಕೆಟ್ಟದ್ದನ್ನು ಮಾಡಿದರೆ, ಇನ್ನೊಬ್ಬರಿಗೆ ಬೈದರೆ ಉಪವಾಸ ಮುರಿಯುತ್ತದೆ. ಕೆಟ್ಟದನ್ನು ಮಾಡುತ್ತಾ, ಯೋಚಿಸುತ್ತಾ ನೀವು ಹಸಿದು ಕುಳಿತುಕೊಳ್ಳುವುದು ಸುಮ್ಮನೆ. ರಮಝಾನ್‌ನಲ್ಲಿ ಆದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ. ಬಡವರ ಹಸಿವನ್ನು ಅರ್ಥ ಮಾಡಿಕೊಳ್ಳಿ. ಅವರಿಗೆ ನೆರವು ನೀಡಿ. ಕೆಟ್ಟದ್ದನ್ನು ತಡೆಯಿರಿ. ಅನ್ಯಾಯಕ್ಕೊಳಗಾದವರ ಪರವಾಗಿ ನಿಲ್ಲಿ. ರಮಾಝಾನ್‌ನ ಹಸಿವು ನಿಮ್ಮ ವ್ಯಕ್ತಿತ್ವವನ್ನು ಬದಲಿಸಿ, ನಿಮ್ಮನ್ನು ಒಳ್ಳೆಯ ಮನುಷ್ಯರನ್ನಾಗಿಸಬೇಕು. ರಮಝಾನ್‌ನಲ್ಲಿ ಸುಮ್ಮನೆ ಹಸಿದು ಕೂರುವುದಕ್ಕೆ ಯಾವ ಅರ್ಥವೂ ಇಲ್ಲ....’’
ಫಕೀರ್ ಮಹಮ್ಮದ್ ಕಟ್ಪಾಡಿಯ ‘ನೋಂಬು’ ಕತೆ ನೆನಪಾಗುತ್ತದೆ. ನಾನು ಓದಿದ ಅತಿ ಒಳ್ಳೆಯ ಕತೆಗಳಲ್ಲಿ ಇದೂ ಒಂದು. ಬಡವರ ಮನೆಯ ಸಣ್ಣ ಹುಡುಗನೊಬ್ಬ ತಂದೆ ತಾಯಿಗಳೊಂದಿಗೆ ಹಟ ಹಿಡಿದು ನೋಂಬು ಹಿಡಿಯುತ್ತಾನೆ. ಸಂಜೆಯ ಹೊತ್ತಿಗೆ ನೋಂಬು ಬಿಟ್ಟ ಬಳಿಕ ತಾಯಿಯೊಂದಿಗೆ ಅಚ್ಚರಿಯಿಂದ ಕೇಳುತ್ತಾನೆ ‘‘ಅರೆ, ನೋಂಬು ಎಂದರೆ ಇಷ್ಟೇಯಾ? ಇದನ್ನು ನಾವು ಆಗಾಗಾ ಹಿಡಿಯುತ್ತಾ ಇರುತ್ತೇವಲ್ಲ...’’ ಹಸಿದು ಕೂರುವುದೇ ನೋಂಬು ಎಂದಾದರೆ ಬಡವರಿಗೆ ವರ್ಷವಿಡೀ ರಮಝಾನ್ ಅಲ್ಲವೆ? ಬಡವರ ಹಸಿವನ್ನು, ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲು ರಮಝಾನ್ ನನಗೊಂದು ಅವಕಾಶ ಎಂದು ಭಾವಿಸಿದ್ದೇನೆ. ಅವರು ಪ್ರತಿ ದಿನ ಉಣ್ಣುತ್ತಿರುವ ಹಸಿವಿನ ಒಂದು ತುತ್ತನ್ನು ರಮಝಾನ್ ತಿಂಗಳಲ್ಲಿ ಉಣ್ಣ ಬೇಕು ಎಂದು ತೀರ್ಮಾನಿಸಿದ್ದೇನೆ. ಈ ಬಾರಿಯಾದರೂ ರಮಝಾನ್ ನನ್ನನ್ನು ಒಳ್ಳೆಯ ಮನುಷ್ಯನನ್ನಾಗಿಸುತ್ತದೆ ಎಂಬ ನಿರೀಕ್ಷೆಯಲ್ಲಿ, ರಮಝಾನ್ ತಿಂಗಳನ್ನು ಸ್ವಾಗತಿಸಿದ್ದೇನೆ. ನಿಮಗೆಲ್ಲರಿಗೂ ರಮಝಾನ್ ಶುಭಾಶಯಗಳು.
ಕಳೆದ ರಮಝಾನ್ ಹಬ್ಬದ ಸಂದರ್ಭದಲ್ಲಿ ಬರೆದ ಪದ್ಯವೊಂದನ್ನು ನಿಮ್ಮಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ರಮಝಾನ್ ಪದ್ಯಗಳು

ನಾನು ತುಕ್ಕು ಹಿಡಿದ ಕಬ್ಬಿಣ
ಹಸಿವಿನ ಕುಲುಮೆಯಲ್ಲಿ
ಧಗಿಸಿ ಹೊರ ಬಂದಿದ್ದೇನೆ
ಈಗಷ್ಟೇ ಸ್ನಾನ ಮುಗಿಸಿದ
ನವಜಾತ ಶಿಶುವಿನಂತೆ
ಬೆಳಗುತ್ತಿದ್ದೇನೆ

ಮೇಲೊಬ್ಬ ಕಮ್ಮಾರ
ಬಾಗಿದ್ದೇನೆ ಅವನ ಮುಂದೆ
ಉಳುವವನಿಗೆ ನೊಗವೋ
ಮನೆಗೊಂದು ಕಿಟಕಿಯೋ
ಬಾಗಿಲಿಗೆ ಚಿಲಕವೋ, ಬೀಗವೋ
ಅಥವಾ ಧರಿಸುವುದಕ್ಕೆ ಖಡ್ಗವೋ

ಎಲ್ಲಾ ಅವನ ಲೆಕ್ಕಾಚಾರ

2
ನಡು ರಾತ್ರಿ
ಅತ್ತಾಳಕ್ಕೆಂದು ಮಗನ
ಎಬ್ಬಿಸ ಬಂದ ತಾಯಿ
ತಲ್ಲಣಿಸಿ ನಿಂತಿದ್ದಾಳೆ

ಮಗುವಿನ ಗಾಢ ನಿದ್ದೆ
ಅವಳಿಗೆ ಧ್ಯಾನದಂತೆ ಭಾಸವಾಗಿದೆ

3
ರಮಝಾನ್ ದಿನಗಳು
ಅಮ್ಮನ ಕೆನ್ನೆಯ ಓಣಿಗಳಲ್ಲಿ
ಕಣ್ಣ ಹನಿಗಳಾಗಿ
ಉದುರಿ ಹೋಗುತ್ತಿವೆ
ಒಬ್ಬಂಟಿ ಕುಳಿತು

ಜಪಮಣಿಯಂತೆ ಅವಳದನ್ನು ಎಣಿಸುವಳು

4
ನನ್ನ ದ್ವೇಷ
ಹಸಿವಿನ ಬೆಂಕಿಯಲ್ಲಿ ಬೂದಿಯಾಗಿದೆ
ಏನು ಹೇಳಲಿ ಕರುಣಾಳುವಿನ ಕೃಪೆಯ?
ಮಸೀದಿಯಲ್ಲಿ ಕ್ಷಮೆಯ
ಉಡುಗೊರೆಯೊಂದಿಗೆ
ಕಾಯುತ್ತಿದ್ದಾನೆ ಗೆಳೆಯ!

ಗುಜರಿ ಆಯುವ ಹುಡುಗ!




ಬಿ . ಎಂ . ಬಷೀರ

ಕಾಯಿ ವ್ಯಾಪಾರಕ್ಕೆ ಸಂತೆಗೆ ಬಂದ
ಬ್ಯಾರಿಯಂತೆ ಅಪ್ಪ
ಹುಟ್ಟಿದ

ಗಿಡದಲ್ಲಿ ತೂಗುವ ಮಾವು
ಗೇರು, ಆಗಷ್ಟೇ ಕಣ್ಣು ಬಿಟ್ಟ ಗೊನೆ
ಹೂವು ಎಲ್ಲವನ್ನು
ಸರಕಿನಂತೆ ನೋಡಿದ

ವ್ಯಾಪಾರವೆನ್ನುವುದು ಅವನಿಗೆ
ಜೂಜಿನಂತೆ ಅಂಟಿತು
ಬದುಕನ್ನೇ ಒತ್ತೆ ಇಟ್ಟು
ಆಡಿದ

ಹಸಿವನ್ನು ಹೂಡಿ
ದಿನಸಿ ಅಂಗಡಿ ತೆರೆದ
ಗೆದ್ದ
ಗೆಲುವನ್ನು ಜವಳಿ ಅಂಗಡಿಗೆ
ಮಾರಿ ಸೋತ...
ಸಾಲಕ್ಕೆ ಹಳೆಯ
ಹೆಂಚನ್ನೇ ಮಾರಿದ
ಸೂರುವ ಸೂರನ್ನು
ದಿಟ್ಟಿಸುತ್ತಾ ಹೆಂಚಿನ ವ್ಯಾಪಾರಕ್ಕಿಳಿದ
ಗಂಜಿಗೆ ನೆಂಜಿಕೊಳ್ಳುವುದಕ್ಕೆಂದು
ತಂದ ಸಿಗಡಿಯ ರುಚಿ ಹಿಡಿದು
M ಕಡಲ ತಡಿಗೆ ಹೋದ
ಮೀನಿನ ವ್ಯಾಪಾರಕ್ಕಿಳಿದ

ದುಂದುಗಾರ ಅಪ್ಪ
ಸವಕಲು ಮಾತುಗಳನ್ನೇ
ನಾಣ್ಯಗಳಂತೆ ಚಲಾವಣೆಗೆ ಬಿಟ್ಟ
ಅಮ್ಮನ ಮೌನದ ತಿಜೋರಿಯನ್ನೇ
ದೋಚಿದ

ಜೂಜಿನ ನಿಯಮವ ಮರೆತು
ನಂಬಬಾರದವರನ್ನೆಲ್ಲ ನಂಬಿದ
ಸೋಲಿನ ರುಚಿಯನ್ನು ಹಿಡಿದ
ಸೋಲಿಗಾಗಿಯೇ ಆಡ ತೊಡಗಿದ...

ಕೊನೆಗೆ ಎಲ್ಲ ಬಿಟ್ಟು
ಗುಜರಿ ಅಂಗಡಿ ಇಟ್ಟ
ಹರಿದ ಚಪ್ಪಲಿ, ತುಕ್ಕು ಹಿಡಿದ ಡಬ್ಬ
ಮುರಿದ ಬಕೀಟುಗಳ ರಾಶಿಯ
ನಡುವೆ ಆ
ರಾಮ ಕುರ್ಚಿಗೆ ಒರಗಿದ
ಅವನ ಮೌನದ ತಿಜೋರಿ ತುಂಬಾ
ಸಾಲ ಪತ್ರಗಳು
ಅಂಗಡಿಯ ಬಾಗಿಲಲ್ಲಿ
ಕಾಲ
ವಸೂಲಿಗೆಂದು ಕುಕ್ಕರಗಾಲಿನಲ್ಲಿ ಕೂತಿದ್ದಾನೆ

ನಾನು ಅವನ ಮಗ
ಅವನ ಮೌನದ ಮನೆಯ
ಹಿತ್ತಲಲ್ಲಿ ನಿಂತ
ಗುಜರಿ ಆಯುವ ಹುಡುಗ