ಗುರುವಾರ, ಮೇ 26, 2011

ಅವಳು-ಅವನು





ಅವಳು
ಭಾರವಾಗಿ ಕೂತಿದ್ದಾಳೆ
ಮಕ್ಕಳು ಓದುತ್ತ
 ಆಡುತ್ತಿದ್ದಾರೆ
ಒಳಗೆ
ಹೊರಗೆ
ದಿನ
ಪತ್ರಿಕೆಯ
ಕುಡಿಯುತ್ತ
ಕೂತಿದ್ದಾನೆ
ಅವನು ಖುರ್ಚಿಯಲ್ಲಿ

-

ಅಡಿಗೆ
ಮನೆಯಲ್ಲಿ
ಕುಕ್ಕರು ಸೀಟಿ ಹೊಡೆಯುತ್ತಿದೆ
ಒಂದು ಎರಡು ಮೂರು
ಕುದಿಯುವ ಸಾರು
ಪ್ರಿಜ್ಜಿನಲ್ಲಿಡಬೇಕು
ಆರಿದ   ಮೇಲೆ
ಬದುಕು


-

ಬಹುಶ ಅವಳಿಗೆ ಗೊತ್ತಿಲ್ಲ
ದೂರದಲ್ಲಿರುವ ಆವನು
ಅವಳ ಜತೆ
ಚಕ್ಕಂದವಾಡುತ್ತಿರುವುದು

    -ರಾಜು ಹೆಗಡೆ

ಬುಧವಾರ, ಮೇ 25, 2011

ಎಮಿಲಿ ಡಿಕನ್ಸನ್ ಕವಿತೆಗಳು.

ಅನುವಾದ

  ವೈಶಾಲಿ ಹೆಗಡೆ

(೧)



ನಿನ್ನ ಎದೆಯೊಳಗೊಂದು ಪುಟ್ಟ ಝರಿಯಿದೆಯೇ

ನಸುನಾಚಿ ಅರಳುವ ಹೂಗಳು ದಡದಲ್ಲಿ

ಕೆನ್ನೆ ಕೆಂಪಾಗಿಸಿಕೊಂಡು ಅದ ಗುಟುಕರಿಸಲಿಳಿಯುವ ಹಕ್ಕಿಗಳು

ನವಿರಾಗಿ ಅದುರುವ ನೆರಳುಗಳು



ಮತ್ಯಾರಿಗೂ ಅರಿವಿಲ್ಲ, ತಣ್ಣಗೆ ಹರಿಯುತಿದೆ ಅಲ್ಲೇ

ಅಲ್ಲೊಂದು ತೊರೆ ಇಹುದೆಂಬ ಹೊಳಹಾದರೂ ಉಂಟೆ

ಆದರೂ ನಿನ್ನ ಬದುಕ ಸಣ್ಣ ಖಾಲಿತನ

ಕುಡಿದು ಬಿದ್ದಿರುವುದು ಅಲ್ಲಿ ದಿನವೂ



ಚೈತ್ರದಲ್ಲಿ ಹುಡುಕು ಆ ತೊರೆಯನ್ನು

ನದಿಗಳೆಲ್ಲ ಉಕ್ಕಿ ಹರಿವಾಗ

ಹಿಮವೆಲ್ಲ ಕಾತರದಿ ಕರಗಿ ಬೆಟ್ಟವಿಳಿವಾಗ

ಸ್ತಬ್ಧ ಸೇತುವೆಗಳೂ ಚಲಿಸುವಾಗ



(Have you got a little brook in heart ಕವಿತೆಯ ಅನುವಾದ)



(೨)



ನಾನು ಸತ್ತಿಹೆ ಸೌಂದರ್ಯಕ್ಕಾಗಿ, ಬಹು ಅಪರೂಪದ್ದು

ಹೊಂದಿಕೊಂಡಿರುವೆ ಈ ಸಮಾಧಿಯಲ್ಲಿ,

ಸತ್ಯಕ್ಕಾಗಿ ಸತ್ತವನೊಬ್ಬ ಮಲಗಿರುವನಿಲ್ಲಿ

ಪಕ್ಕದ ಕೋಣೆಯಲ್ಲಿ



ಅವ ಕೇಳಿದ ಮೆಲ್ಲಗೆ, ನೀನು ಸೋತದ್ದೇಕೆ

"ಸೌಂದರ್ಯಕ್ಕಾಗಿ" ನನ್ನ ಉತ್ತರ

"ಮತ್ತೆ ನಾನು ಸತ್ಯಕ್ಕಾಗಿ -- ಆದರೆ ಸತ್ಯವೂ ಸುಂದರವೂ ಒಂದೇ ಅಲ್ಲವೇ,

ನಾವಿಬ್ಬರೂ ಒಡಹುಟ್ಟಿದವರು" ಅವನ ಮರುತ್ತರ



ಹೀಗೆ ಭೇಟಿಯಾದೆವು ಬಂಧುಗಳು ಆ ರಾತ್ರಿಯಲ್ಲಿ

ಕೋಣೆಗೋಡೆಗಳ ನಡುವೆ ಹರಟಿದೆವು

ಹಾವಸೆಗಳು ಹರಡುತ್ತ ತುಟಿ ತಲುಪುವವರೆಗೆ



ಹಾಗೆಯೆ ನಮ್ಮಿಬ್ಬರ ಹೆಸರು ಮುಚ್ಚುವವರೆಗೆ



(I died for beauty ಕವಿತೆಯ ಅನುವಾದ)

ಬುಧವಾರ, ಮೇ 11, 2011

ಮತ್ತೆ ಮತ್ತೆ ಕ್ಷಮಾ,ಮನಸೆಲ್ಲ ಅವಳ ಘಮ!:ಅಂಜಲಿ ಲಹರಿ




ಅಂಜಲಿ ರಾಮಣ್ಣ



ಸಂಧ್ಯಾ ಆಕೆಯ ಹೆಸರು. ನಾಲ್ಕು ದಿನಗಳಲ್ಲಿ ಎಂಟು ಬಾರಿ ಕರೆಮಾಡಿದ್ದಳು. ಭೇಟಿಯಾಗಬೇಕಿತ್ತಂತೆ. ಚುಟುಕಾಗಿಯೇ ಏನು ವಿಷಯ ಅಂತ ತಿಳಿದ್ಕೊಂಡೆ. ಇಂಟರ್ನೆಟ್ ಸಮಾಜಕ್ಕೆ ಅದು ತುಂಬಾ ಸಣ್ಣ ವಿಚಾರ ಅನ್ನಿಸಿತ್ತು. ಅದಕ್ಕೆ “ಈಗೇನಮ್ಮ ಬೇಕಾದಷ್ಟು ಕಡೆ ಸಪೋರ್ಟ್ ಗ್ರೂಪ್ ಇರುತ್ತೆ. ಯಾರನ್ನಾದ್ರು ಸಂಪರ್ಕಿಸಿ. ನನಗೆ ಟೈಂ ಇಲ್ಲ” ಅಂದೆ. ಆಕೆ ಇಂಗ್ಲಿಷ್ನಲ್ಲಿ “ಹಾಗನ್ನ್ಬೇಡಿ ತಡವಾದ್ರೂ ಪರ್ವಾಗಿಲ್ಲಾ, ನಿಮ್ಮನ್ನೇ ನೋಡ್ಬೇಕು” ಅಂದಳು. ಯಾಕೋ ಗೊತ್ತಿಲ್ಲ ಈ ನಡುವೆ ಇಂಥ ವಿಚಾರಗಳೆಲ್ಲಾ ನನ್ನನ್ನು ಭಾವುಕಳನ್ನಾಗಿ ಮಾಡಲ್ಲ. ಹಾಗಾಗಿ ಅವರಿವರಿಗೆ ರೆಫೆರ್ ಮಾಡಿಬಿಡ್ತೀನಿ. ಆದರೆ ಇವಳು ಮಾತ್ರ ಪಟ್ಟು ಬಿಡುತ್ತಲೇ ಇಲ್ಲ. ನಾನೂ ಸಾಕಷ್ಟು ಸಬೂಬು ಹೇಳಿದೆ. ಕೊನೆಗೆ ಮಣಿದೆ. ನಾಡಿದ್ದು ಶುಕ್ರವಾರ ಬೆಳಗ್ಗೆ ೧೧ಕ್ಕೆ ಭೇಟಿ ಸಮಯ.



ಚೇಂಬರ್ನಿ ಹಾರು ಪರದೆಯ ಸಂಧಿನಿಂದ ಅವನು ಮಾತ್ರ ಕಾಣ್ತಿದ್ದ. ಕೈಕಟ್ಟಿಕೊಂಡು ಕೂತಿದ್ದ. ಇಬ್ಬರನ್ನು ಒಳಗೆ ಬರಹೇಳಿದೆ. ಆತ ಮಗುವನ್ನು ಎತ್ತಿಕೊಂಡಿದ್ದ. ಅವಳು ತಿಂದುಂಡ್ಕೊಂಡಿರೋ ಶಿಲ್ಪಶೆಟ್ಟಿಯ ಹಾಗಿದ್ಲು. ಗಂಡ ಹೆಂಡತಿ ಮಗುವನ್ನು ನೋಡ್ದಾಗ ಏನೋ ಹಿತವೆನಿಸಿತು. ಮೈಸೂರಿನವರು ಅಂತ ಗೊತ್ತಾದಾಗ ಹಾಗೆನಿಸಿದ್ದಕ್ಕೆ ಅಚ್ಚರಿಯಾಗಲಿಲ್ಲ. ಶ್ರೀಮಂತರು, ವಿದ್ಯಾವಂತರು, ಮದುವೆಯಾಗಿ ಹನ್ನೆರಡು ವರ್ಷಗಳಾದ್ರು ಮಗುವಾಗದ್ದಕ್ಕೆ ದತ್ತು ತೆಗೆದುಕೊಂಡ ಮಗುವಿಗೀಗ ನಾಲ್ಕೂವರೆ ವರ್ಷ. “ಏನ್ಪುಟ್ಟೀ ನಿನ್ನ್ಹೆಸರು” ನಾನು ಕೇಳಿದೆ. ಅಪ್ಪನ ಮುಖ ನೋಡಿ “ಅಪ್ಪ ನನ್ನ್ ಎತರು ತಮ ಅಲ್ಲಾ” ಅಂತು ಮುದ್ದು ಪುಟಾಣಿ. “ಕ್ಷಮಾ” ಅಂತ ಅಮ್ಮ ತಿದ್ದಿದಳು. ಅವನು ನಕ್ಕು ಸುಮ್ಮನಾದ. ಒಂದೆರಡೇ ನಿಮಿಷಗಳಲ್ಲಿ ಮಗು ಆತನ ತೊಡೆ ಬಿಟ್ಟಿಳಿದು ಆಫೀಸಿನಲ್ಲೆಲ್ಲಾ ಪಾದರಸದಂತೆ ಹರಿದಾಡುತ್ತಿತ್ತು. ಮತ್ತೆ ಅದೇ ಶೈಲಿಯಲ್ಲಿ ಕೂತಿದ್ದ ಅವನು. ಸಂಧ್ಯಾ ಹೇಳ್ತಾ ಹೋದಳು “ನಮಗೇನ್ಮಾಡೋದೋ ಗೊತಾಗ್ತಿಲ್ಲಾ. ಕೆಲವರು ಹೇಳಿ ಬಿಡಿ ಅಂತಾರೆ, ಮತ್ತೆ ಕೆಲವರು ಯಾಕೆ ಹೇಳ್ಬೇಕು ಅಂತಾರೆ..... ಏನ್ಮಾಡೋದು ಗೊತ್ತಾಗ್ತಿಲ್ಲಾ” ಅಪ್ಪನ ಕಟ್ಟಿದ ಕೈ ಎದೆಯಿಂದ ಇಳಿಯಲಿಲ್ಲ. ಆಕೇನೇ ಮುಂದುವರೆಸಿದಳು “ಹೇಳ್ಬೇಕೂಂತಂದ್ಕೊಂಡ್ರೂ ಹೇಗ್ಹೇಳೋದು ....ನಮ್ಮಿಬ್ಬರಿಗೂ ಎಂದೂ ಅವಳು ನಮ್ಮ ಹೊಟ್ಟೆಯಲ್ಲಿ ಹುಟ್ಟಿದವಳಲ್ಲ ಅನ್ನ್ಸೋದೇಯಿಲ್ಲ... ಹೇಗೆ ಹೇಳ್ಲೀ......” ಅವಳು ಅಳುತ್ತಿದ್ದಳು ಅದರಲ್ಲೂ ವಿದ್ಯಾವಂತರ ಡಿಗ್ನಿಟಿ ಕಾಣ್ತಿತ್ತು. ನನ್ನ ಕಣ್ಣು ಅಪ್ಪನ ಮೇಲೆ ಹೊರಳಿತು ಆತ ಅದೇ ಭಂಗಿಯಲ್ಲಿ ಸ್ಥಾಯಿಯಾಗಿದ್ದ. ಆಕೆಯ ಮಾತು ಕೇಳ್ತಿದ್ದ್ರೆ ಯಾರ ಕರುಳೂ ಕಣ್ಣೀರಾಗ್ತಿದ್ದಿದ್ದಂತೂ ಖಂಡಿತ. “ಹೌದು ಯಾಕೆ ಹೇಳ್ಬೇಕೂಂತ?” ಒಂದ್ನಿಮಿಷ ನನ್ನನ್ನೂ ಇದೇ ಪ್ರಶ್ನೆ ಕಾಡಿತು. ಅಲ್ಲಿದ್ದದ್ದು ನಾಮ್ಮವರೇ ಆದರೂ ಮೂರು ನಿಮಿಷಗಳ ಮೌನ ಮೂವತ್ತು ಜನರಿಗೆ ಹಂಚುವಷ್ಟಿತ್ತು. ಬೇಡ ಬೇಡವೆಂದರೂ ಮನಸ್ಸು ಇನ್ನೊಮ್ಮೆ “ಅಪ್ಪನನ್ನು ನೋಡು” ಎನ್ನುತ್ತಿತ್ತು. ನನಗ್ಯಾಕೋ ಆ ಮಗುನೇ ಅವನನ್ನು ದತ್ತು ತೆಗೆದುಕೊಂಡಂತನಿಸಿತು! ವಯಸ್ಸಿನಲ್ಲಿ ಇಬ್ಬರೂ ನನಗಿಂತ ಸ್ವಲ್ಪ ದೊಡ್ದವರಂತೆಯೇ ಕಂಡರು. ಆದರೂ ನಾನೀಗ ಭಾವುಕಳಾಗುವ ಹಾಗಿಲ್ಲ. ಸಾಂತ್ವನದ ಜವಾಬ್ದಾರಿ ಹೊತ್ತವಳಲ್ಲವೇ? ತೋಚಿದ್ದು, ಓದಿದ್ದು, ವೃತ್ತಿ ಎಲ್ಲದರ ಸಮಾಗಮವನ್ನಾಗಿಸಿ ಏನೇನೋ ಹೇಳಿದೆ. ಅವಳು “ಥ್ಯಾಂಕ್ಸ್” ಎಂದೆನ್ನುತ್ತಾ ಎದ್ದಳು. ಆತ ಈಗ ಕಟ್ಟಿದ್ದ ಕೈ ಬಿಚ್ಚಿ ನನ್ನ ನೋಡಿ ಸುಮ್ಮನೆ ನಕ್ಕ. ಕ್ಷಮಾ ಓಡಿ ಬಂದು ಅಪ್ಪನ ಹೆಗಲೇರಿತು. ಅವರು ಹೊರಟರು.



ಕಿಟಕಿಯಿಂದ ಬಗ್ಗಿ ನೋಡಿದೆ ಧಾರಾಕಾರ ಮಳೆ. ಹಣೆ ಮೇಲಿನ ಬೆವರು ಕೈ ಸವರಿತು. ಕೂತಲ್ಲಿಂದಲೇ ಎಸಿ ಸ್ವಿಚ್ ಹಾಕ್ಕೊಂಡೆ. ಕ್ಷಮಾ.... ಕ್ಷಮಾ.... ಕ್ಷಮಾ... “ಅಪ್ಪ ನನ್ನ್ ಎತರು ತಮ ಅಲ್ಲಾ?”... ರೂಮೆಲ್ಲಾ ಕ್ಷಮಾಳ ಘಮ!



***



ನನಗೂ ಆಗ ಅದೇ ವಯಸ್ಸು. ನಗು, ತುಂಟತನ ಎಲ್ಲಾ ಥೇಟ್ ಪಪ್ಪನ ಹಾಗೆ. ಫಟಫಟ ಅಂತ ಪಪ್ಪನ ತರಹಾನೆ ಥಟ್ ಅಂತ ಮಾತಾಡ್ತಿದ್ದೆ. ಪ್ರಶ್ನೆ ಕೇಳ್ತಿದ್ದೆ. ನಾನು ಪಪ್ಪನ ಫ಼ೇವರೇಟ್ ಮಗಳು. ತಲೆ ಮೇಲೆ ಹೊತ್ತು ತಿರುಗಿಸುತ್ತಿದ್ದ ಪಪ್ಪನ್ನ ಕಂಡು ಅಜ್ಜಿ ಎಷ್ಟೋ ಬಾರಿ “ಹೆಣ್ಣು ಹುಡುಗೀನ ಹಾಳು ಮಾಡಿಬಿಡ್ತೀಯಾ” ಅಂತ ಬೈತಿರ್ತ್ತಿದ್ದರು. ಯಾವುದಕ್ಕೂ ಪಪ್ಪ ಡೋಂಟ್ ಕೇರ್. ಏನಾದರು ನನಗೆ ಬೇಕು ಅಂತ ನನಗೇ ಗೊತ್ತಾಗೋದಕ್ಕೆ ಮೊದಲೇ ಪಪ್ಪನಿಗೆ ಹೇಗೆ ಗೊತಾಗ್ತಿತ್ತು? ಈಗಲೂ ಆಶ್ಚರ್ಯ ಅನ್ನಿಸುತ್ತೆ. “ಈ ಹೆಣ್ಣು ಎಲ್ಲಾ ನಮ್ಮಣ್ಣನ ಹಾಗೆ” ಅಂತ ಸೋದರತ್ತೆ ಸೋಟೆ ತಿರುವಿದ್ದು ನೆನಪಿದೆ. “ನೀನು ಯಾರ ಮಗಳು?” ಅಂತ ಕೇಳ್ದೋರಿಗೆಲ್ಲ ನನ್ನಿಂದ ಫಟ್ ಅಂತ ಬರ್ತಿದ್ದ ಉತ್ತರ “ನಾನು ಪಪ್ಪನ ಮಗಳು” ಆಗೆಲ್ಲಾ ಪಪ್ಪನ ತುಟಿಯಂಚಲಿ ಏನೋ ಒಂಥರದ ನಗು ಹಾದು ಹೋಗ್ತಿದ್ದದ್ದು ಅಕ್ಷಿಪಟಲದಲ್ಲಿ ಅಚ್ಚೊತ್ತಿದೆ. ಇಷ್ಟೆಲ್ಲಾ ನಾನು ಪಪ್ಪನವಳು ಮತ್ತು ಪಪ್ಪ ನನ್ನ ಪಪ್ಪ ಮಾತ್ರ! ಹೀಗಿದ್ರೂ, ನನ್ನ ಕೆಣಕೋಕ್ಕೆ ಅವರ ಫ್ರೆಂಡ್ಸ್ ಮತ್ತು ಆಫೀಸಿನವರೆಲ್ಲ “ನೀನು ನಿಮ್ಮಪ್ಪನ ಮಗಳಲ್ಲ. ನಿನ್ನ ಒಂದು ಸೇರು ರಾಗಿ ಕೊಟ್ಟು ಸರಗೂರು ಸಂತೆಯಿಂದ ಕೊಂಡ್ಕೊಂಡ್ಬಂದರು” ಅಂತ ಹೇಳ್ತಿದ್ದಾಗ ನನ್ನ ಚಿನಕುರುಳಿ ಮಾತಿಗೆ ಪೂರ್ಣ ವಿರಾಮ ಬೀಳ್ತಿತ್ತು. ದುಃಖ ಗಂಟಲಲ್ಲೇ ಮನೆಮಾಡ್ತಿತ್ತು. “ಹೌದಾ ಪಪ್ಪ?” ಅನ್ನೋ ಪ್ರಶ್ನಾರ್ಥಕ ಕಣ್ಣಲ್ಲಿಟ್ಟ್ಕೊಂಡು ಪಪ್ಪನ್ನ ನೋಡ್ತಿದ್ದೆ. ಅವರು ಏನೂ ಮಾತಾಡ್ತಿರಲಿಲ್ಲ. ಮತ್ತೆ ಪಪ್ಪನ ತುಟಿಯಂಚಲಿ ಏನೋ ಒಂಥರದ ನಗು ಹಾದು ಹೋಗ್ತಿತ್ತು. ನನಗೆ ಏನೋ ಸಮಾಧಾನ! ವಿಶ್ವಾಸ ಹುಟ್ಟಿಸೋಕ್ಕೆ ಮಾತಿನ ಹಂಗೇಕೆ? ಮನೆ ಭರ್ತಿ ಮಕ್ಕಳಿದ್ದ ಸಂಸಾರದಲ್ಲಿ ಬಿಳಿ ಅಕ್ಕ “ನಿನ್ನ ರಾಗಿ ಕೊಟ್ಟು ತಂದ್ಹೊತ್ತಿಗೆ ನೀನು ಕಪ್ಪು” ಅಂತ ಹಂಗಿಸುತ್ತಿದ್ದಾಗ ನನಗೆ ಎಂದೂ ಏನೂ ಅನ್ನಿಸುತ್ತಿರಲಿಲ್ಲ. “ನೀನು ಪಪ್ಪನ ಮಗಳಲ್ಲ” ಅಂದಾಗ ಮಾತ್ರ ನನ್ನದು ಅದಿಗಂತ ಮೌನ, ದುಃಖ..... ಆದರೆ ಪಪ್ಪನದು ಅದೇ ನಗು. ನಾನು ಒಮ್ಮೆಯೂ ಬಾಯ್ಬಿಟ್ಟು “ಪಪ್ಪ ನಾನು ನಿನ್ನ ಮಗಳಲ್ಲ್ವಾ” ಅಂತ ಕೇಳಲಿಲ್ಲ. ಎಲ್ಲರೂ ಛೇಡಿಸುತ್ತಿದ್ದಾಗಲೂ ಒಮ್ಮೆಯೂ ಪಪ್ಪ ಬಾಯ್ಬಿಟ್ಟು “ನೀನು ನನ್ನ ಮಗಳು” ಅಂತ ಹೇಳಲಿಲ್ಲ.... ಆಗೆಲ್ಲಾ ಪಪ್ಪನದು ಅದೆಂಥ ನಗು! ಈಗಲೂ ಯಾವ ಕಷ್ಟದಲ್ಲೂ, ಅಳುವಿನಲ್ಲೂ ನನ್ನ ಕೈಹಿಡಿದು ನಡೆಸೋದು ಅದೇ. ಹೌದಲ್ಲಾ, ಪಪ್ಪಾನೂ ಕಪ್ಪು ಅದಕ್ಕೆ ನಾನೂ ಕಪ್ಪು? ನಾನೀಗ ಪಪ್ಪನಂಥೆ ನಗ್ತಿದ್ದೀನಿ. ಒಮ್ಮೆ ಡೆಂಟಿಸ್ಟ್ ಹತ್ತಿರ ಹೋಗಿದ್ದಾಗ ನನ್ನ ಎಡ ಕೋರೆಹಲ್ಲಿನ ಪಕ್ಕದ ಸಂದಿ ನೋಡಿ ಅವರು “ನೀವು ಇದನ್ನು ಫಿಲ್ ಮಾಡಿಸಿಕೊಳ್ಳಿ, ನಿಮ್ಮ ನಗು ಇನ್ನೂ ಸುಂದರವಾಗುತ್ತೆ” ಅಂದಾಗ ನಾನು ಬೇಡ ಬೇಡ ಖಂಡಿತಾ ಬೇಡ ಅಂತ ಹೊರಬಂದಿದ್ದಕ್ಕೆ ಮತ್ತೇನೂ ಕಾರಣವಿಲ್ಲ. ಪಪ್ಪನಿಗೂ ಅದೇ ಜಾಗದಲ್ಲಿ ಹಲ್ಲು ಹಾಗೇ ಇದೆ. ನಾನು ಪಪ್ಪನ ಮಗಳು... ಅದಕ್ಕಿಂತ ಹೆಚ್ಚಿನ ಸೌಂದರ್ಯ ನಾನು ಬಯಸಲಾರೆ. ನನಗೆ ಬೇಕಿಲ್ಲ.



ಅಕಸ್ಮಾತ್ ಪಪ್ಪ ನಾನು ಅವರ ಮಗಳಲ್ಲ ಅಂದುಬಿಟ್ಟಿದ್ದಿದ್ದರೆ? ಸಾಧ್ಯಾನೇ ಇಲ್ಲ, ಆ ನಗು ಮೋಸ ಮಾಡೋಲ್ಲ. ಆ ದಿನ ನಾನು ಪಪ್ಪ ಆಗ್ರಾದಿಂದ ತಂದಿದ್ದ ಹಳದಿ ಬಣ್ಣದ ಫ್ರಿಲ್ಸ್ ಇದ್ದ ಫ್ರಾಕ್ ಹಾಕ್ಕೊಂಡಿದ್ದೆ..... ಅರೆ, ಇವತ್ತು ಕ್ಷಮಾ ಕೂಡ ಅಂಥದ್ದೇ ಬಟ್ಟೆ ಹಾಕಿಕೊಂಡಿದ್ದಲ್ಲ್ವಾ? ಮತ್ತೆ ಕ್ಷಮಾ... ಕ್ಷಮಾ.... ನೆನಪಿನಲ್ಲೆಲ್ಲಾ ಕ್ಷಮಾಳ ಘಮ!



***



ಇನ್ನೊಂದಷ್ಟು ವರ್ಷಗಳಲ್ಲಿ ಕ್ಷಮಾ ಕೂಡ ಹೀಗೇ ಹೇಳುತ್ತಿರಬಹುದಾ? “ಪ್ರೀತಿಯ ಅಪ್ಪ ಈಗ ನನಗೆ ಗೊತ್ತು. ನಾನು ಈ ಮನೆಗೆ ಬಂದವಳು. ನೀವು ಕರೆತಂದವಳು. ಆದರೆ ನೀವು ಎಂದೂ ಹಾಗೆ ಹೇಳಲೇ ಇಲ್ಲ. ಯಾಕಂದ್ರೆ ನಾನು ನಿಮ್ಮ ಮಗಳು ತಾನೆ ಅಪ್ಪ? ಊರೆಲ್ಲಾ ನನ್ನ ದತ್ತು ಬಂದವಳು ಅಂದಾಗಲೂ ನೀವು ಮಾತ್ರ ಸುಮ್ಮನಿದ್ದಿರಿ. ಯಾಕಂದ್ರೆ ನಮ್ಮಿಬ್ಬರಿಗೆ ಗೊತ್ತಲ್ಲ ನಾನು ನಿಮ್ಮ ಮಗಳು ಅಂತ. ನನ್ನ ಎಲ್ಲಾ ಆಸೆಗಳಿಗೆ ಆಸರೆಯಾದವರು ನೀವು. ಕನಸುಗಳಿಗೆ ರೆಕ್ಕೆಯಾದವರು ನೀವು. ಪ್ರಶ್ನೆಗಳ ಕಣ್ಣೀರಿಗೆ ದಿಂಬಾದವರು ನೀವು. ಅತ್ತೆ, ಅಜ್ಜಿ ಎಲ್ಲಾ `ನಿನ್ನನ್ನು ನಿಮ್ಮಪ್ಪ ತೆಗೆದ್ಕೊಂಡು ಬಂದ’ ಅಂತ ಹೇಳ್ತಿದ್ದಾಗ ನೀವು ಏನೂ ಹೇಳಲಿಲ್ಲ. ಯಾಕಂದ್ರೆ ನಮ್ಮಿಬರಿಗೂ ಗೊತ್ತು ನಾನು ನಿಮ್ಮ ಮಗಳು ಅಂತ. ಬೇತಾಳ ಬೆಂಬತ್ತಿದಾಗಲೂ ವಿಕ್ರಮಾದಿತ್ಯನಷ್ಟೇ ನಿಸ್ಪೃಹನಾದ ಅಪ್ಪನ ಮಗಳು ತಾನೆ ನಾನು? ಅದನ್ನು ನೀವು ಹೇಳದಿದ್ದರೇನಂತೆ! ಪ್ರಪಂಚ ಸಿಮೆಂಟ್ ಇಟ್ಟಿಗೆಯ ಕಾಡಾದರೇನಂತೆ, ಮನುಷ್ಯ ನಿರ್ಗಂಧ ಕ್ಯಾಕ್ಟಸ್ ಆದರೇನಂತೆ ಅದರಲ್ಲೂ ಹೂವು ಹುಟ್ಟುತ್ತಿದೆಯಲ್ಲ?! ನಿಮ್ಮೆದೆಯ ಮೇಲೆ ಕಟ್ಟಿದ ಕೈ ಇಟ್ಟ್ಕೋತೀರಲ್ಲ ಅದನ್ನು ಬಿಚ್ಚಲೇಬೇಡಿ. ನನ್ನೆಲ್ಲಾ ಸ್ಟ್ರೆಂಥ್ ನಿಮ್ಮ ಕಟ್ಟಿದ ಕೈಯೊಳಗೆ. ಥ್ಯಾಂಕ್ಯೂ ಅಪ್ಪ.... ನೀವು ಅಪ್ಪ ಅಂತ ಹೇಳದೆಯೂ ನನ್ನನ್ನು ಮಗಳು ಮಾಡಿಕೊಂಡಿದ್ದಕ್ಕೆ!“ ಮತ್ತೆ ಕ್ಷಮಾ.... ಕ್ಷಮಾ..... ಮನಸೆಲ್ಲಾ ಕ್ಷಮಾಳ ಘಮ!











ಮಂಗಳವಾರ, ಮೇ 10, 2011

ಸಾಯಿಬಾಬಾರ ಧರ್ಮಾರ್ಥಗಳು ಪ್ರಜಾತಂತ್ರದ ಅಣಕವಲ್ಲವೇ?




- ಶಿವಸುಂದರ್



ದೈವಮಾನವ, ನಡೆದಾಡುವ ದೇವರು, ದೈವಾಂಶ ಸಂಭೂತ ಇತ್ಯಾದಿ ಅಲಂಕಾರಗಳಿಂದ ಪ್ರಭುತ್ವ ಮತ್ತು ಸಮಾಜ ಕೊಂಡಾಡುತ್ತಿದ್ದ ಸಾಯಿಬಾಬಾನಂಥ ಸಾಯಿಬಾಬಾ ಸಹ ಮೃತರಾಗಿದ್ದಾರೆ. ಸಾಯುವ ಮುನ್ನ ಸಾಮಾನ್ಯ ನರಮಾನವರಂತೆ ೨೮ಕ್ಕೂ ಹೆಚ್ಚು ದಿನಗಳ ಕಾಲ ಹಲವಾರು ಖಾಯಿಲೆಗಳಿಂದ ನರಳಿದ್ದಾರೆ. ತಮ್ಮಲ್ಲೇ ಸರ್ವರೋಗನಿವಾರಿಣಿ ಬೂದಿಯಿದ್ದರೂ ಅವೇನೂ ದೇವಮಾನವನ ಸಾವನ್ನೂ ತಡೆಯಲಿಲ್ಲ ನೋವನ್ನೂ ಕಡಿಮೆ ಮಾಡಲಿಲ್ಲ. ಬದಲಿಗೆ ಹಗಲು ರಾತ್ರಿ ಶ್ರಮಿಸಿ ಆ ನಿರ್ಜೀವ ದೇಹವನ್ನು ಏಪ್ರಿಲ್ ೨೪ರ ತನಕ ಉಳಿಸಲು ಹರಸಾಹಸ ಪಟ್ಟಿದ್ದು ಅಮೆರಿಕ ಹಾಗೂ ಭಾರತದ ಅತ್ಯುತ್ತಮ ವೈದ್ಯರುಗಳು! ಹಾಗೆ ನೋಡಿದರೆ ಇದೇ ಸಾಯಿಬಾಬಾ ವಿದೇಶಿ ಸಂಘಸಂಸ್ಥೆಗಳ ಅಪಾರ ಧನಸಹಾಯದೊಂಡಿಗೆ ಕಟ್ಟಿದ್ದ ಆಸ್ಪತ್ರೆಗಳಲ್ಲಿ ಕೊಡುತ್ತಿದ್ದದ್ದು ಸಾಯಿಬಾಬಾ ಮಂತ್ರಿಸಿದ ಬೂದಿಯನ್ನೇನಲ್ಲ. ವೈಜ್ನಾನಿಕ ವಿಧಾನದಿಂದ ಅನ್ವೇಷಿತವಾದ ಔಷದಿಗಳನ್ನೇ. ಈ ಆಸ್ಪತ್ರೆಯ ಸಹಾಯದಿಂದ ಸಾಕಷ್ಟು ಜನರು ಉಪಯೋಗ ಪಡೆದುಕೊಂಡಿದ್ದು ನಿಜ. ಆದರೆ ವಿಪರ್ಯಾಸವೇನೆಂದರೆ ಸಾಯಿಬಾಬಾರ ಸಾವು, ಆಧುನಿಕ ವೈದ್ಯಕೀಯ ಸೇವೆ ಇವೆಲ್ಲವೂ ಸಾರಾಂಶದಲ್ಲಿ ಸಾಯಿಬಾಬಾ ಜೀವನದುದ್ದಕ್ಕೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರಚಾರ ಮಾಡಿದ ಮೌಢ್ಯಗಳನ್ನೇನೂ ಅಲುಗಾಡಿಸುತ್ತಿಲ್ಲ. ಬದಲಿಗೆ ಕಷ್ಟಕಾಲದಲ್ಲಿ ಬಡಜನತೆಗೆ ಒದಗಿಬಂದ ಸಹಾಯ ಅವರಲ್ಲಿ ಋಣೀ ಭಾವನೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅದು ಅವರಲ್ಲಿ ಸಾಯಿಬಾಬಾರ ದೈವತ್ವದ ಬಗ್ಗೆ ಮತ್ತಷ್ಟು ವಿಶ್ವಾಸವನ್ನು ಹೆಚ್ಚಿಸುತ್ತಿದೆ. ಇದು ಸಾಯಿಬಾಬಾರನ್ನು ಮರಣಾನಂತರವೂ ಸಹ ಪವಾಡ ಪುರುಷನನ್ನಾಗಿ ಸ್ಥಾಪಿಸುತ್ತಿದೆ. ಮತ್ತು ಒಂದು ಪ್ರಜಾತಂತ್ರದಲ್ಲಿಯೂ ಜನರು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ಪವಾಡಗಳನ್ನೋ ಅಥವಾ ಪವಾಡ ಪುರುಷರನ್ನೋ ಆಶ್ರಯಿಸುವಂತೆ ಮಾಡುತ್ತದೆ. ಹೀಗಾಗಿ ಸಾಯಿಬಾಬಾರ ವೈಭವೀಕರಣ ಸಾರಾಂಶದಲ್ಲಿ ಪ್ರಜಾತಂತ್ರದ ವೈಫಲ್ಯದ ವೈಭವೀಕರಣವೇ ಆಗಿದೆ.

ಸಾಯಿಬಾಬಾರ ಬದುಕು ಮತ್ತು ಅವರ ಬದುಕಿನ ಏರುಗತಿ ನಮ್ಮ ದೇಶದ ಪ್ರಜಾಸತ್ತೆ ಮತ್ತು ಜನತೆಯ ಬದುಕಿನ ಅವನತಿಯ ಜೊತೆಜೊತೆಗೆ ನೇರವಾಗಿ ಸಂಬಂಧಿಸಿದೆ. ಪ್ರಾರಂಭದಲ್ಲಿ ಸಾಯಿಬಾಬಾ ಮೂರನೇ ದರ್ಜೆ ತಂತ್ರಗಳನ್ನು ಬಳಸಿ, ಬೂದಿ, ಉಂಗುರುಗಳನ್ನು "ಶೂನ್ಯದಿಂದ ಸೃಷ್ಟಿಸಿ" ಕೊಡುವ ಕಳಪೆ ಕಣ್ಕಟ್ಟುಗಳನ್ನು ಮಾಡುತ್ತಾ ಪವಾಡ ಪುರುಷರ ಸ್ಥಾನ ಗಿಟ್ಟಿಸಿಕೊಂಡರು. ಈ ದೇಶದ ಸಾಮಾಜಿಕ ಪರಿಸ್ಥಿತಿ ಮತ್ತು ದಮನಿತ ಜನರ ದೈನೇಸಿ ಪರಿಸ್ಥಿತಿಗಳು ಬಾಬಾಗಳ ಬುರುಡೆಯನ್ನು ಪ್ರಶ್ನಿಸುವ ಮನಸ್ಥಿತಿಗಿಂತಾ ಅದನ್ನು ಒಪ್ಪಿಕೊಂಡು ಅದರ ಮೂಲಕ ತಮ್ಮ ತೀರದ ಬವಣೆಗಳಿಗೆ ಭ್ರಾಮಕ ಪರಿಹಾರವನ್ನು ಕಂಡುಕೊಳ್ಳುವ ಶರಣಾಗತಿಯ ಮನೋಭಾವವನ್ನೇ ಮುಂದುವರೆಸಿತ್ತು. ಬೇರೇ ಯಾವುದೇ ದೇಶಗಳಿಗಿಂತ ಈ ದೇಶದಲ್ಲಿ ಧರ್ಮ ಮತ್ತು ಜಾತಿ ವ್ಯವಸ್ಥೆಗಳಂಥಾ ವ್ಯವಸ್ಥಿತ ಆಕ್ರಮಣಗಳು ದಮನಿತ ಜನತೆಯಲ್ಲಿ ತಮ್ಮ ಶೊಚನೀಯ ಪರಿಸ್ಥಿತಿಗೆ ಕಾರಣಗಳನ್ನು ವ್ಯವಸ್ಥೆಯಲ್ಲಿ ಹುಡುಕುವುದಕ್ಕಿಂತಾ ತಮ್ಮ ಪೂರ್ವಜನ್ಮದ ಪಾಪ ಕರ್ಮಗಳಲ್ಲೇ ಹುಡುಕಿಕೊಳ್ಳುವಂಥಾ ಆತ್ಮಘಾತುಕ ಮನಸ್ಥಿತಿಯನ್ನು ಪೋಷಿಸಿಕೊಂಡು ಬಂದಿವೆ. ಹೀಗಾಗಿಯೇ ಈ ದೇಶದ ದಮನಿತ ಮತ್ತು ಬಡಜನರಲ್ಲಿ ತಮ್ಮ ಬಗ್ಗೆ ತಮಗೆ ಆತ್ಮವಿಶ್ವಾಸ ಇರುವುದಕ್ಕಿಂತ ಪವಾಡ ಪುರುಷರ ಬಗ್ಗೆ, ದೇವೀ ಮಾನವರ ಬಗ್ಗೆ ನಂಬಿಕೆ, ಮೂಢ ನಂಬಿಕೆ ಹೆಚ್ಚು. ಈ ಮೂಢ ನಂಬಿಕೆಯ ಮೂಲ ಅವರ ಅಸಹಾಯಕತೆಯನ್ನು ಹೆಚ್ಚಿಸುವ ತಮ್ಮ ನಿಯಂತ್ರಣದಲ್ಲಿಲ್ಲದ ಶೋಷಕ ವ್ಯವಸ್ಥೆಯಲ್ಲಿದೆ.

ವಾಸ್ತವವಾಗಿ ಒಂದು ಪ್ರಜಾತಂತ್ರ ಜನರ ಈ ನಿಸ್ಸಹಾಯತೆಯನ್ನು ದೂರ ಮಾಡಿ ಜನತೆಗೆ ತಮ್ಮ ಸಂಘಟಿತ ಶಕ್ತಿಯ ಮೇಲೆ ತಮಗೇ ನಂಬಿಕೆ ಬರುವಂತೆ ಮಾಡಬೇಕಿತ್ತು. ಇದುವರೆಗೆ ಹೇಳಿದ್ದನ್ನೆಲ್ಲಾ ಒಪ್ಪಿಕೊಂಡು ಬಂದ ಸಮಾಜ ಮತ್ತು ಜನರಲ್ಲಿ ಪ್ರಶ್ನಿಸುವ ಮತ್ತು ಸ್ವೀಕ್ರುತ ಗ್ರಹಿಕೆಗಳನ್ನು ಅನುಮಾನಿಸುವ ವಿಚಾರವಾದಿ ಮನೋಧರ್ಮವನ್ನು ಹುಟ್ಟುಹಾಕಬೇಕಿತ್ತು. ಒಂದು ಪ್ರಜಾತಂತ್ರ ಜನರಿಗೆ ತಮ್ಮ ಬದಿಕಿನ ಆಗುಹೋಗುಗಳ ಮೇಲೆ ತಮಗೇ ನಿಯಂತ್ರಣ ಇರುವಂತ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ನೀಡಿದ್ದಿದ್ದರೆ ಹಾಗೂ ವೈಜ್ನಾನಿಕ ಮುಭಾವವನ್ನು ಹುಟ್ಟುಹಾಕುವಂಥಾ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿದ್ದರೆ ಜನರಲ್ಲಿ ಪರಾವಲಂಬಿ ಮನೋಭಾವವೇ ಹುಟ್ಟುತ್ತಿರಲಿಲ್ಲ. ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ಸ್ವಾವಲಂಬನೆ ಇರುವ ಸಮಾಜ ನಿರ್ಮಾಣವಾಗಿದ್ದರೆ ಈ ದೇಶದಲ್ಲಿ ಬಾಬಾಗಳು ಹುಟ್ಟಿಕೊಳ್ಳುತ್ತಲೇ ಇರಲಿಲ್ಲ.

ಆದರೆ ನಮ್ಮ ಪ್ರಜಾತಂತ್ರಕ್ಕೆ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಅಜೆಂಡಾವೇ ಇರಲಿಲ್ಲ. ಬಡತನದ ಮತ್ತು ಪರಾವಲಂಬನೆಯ ಮುಂದುವರೆಸುವುದು ಈ ದೇಶದ ಆಳುವವರ್ಗಗಳ ಪಟ್ಟಭದ್ರ ಹಿತಾಸಕ್ತಿಯೂ ಆಗಿದ್ದರಿಂದ ಈ ದೇಶದ ಜನತೆಯ ನಿಸ್ಸಹಾಯಕ ಪರಾವಲಂಬನೆ ಹಾಗೆಯೇ ಮುಂದುವರೆದು ಬಾಬಾಗಳ ಹುಟ್ಟಿಗೆ ಭೂಮಿಕೆಯನ್ನು ಸೃಷ್ಟಿಸಿತ್ತು. ಈ ಸಾಮಾಜಿಕ ಸಂದರ್ಭದ ಮನೋಭೂಮಿಕೆಯೇ ಪವಾಡಗಳನ್ನು ನಂಬುವ, ಹಂಬಲಿಸುವ ಮಾನಸಿಕತೆಯನ್ನು ಹುಟ್ಟುಹಾಕಿತು. ಇದರ ಪ್ರಯೋಜನವನ್ನು ಮಾಡಿಕೊಂಡು ಸಾಯಿಬಾಬಾಗಳಂಥವರು ಜನರನ್ನು ಹಿಂಬಾಲಕರನ್ನಾಗಿಸಿಕೊಂಡರು. ಈ ಪ್ರಕ್ರಿಯೆಯಲ್ಲಿ ಸಾಯಿಬಾಬಾ ವ್ಯಕ್ತಿಯಾಗದೇ ಜನರ ವಿಶ್ವಾಸವನ್ನು ಗಳಿಸಿಕೊಂಡ ಶಕ್ತಿಕೇಂದ್ರವಾಗುತ್ತಿದ್ದಂತೆ ಆಳುವ ವರ್ಗ ಮತ್ತು ಪ್ರಭುತ್ವಗಳು ಸಹ ಯೋಜಿತವಾಗಿ ಸಾಯಿಬಾಬಾರನ್ನು ವಿಶ್ವಮಾನ್ಯ ಆಧ್ಯಾತ್ಮಿಕ ಗುರುವನ್ನಾಗಿ ಪ್ರವರ್ಧಮಾನಕ್ಕೆ ತಂದರು. ಸಾಯಿಬಾಬಾರ ವರ್ಗಾತೀತ ಸಂಘರ್ಷ ರಹಿತ ಮಾನವತೆ, ದಾನ-ಧರ್ಮಗಳ ಮುಸುಕಿನಲ್ಲಿ ಎಲ್ಲಾ ವ್ಯವಸ್ಥಿತ ಶೋಷಣೆ,ಲೂಟಿಗಳಿಗೆ ಪಾರಮಾರ್ಥಿಕ ಮಾನ್ಯತೆಗಳನ್ನು ಗಳಿಸಿಕೊಂಡರು. ಹಾಗೂ ಲಕ್ಷಾಂತರ ಕೋಟಿ ರೂಪಾಯಿ ಬೆಲೆಬಾಳುವ ಹಲವು ಲೌಕಿಕ ದಂಧೆಗಳಿಗೆ ಸಾಯಿಬಾಬಾ ಸಂಸ್ಥೆ ಅಲೌಕಿಕ ಮುಸುಕನ್ನು ಒದಗಿಸಿಕೊಡುವ ಸಂಸ್ಥೆಯಾಗಿಯೂ ಬಳಕೆಯಾಯಿತು.

ಆದರೆ ೮೦ರ ದಶಕದಲ್ಲಿ ಸ್ವಶ್ರಮ ಮತ್ತು ಸಾರ್ವಜನಿಕ ಹಿತಾಸಕ್ತಿಯ ಮೌಲ್ಯಗಳು ಜೀವಂತವಾಗಿದ್ದ ಸಂದರ್ಭದಲ್ಲು ಹುಟ್ಟುಕೊಂಡಿದ್ದ ಮಧ್ಯಮವರ್ಗ ಈ ಮೌಢ್ಯಗಳ ಬೇರುಗನ್ನು ಪ್ರಶ್ನಿಸದಿದ್ದರೂ ಒಟ್ಟಾರೆಯಾಗಿ ಸಾಯಿಬಾಬಾರ ಹಿಂದಿದ್ದ ಪ್ರಭಾವಲಯವನ್ನು ಪ್ರಶ್ನಿಸುತ್ತಲೇ ಬಯಲುಗೊಳಿಸುತ್ತಾ ಬಂದರು. ಉಂಗುರ ಕೊಡುವ ಸಾಯಿಬಾಬಾ ಕುಂಬಲಕಾಯಿ ಏಕೆ ಕೊಡಲು ಸಾಧ್ಯವಿಲ್ಲ, ಶೂನ್ಯದಲ್ಲೇ ಎಲ್ಲಾ ಸೃಷ್ಟಿಸಲು ಸಾಧ್ಯವಿದ್ದರೆ ಸಮುದ್ರದಲ್ಲಿ ಬೆರಳದ್ದಿ ಪೆಟ್ರೋಲು ಮಾಡಿಬಿಟ್ಟರೆ ದೇಶದ ಹಲವು ಕಷ್ಟಗಳು ತೀರುತ್ತದಲ್ಲ ಎಂಬ ಕೋವೂರ್, ಹೆಚ್. ನರಸಿಂಹಯ್ಯ ಇನಿತರರ ವಾದ ಸಮಾಜದಲ್ಲಿ ಸಾಯಿಬಾಬಾರ ಬಗ್ಗೆ ಪ್ರಶ್ನೆಗಳನ್ನು ಹುಟ್ಟೂಹಾಕಿತು. ಅದೇ ಸಮಯದಲ್ಲಿ ಸಾಯಿಬಾಬಾ ಆಶ್ರಮದಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದ ನಾಲ್ಕು ಕೂಲೆಗಳೂ ಸಹ ಸಾಯಿಬಾಬಾರ ಪ್ತಭಾವಲಯವು ವಿಸ್ತರಿಸುವುದಕ್ಕೆ ಅಡ್ಡಿಯಾಯಿತು.

ಆದರೆ ೧೯೯೧ರ ಜಾಗತೀಕರಣದ ನೀತಿಗಳು ಈ ದೇಶದ ಪ್ರಜಾತಂತ್ರ, ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಆಶಯದ ಮೂಲಕ್ಕೆ ಕೊಡಲಿಪೆಟ್ಟು ಹಾಕಿದವು. ಅದು ಈವರೆಗೆ ಜನರಿಗೆ ಜವಾಬುದಾರರಾಗಿರಬೇಕಾದ ಸರ್ಕಾರವನ್ನು ಸ್ಥಳಾಂತರಿಸಿ ಅದರಲ್ಲಿ ಜನರ ನೇರ ನಿಯಂತ್ರಣಕ್ಕೆ ಒಳಪಡದ, ಬಲವಿದ್ದವರು ಮಾತ್ರ ಬದುಕಬಹುದಾದ ಮಾರುಕಟ್ಟೆಯೆಂಬ ಕಸಾಯಿಖಾನೆಗೆ ಜನರನ್ನು ದೂಡಿತು. ಇದರಿಂದ ಜನರ ಅತಂತ್ರತೆ ಇನ್ನಷ್ಟು ಹೆಚ್ಚಾಗಿ ಪರಾವಲಂಬೀ ಮನೋಭಾವ ಇನ್ನಷ್ಟು ಬೇರುಬಿಡುವಂತಾಯಿತು. ಕಷ್ಟಪಟ್ಟು ಒಂದೊಂದೇ ಹನಿಯನ್ನು ಶೇಖರಿಸಿ ರೂಪುಗೊಂಡ ಮಧ್ಯಮವರ್ಗಕ್ಕಿಂತ ಜಾಗತೀಕರಣದಿಂದ ಮತ್ತು ಮಾರುಕಟ್ಟೆ ನೀತಿಯಿಂದ ದಿಢೀರ್ ಸಂಪನ್ನರಾದ ಒಂದು ನವ ಶ್ರೀಮಂತ ವರ್ಗ ಈ ಕಾಲಘಟ್ಟದಲ್ಲಿ ಉದಯವಾಯಿತು. ಈ ನವ ಮೇಲ್‌ಮಧ್ಯಮ ವರ್ಗದ ಸುಸಂಪನ್ನತೆಗೆ ಅದರ ಶ್ರಮಕ್ಕಿಂತ,ಪ್ರತಿಭೆಗಿಂತ ಮಾರುಕಟ್ಟೆಯ ಒಲವೇ ಕಾರಣವಾದ್ದರಿಂದ ಈ ನವ ಮಧ್ಯಮವರ್ಗದಲ್ಲಿ ವೈಚಾರಿಕತೆ, ವೈಜ್ನಾನಿಕತೆಗಿಂತ ಹೆಚ್ಚಾಗಿ ಅದೃಷ್ಟದಲ್ಲಿ, ಮಾರುಕಟ್ಟೆಯ ಆಶಿರ್ವಾದದಲ್ಲಿ, ಅದನ್ನು ದೊರಕಿಸಿಕೊಡಬಹುದಾದ ಅತಿಮಾನವರಲ್ಲಿ ನಂಬಿಕೆ ಇಡುವುದು ಒಂದು ಮೌಲ್ಯವೂ ಜೀವನ ಶೈಲಿಯೂ ಆಯಿತು. ಇಂದಿಗೂ ನಗರಗಳಲ್ಲಿ ಸಾಯಿಬಾಬಾನ ಭಕ್ತರು ಈ ನವ ಶ್ರಿಮಂತರೇ ಆಗಿರುತ್ತಾರೆ. ಮತ್ತು ಅವರ ಜೀವನ ದೃಷ್ಟಿ ಬಹುಮಾಡಿ ಪ್ರಜಾತಂತ್ರ ವಿರೋಧಿ ಮಾರುಕಟ್ಟೆ ಪರ ವಕ್ತಾರಿಕೆಯೇ ಆಗಿರುತ್ತದೆ. ಆಧಾತ್ಮಿಕವಾಗಿ ಮಾನವಾತೀತ ಶಕ್ತಿಗಳ ಎದುರು ಶರಣಾಗುವುದೇ ಈ ವರ್ಗದ ಆಧ್ತಾತ್ಮಿಕ ಮೌಲ್ಯವೂ ಆಗಿರುತ್ತದೆ. ಈ ವರ್ಗ ಈ ಕಾಲಘಟ್ಟದಲ್ಲಿ ಸಮಾಜದಲ್ಲಿ ನೇತಾರಿಕೆಯ ಮತ್ತು ವಕ್ತಾರಿಕೆಯ ಸ್ಥಾನವನ್ನೂ ಪಡೆದ್ದರಿಂದಲೇ ಪವಾಡಗಳ ಬಯಲಿಂದ ಮಂಕಾಗಿದ್ದ ಸಾಯಿಬಾಬಾ ಮತ್ತೆ ದೇವಮಾನವರ ಸ್ಥಾನಕ್ಕೆ ಪರ್ಯಾಯ ಸರ್ಕಾರದ ಸ್ಥಾನಕ್ಕೆ ಏರಿದ್ದು.

ಆದರೆ ಅದೇ ಸಮಯದಲ್ಲಿ ಸರ್ಕಾರ ಶಿಕ್ಷಣ, ಆರೋಗ್ಯ ಇನ್ನಿತರ ಜನತೆಯ ಅತ್ಯಗತ್ಯ ಕ್ಷೇತ್ರಗಳಿಂದ ಹಿಂದೆ ಸರಿಯುತ್ತಿತ್ತು. ಸಾಯಿಬಾಬಾ ತಮ್ಮ ಟ್ರಸ್ಟ್ ಮೂಲಕ ಕುಡಿಯುವ ನೀರು ಮತ್ತು ಹೈಟೆಕ್ ಆಸ್ಪತ್ರೆಯ ಸೌಲಭ್ಯವನ್ನು ಬಡಜನರಿಗೂ ವಿಸ್ತರಿಸಿ ಸರ್ಕಾರದಿಂದ ವಂಚಿತಗೊಂಡು ಕಂಗಾಲಾಗಿದ್ದ ಜನರ ಕಣ್ಣಲಿ ನಡೆದಾಡುವ ದೇವರೇ ಆಗಿಬಿಟ್ಟರು. ಆದರೆ ಈ ಆಸ್ಪತ್ರೆ ಮತ್ತು ಶಿಕ್ಷಣವನ್ನು ದೊರಕಿಸಲು ಬೇಕಾಗಿದ್ದ ಸಂಪನ್ಮೂಲ ಸಾಯಿಬಾಬಾ ಸಂಸ್ಥೆ ಪಡೆದುಕೊಂಡಿದ್ದು ಹೇಗೆ? ಅಷ್ಟು ಹಣ ಒಂದು ಸರ್ಕಾರದ ಬಳಿ ಇರುವುದಿಲ್ಲವೇ? ಎಂಬ ಪ್ರಶ್ನೆಗಳನ್ನು ಯಾರೂ ಕೇಳದೇ ಸಾಯಿಬಾಬಾರ ಸಮಾಜ ಸೇವೆಯನ್ನು ವಾಚಾಮಗೋಚರವಾಗಿ ಹೊಗಳಲು ಪ್ರಾರಂಭಿಸಿದ್ದಾರೆ. ಅದರಲ್ಲೂ ಸಾಯಿಬಾಬಾ ನಿಧನದ ನಂತರ ಅವರ ಪವಾಡ ಇತ್ಯಾದಿಗಳ ೧೯೯೧ರ ಪೂರ್ವಾಶ್ರಮದ ಅವತಾರವನ್ನು ಖಂಡಿಸಿದ ಕೆಲವೇ ಕೆಲವು ಮಾಧ್ಯಮಗಳೂ ಸಹ ನಂತರದಲ್ಲಿ ಅವರು ಮಾಡಿದ ಕುಡಿಯುವ ನೀರಿನ ಯೋಜನೆ ಮತ್ತು ಒದಗಿಸಿದ ಆಸ್ಪತ್ರೆ ಸೌಲಭ್ಯಗಳೇ ನಿಜವಾದ ಪವಾಡ, ಅವರ ಜಾತ್ಯತೀತ ಮಾನವೀಯತೆ ಇವೆಲ್ಲವೂ ಹೆಚ್ಚೂ ಕಡಿಮೆ ಅವರು ದೇವಮಾನವನಿಗೆ ಸಮ ಎಂಬುದನ್ನು ರುಜುವಾತು ಮಾಡುತ್ತದೆ ಎಂದು ಬರೆಯುತ್ತಿವೆ. ಇನ್ನುಳಿದ ಮಾಧ್ಯಮಗಳಂತೂ ಸಾಯಿಬಾಬಾ ಸಾಮಾನ್ಯ ಮನುಷ್ಯರಂತೆ ಸತ್ತರೂ ಈ ಕಾಲದಲ್ಲೂ ಆತ ದೈವಾಂಶ ಸಂಭೂತ ಮತ್ತೆ ಆತ ಪುನರ್ಜನ್ಮ ಎತ್ತುತ್ತಾನೆ ಎನ್ನುವಂತೆಯೇ ಬಿತ್ತರಿಸುತ್ತಿವೆ. ಅದೇ ರೀತಿ ಪ್ರಭುತ್ವವೂ ಸಹ ಸಾಯಿಬಾಬಾರನ್ನು ದೈವೀ ಮಾನವ ಮತ್ತು ಜನತೆಯಿಂದ ಆಯ್ಕೆಯಾದ ಸರ್ಕಾರಕ್ಕೆ ಪರ್ಯಾಯವಾದ ಮತ್ತು ಅದಕ್ಕಿಂತಲೂ ಮಿಗಿಲಾದ ಆಧಾvಕ ಮತ್ತು ಸಾಮಾಜಿಕ ಶಕ್ತಿ ಕೇಂದ್ರವೆಂದು ಅಧಿಕೃತವಾದ ಮಾನ್ಯತೆ ನೀಡುತ್ತಿದೆ.

ಇದರ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರವಿದೆ. ಇದು ಪ್ರಭುತ್ವ ಜನರ ಕಲ್ಯಾಣ ಕಾರ್ಯಕ್ರಮಗಳಿಂದ ಹಿಂತೆಗೆಯುವುದನ್ನು, ಜನರಲ್ಲಿ ತಮಗಿಂತ ಹೆಚ್ಚಾಗಿ ಮಾನವಾತೀತ ಶಕ್ತಿಗಳಲ್ಲಿ ನಂಬಿಕೆ ಇಡುವುದನ್ನು, ಸ್ವ ಶ್ರಮ ಮತ್ತು ಸ್ವಾವಲಂಬನೆಗಳಿಗಿಂತ ಅದೃಷ್ಟ ಮತ್ತು ಪವಾಡಗಳಲ್ಲಿ ನಂಬಿಕೆ ಇಡುವಂಥ ವ್ಯವಸ್ಥೆಯನ್ನು ಪೋಷಿಸುವ ಅತ್ಯಂತ ಪ್ರಜಾತಂತ್ರ ವಿರೋಧಿ ಮಾನಸಿಕತೆಯನ್ನು ಪೋಷಿಸುವ ಮತ್ತು ಸಾಂಸ್ಥೀಕರಿಸುವ ಹುನ್ನಾರ ಇದರಲ್ಲಡಗಿದೆ. ಸಹಾಯ ಮಾಡಿದವರನ್ನು ನೆನೆಯುವ ಜನಸಾಮಾನ್ಯರ ಸಹಜ ಭಾವನೆಗಳನ್ನು ದುರುಪಯೋಗ ಪಡಿಸಿಕೊಂಡು ವ್ಯವಸ್ಥೆ ಈ ಸಂದರ್ಭದಲ್ಲಿ ಜನರನ್ನು ಶಾಶ್ವತವಾಗಿ ದೈನೇಸಿಗಳನ್ನಾಗಿ ಮಾಡುವ ಹುನ್ನಾರ ನಡೆಸಿದೆ. ಜನರ ಪ್ರಶ್ನಿಸುವ ಮನೋಭಾವವನ್ನೇ ಚಿವುಟಿಹಾಕುವ ಯತ್ನದಲ್ಲಿದೆ.

""Why People believe in wierd things" " ಎಂಬ (ಜನರೇಕೆ ಅಸಂಗತ ವಿಷಯಗಳಲ್ಲಿ ನಂಬಿಕೆ ಇಡುತ್ತಾರೆ?) ಪುಸ್ತಕಕ್ಕೆ ಮುನ್ನುಡಿ ನರೆಯುತ್ತಾ ಅಮೆರಿಕದ ಪ್ರಖ್ಯಾತ ವಿಚಾರವಾದಿ ಸ್ಟೀಫನ್ ಜೇ ಗೌಲ್ಡ್ ಎಂಬುವರು

"Skepticism is the agent of reason against organized irrationalism—and is therefore one of the keys to human and social decency" ಎಂದು ಹೇಳುತ್ತಾರೆ. ಅಂದರೆ "ಅನುಮಾನಿಸುವುದು ಸಂಘಟಿತ ಮೌಢ್ಯದ ವಿರುದ್ಧ ವಿಚಾರವಾದದ ಉಪಕರಣವಾಗಿರುತ್ತದೆ. ಆದ್ದರಿಂದಲೇ ಅದು ಮಾನವೀಯ ಮತ್ತು ಸಾಮಾಜಿಕ ಆರೋಗ್ಯವನ್ನು ಸಾಧಿಸಲು ಒಂದು ಪ್ರಮುಖ ಸಾಧನವೂ ಆಗುತ್ತದೆ" ಎಂದು ಹೇಳುತ್ತಾರೆ. ಸಾಯಿಬಾಬಾರಂಥ ಸಂಘಟಿತ ಮೌಢ್ಯದ ವಿರುದ್ಧ ಎಲ್ಲಿಯೂ ಒಂದು ಅನುಮಾನದ ಎಳೆಯೂ ಕಾಣದಿರುವುದು ನಮ್ಮ ಪ್ರಜಾತಂತ್ರ ಎಷ್ಟು ಅನಾರೋಗ್ಯವಾಗಿದೆ ಎಂಬುದರ ಸಂಕೇತವಾಗಿಲ್ಲವೇ?

ಶುಕ್ರವಾರ, ಮೇ 6, 2011

ಹೈಕುಗಳು.

ರಾಘವೇಂದ್ರ ಮಹಾಬಲೇಶ್ವರ 

ತಾನೇ ಜೀವತುಂಬಿ ಕಳಿಸಿದವು
ತನ್ನ ಪಾದಕ್ಕೇ ಬಿದ್ದಾಗ ಅಂದುಕೊಳ್ಳುತ್ತಾನೆ
ದುರಾಸೆಯವರು, ಹೂಗಳನ್ನೂ ಕೊಲ್ಲುತ್ತಾರೆ.

ರಾಧೆಯ ಎದೆ ನೋಡಿ
ಕೃಷ್ಣನೊಳಗಿದ್ದ ಬೆಣ್ಣೆ ಕಳ್ಳ
ಎದ್ದ.

ಆಗಸದಲ್ಲಿ ಹಾರುತ್ತಿರುವ ಹದ್ದು
ನೀರಲ್ಲಿ ತೇಲುವ ಮೀನೊಡನೆ ಕಣ್ಣು ಬೆರೆಸುತ್ತಿದೆ
ಯಾವುದೋ ಸಂಬಂಧ ನೆನಪಾದಂತೆ.

ಅವಳೆದೆ ಮೇಲೆ ಬಿಸಿಲುಕೋಲು ಬಿದ್ದಿದೆ
ಅವಳು ಕೋಪದಿಂದ ದಿಟ್ಟಿಸುತ್ತಿದ್ದಾಳೆ
ಅವನ ಕಂಗಳಿಗೆ ಅದರ ಪರಿವೆಯಿಲ್ಲ.

ಸುರಗಿಯ ಕಂಪು
ಇಬ್ಬರ ಮೈ ಮರೆಸಿತು
ಮನ ಬೆರೆಸಿತು.

ಮೊಲೆಗಳು ಮೊಲಗಳಲ್ಲ
ಮನಬಂದಂತೆ ಕುಪ್ಪಳಿಸಲು
ಒಂದನ್ನು ಮರೆತು ಇನ್ನೊಂದು ಓಡಲು.

ಅದೇ ಬೀದಿಯಲ್ಲಿ


ಹೇಮಾ ವೆಂಕಟ್

ಮೊನ್ನೆ,
ಮತ್ತೆ ಅದೇ ಬೀದಿಯಲ್ಲಿ ಹೋಗಿದ್ದೆ
’ಆನಾ’ಳ ಸುತ್ತ ನೂರಾರು,
ಸಾವಿರಾರು ಕವನ ಕುತೂಹಲಿಗಳು
ಆಕೆ ಕವಿತೆ ಬರೆದು ಹಂಚುತ್ತಿದ್ದಾಳೆ

.
ಒಬ್ಬಾತ ನಿಂತ ನಿಲುವಿನಲ್ಲೆ
ನಿನ್ನನ್ನು ಪ್ರೀತಿಸುತ್ತೇನೆ ಎಂದ
ಎಷ್ಟೆಂದರೆ, ನೀನು ಕವಿತೆಯನ್ನು ಪ್ರೀತಿಸುವಷ್ಟು
ಸಾಮ್ರಾಜ್ಯವನ್ನು ದ್ವೇಷಿಸುವಷ್ಟು


ಒಬ್ಬಾಕೆ ಅಂಗಲಾಚುತ್ತಾಳೆ
ನನ್ನ ಮಗನನ್ನು ಕಳುಹಿಸಿಕೊಡು
ಮರಣಶಯ್ಯೆಯಲ್ಲಿರುವ ಮಗನಿಗೆ
ನಿನ್ನ ಕವಿತೆಯ ಗುಟುಕು ಬೇಕು
ಸಾವನ್ನು ಜಯಿಸಲು
ಒಂದು ಸಾಲು ಸಾಕು


ಕವಿಮಿತ್ರರು ಕರೆಯುತ್ತಾರೆ
ಅವಸರವಿದೆ ಬೇಗ ಬಾ
ಸಾಮ್ರಾಜ್ಯದ ಕರೆಗೆ
ನಿಂತ ನೆಲ ನಡುಗುತಿದೆ
ಹುಚ್ಚಿಯಂತೆ ತಿರುಕಿಯಂತೆ
ವ್ಯರ್ಥವಾಗಬೇಡ
ಆನಾ ನಿಜಕ್ಕೂ ಹುಚ್ಚಿಯೇ
ಆಗುತ್ತಾಳೆ
ಸಾವಿನ ತೆಕ್ಕೆಯಲ್ಲಿರುವ ನೆಲದ ಮಕ್ಕಳಿಗೆ
ಕೊನೆಯ ಕವಿತೆ ಓದುತ್ತಾಳೆ
ಅವರಿಗೆಲ್ಲ ಸಂತೃಪ್ತಿಯ ಸಾವು
ಅವಳಿಗೆ ಅಮರತ್ವ
* * *
ನನಗೆ ಏನೂ ಕೇಳಬೇಕು ಅನ್ನಿಸಲಿಲ್ಲ
ಮತ್ತೆ ಬರುತ್ತೇನೆ ಎಂದು ಬಂದುಬಿಟ್ಟೆ
ಪ್ರತಿಸಲವೂ ಹೀಗೇ ಆಗುತ್ತಿದೆ
ಏನೋ ಕೇಳಬೇಕು ಅನ್ನಿಸಿ
ಆ ಬೀದಿಯಲ್ಲಿ ಹೋಗುತ್ತೇನೆ
ಕೇಳಬೇಕಿರುವುದನ್ನು ಹಾಗೇ ಉಳಿಸಿಕೊಂಡು
ಬಂದು ಬಿಡುತ್ತೇನೆ.