ಗುರುವಾರ, ಜುಲೈ 28, 2011

ನಾಲ್ಕು ಕವಿತೆಗಳು

ಜನರಲ್ ವಾರ್ಡಿನಲ್ಲಿ...


ಜನರಲ್ ವಾರ್ಡಿನ ತುಂಬ ಸಾವಿನ ವಾಸನೆ
ಗೂರಲು ಕೆಮ್ಮಿನ ಮುದುಕ ಬೆಳಿಗ್ಗೆಯಷ್ಟೆ ತೀರಿದ್ದಾನೆ
ಅವನು ಮಲಗಿದ್ದ ಹಾಸಿಗೆಗೆ ಹೊಸ ಬೆಡ್‌ಶೀಟು ಬಂದಿದೆ

ನಿನ್ನೆಯಷ್ಟೆ ಸುಟ್ಟುಕೊಂಡು ಬಂದ ಹೆಣ್ಮಗಳ ಸುತ್ತ ಪರದೆ
ಅಸಹ್ಯ ಕಮಟು. ರಕ್ತವೇ ಬಿಳಿಬಿಳಿಯಾಗಿ ಜಿನುಗುತ್ತಿರಬಹುದು
ಸಾವು ನಾಳೆಯೋ ನಾಡಿದ್ದೋ ಯಾರಿಗೆ ಗೊತ್ತು?

ಹೊಸದೊಂದು ಮಗು ಹುಟ್ಟಿದೆ
ತಾಯಿ ಹಾಲೂಡಿಸುತ್ತಿದ್ದಾಳೆ ಎಲ್ಲರೆದುರೇ
ನಾಚಿಕೆ ಕಳೆದುಕೊಂಡ ಹುಡುಗಿ ಈಗ ಹೆಂಗಸಾಗಿದ್ದಾಳೆ

ನನ್ನ ಕರುಳ ಹುಣ್ಣು ಕತ್ತರಿಸಿಯಾಗಿದೆ
ಬಿದ್ದುಕೊಂಡಿದ್ದೇನೆ, ಅಲ್ಲಾಡದಂತೆ ಹೊಲಿಗೆ ಬಿಚ್ಚದಂತೆ
ಮಂಚದ ಕೆಳಗೆ ಯಳನೀರು ಬುರುಡೆ, ಕಪಾಟಿನಲ್ಲಿ ಗ್ಲೂಕೋಸು ಬಾಟಲಿಗಳು

ಕೊಯ್ಯುವಾಗ ಹೇಳಿದ್ದರು ಡಾಕ್ಟರು;
ಸ್ವಲ್ಪ ತಡಮಾಡಿದ್ದರು ಹುಣ್ಣು ಸಿಡಿದು ವಿಷವಾಗಿ
ಸತ್ತೇ ಹೋಗುತ್ತಿದ್ದೆನಂತೆ, ಸಾವು ಕದ ತಟ್ಟಿ ಬಂದಿತ್ತೆ?

ಹೊಸ ಪೇಶೆಂಟು ಬಂದಂತಿದೆ
ಹಳೇ ಡಾಕ್ಟರುಗಳು ಸುತ್ತ ಮುತ್ತಿಕೊಂಡಿದ್ದಾರೆ
ಬಿಳಿ ಬಟ್ಟೆಯ ನರ್ಸುಗಳು ಅದೇನೇನೋ ಬರೆದುಕೊಳ್ಳುತ್ತಿದ್ದಾರೆ

ಸಾವು ಇಲ್ಲಿ ಮಾಮೂಲು, ಹುಟ್ಟೂ ನಿತ್ಯದ ದಿನಚರಿ
ಹುಟ್ಟು-ಸಾವುಗಳ ಅಂಗಡಿಯಲ್ಲಿ ಬೇಕಾದ್ದನ್ನು ಪಡೆಯುವಂತಿಲ್ಲ
ಕೊಟ್ಟಿದ್ದನ್ನು ಒಪ್ಪಿಕೊಂಡು ಹೋಗಬೇಕು

ಜನರಲ್ ವಾರ್ಡಿನ ತುಂಬ ಈಗ ಅದೆಂಥದೋ ಔಷಧಿಯ ಕಮಟು ವಾಸನೆ
ದೇಹ ಕಿತ್ತೆಸೆದು ಹೊರಡುವ ಆತ್ಮಕ್ಕೆ
ದೇಹ ಧರಿಸಿ ಬರುವ ಜೀವಕ್ಕೆ ಗಂಧವಿದೆಯೇ?

ಮಳೆ ಅಂದರೆ ನೀನಷ್ಟೆ ಕಣೆ...


ಮೊನ್ನೆ ಸಂಜೆ ಇಲ್ಲಿ ಮೊದಲ ಮಳೆ
ಎದೆ ತೋಯ್ದು ತೊಟ್ಟಿಕ್ಕುವಾಗ
ನಿನ್ನದೇ ನೆನಪು...

ಮಳೆ ಅಂದರೆ ಹಾಗೆ,
ನಿನ್ನ ಮಡಿಲಲ್ಲಿ ಹೀರಿದ
ಹಸಿ ಮಣ್ಣಿನ ಪರಿಮಳ..

ನಿನ್ನ ಒಳಗೆ ನಿಂತು
ನನ್ನ ಜೀವರಸವನ್ನೆಲ್ಲ ಹರಿಸುವಾಗ
ಹರಡಿದ ಗಮ್ಮನೆಯ ಅಧ್ಯಾತ್ಮ

ಮಳೆ ಅಂದರೆ,
ನಿನ್ನೊಳಗೆ ಜೀವ ತೇಕಿ, ದೇಹ ಜೀಕಿ
ಚಿಮ್ಮನೆ ಚೆಲ್ಲಿದ ಹುಡಿಹುಡಿ ಮಾತುಗಳು;
ಹಿಂದೆ ಬಿಮ್ಮನೆ ನಿಂತ ಕನವರಿಕೆಗಳು

ಮಳೆ ಅಂದರೆ,
ಹಣೆಯ ಸಿಂಧೂರ ತೋಯಿಸಿದ ಬೆವರು
ಎದೆಯ ಸೀಳಲ್ಲಿ ಕವಲಾಗಿ ಹರಿದ ಬಿಸಿಯುಸಿರು
ನಿನ್ನೊಳಗೆ ಜಾಗೃತಗೊಂಡ ತೇವ
ನನ್ನೊಳಗಿಂದ ನದಿಯಾಗಿ ಹರಿದ ಕಾವ್ಯ

ಮಳೆ ಅಂದರೆ,
ತುಟಿ ಒತ್ತಿದಾಗ ಉಳಿದ ಎಂಜಲ ಅಂಟು
ಮೊಲೆ ಹೀರುವಾಗ ಸಣ್ಣಗೆ ಜಿನುಗಿದ ಹಾಲು
ದೇಹವೇ ಇಡಿಯಾಗಿ ಚೀರಿ ಚಿಮ್ಮಿದ ಜೀವಚೈತನ್ಯ

ಮಳೆ ಅಂದರೆ,
ನೀನು
ಮತ್ತು ನೀನಷ್ಟೆ ಕಣೆ.....

ಕುಲುಮೆಯಲ್ಲಿ ಉರಿದುರಿದು....


-೧-
ಸಿಟ್ಟು ಸೆಡವು ಹತಾಶೆ ನೋವಿನಲ್ಲೂ ನೀನು
ಮೇಣದಂತೆ ಉರಿದುರಿದು
ಬೆಳಕಿಗಾಗಿ ಹಂಬಲಿಸುತ್ತೀ...
ಬೆಳಕಿಗೆ ಮೇಣ ಬೇಕು, ಮೇಣಕ್ಕೆ ಬೆಳಕಲ್ಲ.
ಉರಿಯುತ್ತ ಉರಿಯುತ್ತ ಮೇಣವೇ ಬೆಳಕಾಗುವ ವಿಸ್ಮಯ
ಅದ ನೋಡಿ ನಾನು ಬರಿದೇ ಬೂದಿಯಾಗುತ್ತಿದ್ದೇನೆ

-೨-
ನೀನು ನನ್ನ ಭೂತವಲ್ಲ, ಕನಸಲ್ಲ, ಬದುಕಲ್ಲ, ಭವಿಷ್ಯವಲ್ಲ
ಗುರಿಯಲ್ಲ, ಅಸ್ಮಿತೆಯಲ್ಲ...
ಏನೂ ಅಲ್ಲದಿರುವ ನೀನು ನನ್ನ
ಆತ್ಮವಿಶ್ವಾಸವಾದೀಯೆಂಬ ಭೀತಿ ನನಗೆ

-೩-
ಪ್ರೀತಿ, ಪ್ರೇಮ, ಮೋಹ, ಕಾಮಾದಿಗಳೆಲ್ಲವೂ ನಿರರ್ಥಕ
ನನಗೆ, ನಿನಗೆ ಬೇಕಿರುವುದು ಆತ್ಮಸಾಂಗತ್ಯ
ಅದಿರುವುದು ವಾಸ್ತವದ ಬೆಂಕಿಯ ಕುಲುಮೆಯಲ್ಲಿ
ಅಲ್ಲಿ ಬೇಯಬೇಕು, ಬೆಂದು ಉರಿದು ಹೋಗಬೇಕು

-೪-
ಕಲ್ಲು ಅಹಲ್ಯೆಗೆ ಮನುಷ್ಯಳಾಗುವ ತವಕ,
ನನಗೆ ಕಲ್ಲಾಗುವ ಆಶೆ
ಯಾಕೆಂದರೆ ಕಲ್ಲು ಕರಗುವುದಿಲ್ಲ
ಧ್ಯಾನಕ್ಕೆ ಬಿದ್ದ ಮನಸ್ಸು ಕರಗಲಾರದು
ಕರಗದ ಕಾಯ ನಿರಾಕಾರವಾಗಿ, ವಿಸ್ಮಯವಾಗಿ
ಅನಂತವಾಗಬೇಕು

-೫-
ನನ್ನ ದೇಹ, ಭಾವ, ಮಾತು, ಬುದ್ಧಿಯನ್ನು ಮೆಚ್ಚಬೇಡ
ಮೆಚ್ಚುವುದಿದ್ದರೆ ನನ್ನ ಚೈತನ್ಯವನ್ನು ಮೆಚ್ಚು
ಅದೊಂದೇ ಅವಿನಾಶಿ

-೬-
ನಾನು ಬೋಧಕನೂ ಅಲ್ಲ, ಬಾಧಕನೂ ಅಲ್ಲ
ಕಾಲಾಗ್ನಿಯಲ್ಲಿ ದಹಿಸಿಕೊಳ್ಳುತ ಕುಳಿತ
ಭೈರಾಗಿಯಂಥವನು
ನನಗೆ ಬೂದಿಯೇ ಬೆಳಕು
ಈ ಬೆಳಕಿನಿಂದಲೇ ಬದುಕನ್ನು ನೋಡಬಯಸುವೆ

-೭-
ಯಾರು ಯಾರನ್ನೂ ಬೆಳಗಿಸಲಾಗದು
ಬೆಳಗಲು ಬಯಸುವವರು ಕುಲುಮೆಯಲ್ಲಿ ಬೇಯಬೇಕು
ಉರಿಯಬೇಕು
ತಾನೇ ಬೇಯಲು ಹೊರಟವನು ಏನನ್ನು ಬೆಳಗಿಸಬಹುದು?



ಆ ನದಿಯಲ್ಲಿ..


ಹಾವಿನಂತೆ ಬಿದ್ದುಕೊಂಡ
ದೂರದ ಬೈಪಾಸ್ ರಸ್ತೆಯಲ್ಲಿ
ಭಾರಹೊತ್ತ ಲಾರಿಯೊಂದು
ದಮ್ಮುಕಟ್ಟಿ ದಬಾಯಿಸಿ
ಮುನ್ನುಗ್ಗುವ ಸದ್ದಾಗುತ್ತಿದೆ,
ಮಟಮಟ ಉರಿವ
ಬಿಸಿಲಿಗೆ ಪೈಪೋಟಿಯಲಿ
ಗುಂಯ್ಯನೆ ಬೀಸುವ ಗಾಳಿ
-ಗೆ ಅಲುಗುವ
ತೆಂಗಿನ ಗರಿಗಳ ಚಟಚಟ, ಪಟಪಟ.

ನನ್ನ ಸಾವಿನ ಚಿತ್ರ
ನಿನ್ನ ಕಣ್ಣುಗಳಿಗೆ ತರಿಸಿದ
ನೀರಿಗೆ ಬಣ್ಣವಿಲ್ಲ,
ಕೊರೆದು ಚೂಪಾದ
ಬಂಡೆಗಳ ತುದಿಯಲಿ ಹನಿಯುವ
ಎತ್ತರದ ಜಲಪಾತದೊಂದು
ಹನಿಗೂ ಬಣ್ಣವಿಲ್ಲ.

ರಾತ್ರಿಯ ಕಪ್ಪು, ಕಡುಗಪ್ಪು ಮೋಡದೊಳಗೆ
ಮೆಲ್ಲಮೆಲ್ಲನೆ ಸರಿಯುವ
ಚಂದಿರನ ಕಾಲ್ಸಪ್ಪಳ,
ನೋವ ಸುಖದಲ್ಲಿ
ಮೌನವಾಗಿ ಹರಿದ
ಮೈಥುನ ನಿನಾದ,
ಭೂಮಿಯಾಳ ಆಳಕ್ಕಿಳಿದ
ಕಾಣದ ಬೇರು; ಮೇಲೆ ಹಸಿರ ಚಿಗುರು.

*****

ಬೆಣಚು ಕಲ್ಲುಗಳ ಮೇಲೆ
ಹರಿಯುವ ಶೀತಲ ನೀರಿಗೆ
ಕಾಲಿಳೆಬಿಟ್ಟು ನೀರು ಚಿಮ್ಮುತ್ತ,
ಉಗ್ಗುತ್ತ ಎಗ್ಗಿಲ್ಲದೆ ನುಗ್ಗುವ
ಆ ನದಿ
ಕನಸಲ್ಲಿ ಹರಿದಿತ್ತು...

ಮಧ್ಯರಾತ್ರಿ ಕಳೆದಿತ್ತು,
ಮಲಗುವ ಮುನ್ನ
ಮುಚ್ಚಲು ಮರೆತಿದ್ದ
ಕೋಣೆಯ ಕಿಟಕಿಗಳ ಹೊರಗೆ
ನಿಬ್ಬೆರಗಾಗಿಸುವ ಆಕಾಶ,
ಲಕಲಕಿಸುವ ಗೊಂಚಲು ಗೊಂಚಲು ತಾರೆಗಳು,
ಇರುಳು ಮೀಯಲು ಇಳಿದಂತೆ
ಆ ನದಿಯೊಳಗೆ...

ಒಂದರೆಗಳಿಗೆ
ನಾನೂ ಮಿಂದೆದ್ದೆ
ಅಸಂಖ್ಯ ತಾರೆಗಳ ಕೊಳದಲ್ಲಿ,
ದೂರ ಬೆಟ್ಟದ ಪರಿಮಳ,
ಓಡಿದಷ್ಟು ಬೆನ್ನು ಹತ್ತುವ, ಮುತ್ತುವ
ಕಾಡುಗುಲಾಬಿಯ ಸುಗಂಧ,
ಭೂಮಿಯುಸಿರಿನ ಸುವಾಸನೆಯಲಿ
ಮಣ್ಣ ತೊಟ್ಟಿಲು ಜೋ...ಜೋಗುಳ
ಹಾಡುತ್ತಿದ್ದಂತೆ
ಮಿಂದ ಮೈ ಮನಸ್ಸು
ನಿಧಾನ, ಧ್ಯಾನ... ಮಂಪರು, ನಿದ್ದೆ...



ನಾಲ್ಕು ಕವಿತೆಗಳು

ಜನರಲ್ ವಾರ್ಡಿನಲ್ಲಿ...


ಜನರಲ್ ವಾರ್ಡಿನ ತುಂಬ ಸಾವಿನ ವಾಸನೆ
ಗೂರಲು ಕೆಮ್ಮಿನ ಮುದುಕ ಬೆಳಿಗ್ಗೆಯಷ್ಟೆ ತೀರಿದ್ದಾನೆ
ಅವನು ಮಲಗಿದ್ದ ಹಾಸಿಗೆಗೆ ಹೊಸ ಬೆಡ್‌ಶೀಟು ಬಂದಿದೆ

ನಿನ್ನೆಯಷ್ಟೆ ಸುಟ್ಟುಕೊಂಡು ಬಂದ ಹೆಣ್ಮಗಳ ಸುತ್ತ ಪರದೆ
ಅಸಹ್ಯ ಕಮಟು. ರಕ್ತವೇ ಬಿಳಿಬಿಳಿಯಾಗಿ ಜಿನುಗುತ್ತಿರಬಹುದು
ಸಾವು ನಾಳೆಯೋ ನಾಡಿದ್ದೋ ಯಾರಿಗೆ ಗೊತ್ತು?

ಹೊಸದೊಂದು ಮಗು ಹುಟ್ಟಿದೆ
ತಾಯಿ ಹಾಲೂಡಿಸುತ್ತಿದ್ದಾಳೆ ಎಲ್ಲರೆದುರೇ
ನಾಚಿಕೆ ಕಳೆದುಕೊಂಡ ಹುಡುಗಿ ಈಗ ಹೆಂಗಸಾಗಿದ್ದಾಳೆ

ನನ್ನ ಕರುಳ ಹುಣ್ಣು ಕತ್ತರಿಸಿಯಾಗಿದೆ
ಬಿದ್ದುಕೊಂಡಿದ್ದೇನೆ, ಅಲ್ಲಾಡದಂತೆ ಹೊಲಿಗೆ ಬಿಚ್ಚದಂತೆ
ಮಂಚದ ಕೆಳಗೆ ಯಳನೀರು ಬುರುಡೆ, ಕಪಾಟಿನಲ್ಲಿ ಗ್ಲೂಕೋಸು ಬಾಟಲಿಗಳು

ಕೊಯ್ಯುವಾಗ ಹೇಳಿದ್ದರು ಡಾಕ್ಟರು;
ಸ್ವಲ್ಪ ತಡಮಾಡಿದ್ದರು ಹುಣ್ಣು ಸಿಡಿದು ವಿಷವಾಗಿ
ಸತ್ತೇ ಹೋಗುತ್ತಿದ್ದೆನಂತೆ, ಸಾವು ಕದ ತಟ್ಟಿ ಬಂದಿತ್ತೆ?

ಹೊಸ ಪೇಶೆಂಟು ಬಂದಂತಿದೆ
ಹಳೇ ಡಾಕ್ಟರುಗಳು ಸುತ್ತ ಮುತ್ತಿಕೊಂಡಿದ್ದಾರೆ
ಬಿಳಿ ಬಟ್ಟೆಯ ನರ್ಸುಗಳು ಅದೇನೇನೋ ಬರೆದುಕೊಳ್ಳುತ್ತಿದ್ದಾರೆ

ಸಾವು ಇಲ್ಲಿ ಮಾಮೂಲು, ಹುಟ್ಟೂ ನಿತ್ಯದ ದಿನಚರಿ
ಹುಟ್ಟು-ಸಾವುಗಳ ಅಂಗಡಿಯಲ್ಲಿ ಬೇಕಾದ್ದನ್ನು ಪಡೆಯುವಂತಿಲ್ಲ
ಕೊಟ್ಟಿದ್ದನ್ನು ಒಪ್ಪಿಕೊಂಡು ಹೋಗಬೇಕು

ಜನರಲ್ ವಾರ್ಡಿನ ತುಂಬ ಈಗ ಅದೆಂಥದೋ ಔಷಧಿಯ ಕಮಟು ವಾಸನೆ
ದೇಹ ಕಿತ್ತೆಸೆದು ಹೊರಡುವ ಆತ್ಮಕ್ಕೆ
ದೇಹ ಧರಿಸಿ ಬರುವ ಜೀವಕ್ಕೆ ಗಂಧವಿದೆಯೇ?

ಮಳೆ ಅಂದರೆ ನೀನಷ್ಟೆ ಕಣೆ...


ಮೊನ್ನೆ ಸಂಜೆ ಇಲ್ಲಿ ಮೊದಲ ಮಳೆ
ಎದೆ ತೋಯ್ದು ತೊಟ್ಟಿಕ್ಕುವಾಗ
ನಿನ್ನದೇ ನೆನಪು...

ಮಳೆ ಅಂದರೆ ಹಾಗೆ,
ನಿನ್ನ ಮಡಿಲಲ್ಲಿ ಹೀರಿದ
ಹಸಿ ಮಣ್ಣಿನ ಪರಿಮಳ..

ನಿನ್ನ ಒಳಗೆ ನಿಂತು
ನನ್ನ ಜೀವರಸವನ್ನೆಲ್ಲ ಹರಿಸುವಾಗ
ಹರಡಿದ ಗಮ್ಮನೆಯ ಅಧ್ಯಾತ್ಮ

ಮಳೆ ಅಂದರೆ,
ನಿನ್ನೊಳಗೆ ಜೀವ ತೇಕಿ, ದೇಹ ಜೀಕಿ
ಚಿಮ್ಮನೆ ಚೆಲ್ಲಿದ ಹುಡಿಹುಡಿ ಮಾತುಗಳು;
ಹಿಂದೆ ಬಿಮ್ಮನೆ ನಿಂತ ಕನವರಿಕೆಗಳು

ಮಳೆ ಅಂದರೆ,
ಹಣೆಯ ಸಿಂಧೂರ ತೋಯಿಸಿದ ಬೆವರು
ಎದೆಯ ಸೀಳಲ್ಲಿ ಕವಲಾಗಿ ಹರಿದ ಬಿಸಿಯುಸಿರು
ನಿನ್ನೊಳಗೆ ಜಾಗೃತಗೊಂಡ ತೇವ
ನನ್ನೊಳಗಿಂದ ನದಿಯಾಗಿ ಹರಿದ ಕಾವ್ಯ

ಮಳೆ ಅಂದರೆ,
ತುಟಿ ಒತ್ತಿದಾಗ ಉಳಿದ ಎಂಜಲ ಅಂಟು
ಮೊಲೆ ಹೀರುವಾಗ ಸಣ್ಣಗೆ ಜಿನುಗಿದ ಹಾಲು
ದೇಹವೇ ಇಡಿಯಾಗಿ ಚೀರಿ ಚಿಮ್ಮಿದ ಜೀವಚೈತನ್ಯ

ಮಳೆ ಅಂದರೆ,
ನೀನು
ಮತ್ತು ನೀನಷ್ಟೆ ಕಣೆ.....

ಕುಲುಮೆಯಲ್ಲಿ ಉರಿದುರಿದು....


-೧-
ಸಿಟ್ಟು ಸೆಡವು ಹತಾಶೆ ನೋವಿನಲ್ಲೂ ನೀನು
ಮೇಣದಂತೆ ಉರಿದುರಿದು
ಬೆಳಕಿಗಾಗಿ ಹಂಬಲಿಸುತ್ತೀ...
ಬೆಳಕಿಗೆ ಮೇಣ ಬೇಕು, ಮೇಣಕ್ಕೆ ಬೆಳಕಲ್ಲ.
ಉರಿಯುತ್ತ ಉರಿಯುತ್ತ ಮೇಣವೇ ಬೆಳಕಾಗುವ ವಿಸ್ಮಯ
ಅದ ನೋಡಿ ನಾನು ಬರಿದೇ ಬೂದಿಯಾಗುತ್ತಿದ್ದೇನೆ

-೨-
ನೀನು ನನ್ನ ಭೂತವಲ್ಲ, ಕನಸಲ್ಲ, ಬದುಕಲ್ಲ, ಭವಿಷ್ಯವಲ್ಲ
ಗುರಿಯಲ್ಲ, ಅಸ್ಮಿತೆಯಲ್ಲ...
ಏನೂ ಅಲ್ಲದಿರುವ ನೀನು ನನ್ನ
ಆತ್ಮವಿಶ್ವಾಸವಾದೀಯೆಂಬ ಭೀತಿ ನನಗೆ

-೩-
ಪ್ರೀತಿ, ಪ್ರೇಮ, ಮೋಹ, ಕಾಮಾದಿಗಳೆಲ್ಲವೂ ನಿರರ್ಥಕ
ನನಗೆ, ನಿನಗೆ ಬೇಕಿರುವುದು ಆತ್ಮಸಾಂಗತ್ಯ
ಅದಿರುವುದು ವಾಸ್ತವದ ಬೆಂಕಿಯ ಕುಲುಮೆಯಲ್ಲಿ
ಅಲ್ಲಿ ಬೇಯಬೇಕು, ಬೆಂದು ಉರಿದು ಹೋಗಬೇಕು

-೪-
ಕಲ್ಲು ಅಹಲ್ಯೆಗೆ ಮನುಷ್ಯಳಾಗುವ ತವಕ,
ನನಗೆ ಕಲ್ಲಾಗುವ ಆಶೆ
ಯಾಕೆಂದರೆ ಕಲ್ಲು ಕರಗುವುದಿಲ್ಲ
ಧ್ಯಾನಕ್ಕೆ ಬಿದ್ದ ಮನಸ್ಸು ಕರಗಲಾರದು
ಕರಗದ ಕಾಯ ನಿರಾಕಾರವಾಗಿ, ವಿಸ್ಮಯವಾಗಿ
ಅನಂತವಾಗಬೇಕು

-೫-
ನನ್ನ ದೇಹ, ಭಾವ, ಮಾತು, ಬುದ್ಧಿಯನ್ನು ಮೆಚ್ಚಬೇಡ
ಮೆಚ್ಚುವುದಿದ್ದರೆ ನನ್ನ ಚೈತನ್ಯವನ್ನು ಮೆಚ್ಚು
ಅದೊಂದೇ ಅವಿನಾಶಿ

-೬-
ನಾನು ಬೋಧಕನೂ ಅಲ್ಲ, ಬಾಧಕನೂ ಅಲ್ಲ
ಕಾಲಾಗ್ನಿಯಲ್ಲಿ ದಹಿಸಿಕೊಳ್ಳುತ ಕುಳಿತ
ಭೈರಾಗಿಯಂಥವನು
ನನಗೆ ಬೂದಿಯೇ ಬೆಳಕು
ಈ ಬೆಳಕಿನಿಂದಲೇ ಬದುಕನ್ನು ನೋಡಬಯಸುವೆ

-೭-
ಯಾರು ಯಾರನ್ನೂ ಬೆಳಗಿಸಲಾಗದು
ಬೆಳಗಲು ಬಯಸುವವರು ಕುಲುಮೆಯಲ್ಲಿ ಬೇಯಬೇಕು
ಉರಿಯಬೇಕು
ತಾನೇ ಬೇಯಲು ಹೊರಟವನು ಏನನ್ನು ಬೆಳಗಿಸಬಹುದು?



ಆ ನದಿಯಲ್ಲಿ..


ಹಾವಿನಂತೆ ಬಿದ್ದುಕೊಂಡ
ದೂರದ ಬೈಪಾಸ್ ರಸ್ತೆಯಲ್ಲಿ
ಭಾರಹೊತ್ತ ಲಾರಿಯೊಂದು
ದಮ್ಮುಕಟ್ಟಿ ದಬಾಯಿಸಿ
ಮುನ್ನುಗ್ಗುವ ಸದ್ದಾಗುತ್ತಿದೆ,
ಮಟಮಟ ಉರಿವ
ಬಿಸಿಲಿಗೆ ಪೈಪೋಟಿಯಲಿ
ಗುಂಯ್ಯನೆ ಬೀಸುವ ಗಾಳಿ
-ಗೆ ಅಲುಗುವ
ತೆಂಗಿನ ಗರಿಗಳ ಚಟಚಟ, ಪಟಪಟ.

ನನ್ನ ಸಾವಿನ ಚಿತ್ರ
ನಿನ್ನ ಕಣ್ಣುಗಳಿಗೆ ತರಿಸಿದ
ನೀರಿಗೆ ಬಣ್ಣವಿಲ್ಲ,
ಕೊರೆದು ಚೂಪಾದ
ಬಂಡೆಗಳ ತುದಿಯಲಿ ಹನಿಯುವ
ಎತ್ತರದ ಜಲಪಾತದೊಂದು
ಹನಿಗೂ ಬಣ್ಣವಿಲ್ಲ.

ರಾತ್ರಿಯ ಕಪ್ಪು, ಕಡುಗಪ್ಪು ಮೋಡದೊಳಗೆ
ಮೆಲ್ಲಮೆಲ್ಲನೆ ಸರಿಯುವ
ಚಂದಿರನ ಕಾಲ್ಸಪ್ಪಳ,
ನೋವ ಸುಖದಲ್ಲಿ
ಮೌನವಾಗಿ ಹರಿದ
ಮೈಥುನ ನಿನಾದ,
ಭೂಮಿಯಾಳ ಆಳಕ್ಕಿಳಿದ
ಕಾಣದ ಬೇರು; ಮೇಲೆ ಹಸಿರ ಚಿಗುರು.

*****

ಬೆಣಚು ಕಲ್ಲುಗಳ ಮೇಲೆ
ಹರಿಯುವ ಶೀತಲ ನೀರಿಗೆ
ಕಾಲಿಳೆಬಿಟ್ಟು ನೀರು ಚಿಮ್ಮುತ್ತ,
ಉಗ್ಗುತ್ತ ಎಗ್ಗಿಲ್ಲದೆ ನುಗ್ಗುವ
ಆ ನದಿ
ಕನಸಲ್ಲಿ ಹರಿದಿತ್ತು...

ಮಧ್ಯರಾತ್ರಿ ಕಳೆದಿತ್ತು,
ಮಲಗುವ ಮುನ್ನ
ಮುಚ್ಚಲು ಮರೆತಿದ್ದ
ಕೋಣೆಯ ಕಿಟಕಿಗಳ ಹೊರಗೆ
ನಿಬ್ಬೆರಗಾಗಿಸುವ ಆಕಾಶ,
ಲಕಲಕಿಸುವ ಗೊಂಚಲು ಗೊಂಚಲು ತಾರೆಗಳು,
ಇರುಳು ಮೀಯಲು ಇಳಿದಂತೆ
ಆ ನದಿಯೊಳಗೆ...

ಒಂದರೆಗಳಿಗೆ
ನಾನೂ ಮಿಂದೆದ್ದೆ
ಅಸಂಖ್ಯ ತಾರೆಗಳ ಕೊಳದಲ್ಲಿ,
ದೂರ ಬೆಟ್ಟದ ಪರಿಮಳ,
ಓಡಿದಷ್ಟು ಬೆನ್ನು ಹತ್ತುವ, ಮುತ್ತುವ
ಕಾಡುಗುಲಾಬಿಯ ಸುಗಂಧ,
ಭೂಮಿಯುಸಿರಿನ ಸುವಾಸನೆಯಲಿ
ಮಣ್ಣ ತೊಟ್ಟಿಲು ಜೋ...ಜೋಗುಳ
ಹಾಡುತ್ತಿದ್ದಂತೆ
ಮಿಂದ ಮೈ ಮನಸ್ಸು
ನಿಧಾನ, ಧ್ಯಾನ... ಮಂಪರು, ನಿದ್ದೆ...



ಶನಿವಾರ, ಜುಲೈ 23, 2011

ಕಾಳ ಮೇಲಿನ ಶಾಸನ

  ಚನ್ನಪ್ಪ ಅಂಗಡಿ ಬಮ್ಮನಹಳ್ಳಿ   

ಅಂಗಳದಲ್ಲಿ ಅಕಸ್ಮಾತು ಬಿದ್ದ ಜೋಳದ ಕಾಳು
ಗಿಡವಾಗಿ ಅತ್ತಿತ್ತ ತೊನೆದದ್ದು ಆಕಸ್ಮಿಕವಲ್ಲ
ಅದಕಿರುವ ತೆನೆ ತುರಾಯಿ ಯಾರ ಮುಲಾಜಿಗಲ್ಲ
ತಲೆಯ ಸುತ್ತ ತಿರುಗುವ ಪರಾಗಮೋಡ,
ಚಕ್ರ ತಿರುಗುತಿದೆ, ನಾಳೆ ಬರುವದಿದೆ ಎಂದು ಹುಯಿಲಿಟ್ಟಿತು
ಅಡಿಯಿಂದಲೇ ಕಾಳುಗಟ್ಟಿ ತಲೆಯೆತ್ತಿದ ತೆನೆ
ಕಾಲಕೆ ತನ್ನದೇ ಗತಿಯಿದೆಯಂದಿತು.
ಬಂದಷ್ಟು ಬರಲಿ ಕುಟ್ಟಿ ರೊಟ್ಟಿ ಮಾಡುವದು
ಧರ್ಮವೆಂದೆ; ಮನೆ ಮಾಲೀಕನ ಪೋಜಿನಲಿ ನಿಂದೆ
ಇದು ಆಂತರಿಕ ಸಂಗತಿ
ಅಡುಗೆಮನೆ ವಿಚಾರವೆಂದಳು ಹೆಂಡತಿ
ಹಂಚಿಳಿಸುವ ಮೊದಲು ಹಾಕಿದರೆ ಕಾಳು ಮಕ್ಕಳ ಕೈತುಂಬ ಗರಿಗರಿ ಅರಳು
ಮಗಳೇನು ಕಮ್ಮಿಯೆ?
ಅಪರೂಪಕ್ಕೊಂದರಳಿದೆ ಕಲಾಕೃತಿ
ನನ್ನ ಸ್ಕೂಲ್ ಕ್ರಾಫ್ಟಾಗಬೇಕು ವಿಶೇಷ ರೀತಿ
ಸೀತೆನೆ ಸುಟ್ಟು ತಿಂದರೆಂಥ ಮಧುರ
ಪ್ರಸ್ತಾಪಿಸಿದ ಅಸಲಿ ವಾರಸುದಾರ
ಅದೊಂದು ಭಾನುವಾರ ಎಲ್ಲವೂ ಸಸಾರ
ಅಂಗಳಕೆ ಬಂದು ಆಕಳಿಸಿದ ಸದ್ದಿಗೆ
ಪುರ‌್ರೆಂದು ಹಾರಿತೊಂದು ಗುಬ್ಬಿ
ತೆನೆಯ ಕೊನೆಯ ಕಾಳನು ಕೊಕ್ಕಲಿ ತಬ್ಬಿ
ಸೂರ ಸಂದಿಯಲಿನ ಗೂಡಿಗೆ ಹಾರಿತು
ತೆರೆದ ಬಾಯಿಗೆ ಗುಟುಕಿಕ್ಕಿ-ಎಲ್ಲವೂ ನಿಕ್ಕಿ.

ಶುಕ್ರವಾರ, ಜುಲೈ 22, 2011

ಮೂರು ಕವಿತೆಗಳು

ಗೋಡೆಗಂಟಿಕೊಂಡವರೆ..




ತೂಗು ನಿಲ್ಲುವುದಿಲ್ಲ

ಅವ ಇಳಿದು, ಇವ ಏರಿ
ಅವಳು ಉಕ್ಕಿ, ಇವಳು ಹರಿದು,
ಅವನೊಳಗೆ ಇವಳು
ಇವಳೊಳಗೆ ಅವ ಹೊಕ್ಕು ಹೊರಬಂದರೂ
ತೂಗು ನಿಲ್ಲುತ್ತಲೇ ಇಲ್ಲ.

ಇಳಿಬಿದ್ದ ಕೈ-ಕಾಲು, ಕತ್ತು
ಹಿಡಿದಿಟ್ಟ ತೂಗು ಚೌಕಟ್ಟು,
ನೆಲ ಹಂಬಲ
ಬಯಕೆ ಮುಗಿಲ
ತೂಗು ನಿಲ್ಲುತ್ತಿಲ್ಲ
ಬದಲಾಗಿವೆಯಷ್ಟೇ ಕೈಗಳು.

ನಾಗೊಂದಿಬಂದಿಯ ಹಾಡು
ಜೀಕು-ಜೀಕಿಗೂ ಲಯ ಬದಲು
ಅವರವರ ದನಿಗೆ ತಾರಕ, ಮಂದ್ರ
ಮಧ್ಯ ಸಪ್ತಕವೂ,
ನಿಲ್ಲುವುದಿಲ್ಲ ತೂಗುನಾದ

ಅದು ಅಪ್ಪ, ಇದು ಅಮ್ಮ-
-ಅಮ್ಮಮ್ಮ ಅಣ್ಣ- ಅಕ್ಕ,
ಅಕ್ಕ ಪಕ್ಕ ಕಣ್ ಕಣ-ಕಣ
ಮಾತುಗಳವು ಸೂರು ಹಾರಿ,
ಬಾಗಿಲ ದೂಡಿ, ಜಿಗಿದೋಡಿ ಗೋಡೆ
ಮತ್ತಿಳಿದು ಗಿರಕಿ ಹೊಡೆವ
ಚಚ್ಚೌಕಕೆ ಅಂಟಿಕೊಳ್ಳುವ ಜೀವಗಳು
ನಿಲ್ಲುವುದಿಲ್ಲ ತೂಗು
ಕೈಗಳಷ್ಟೇ ಬದಲು.

ಹಿತ ತೂಗು, ಸಮತೂಗು,
ಜೋರು ತೂಗು, ಎತ್ತಿ ಕುಕ್ಕರಿಸಿ,
ಅಪ್ಪಳಿಸುವ, ಮುಳುಗೇಳಿಸುವ ತೂಗು,
ಮುಗ್ಗರಿಸಿ ಬಿದ್ದಾಗ ಮಮತೆ ತೂಗು,
ನೆಲ ಹಂಬಲ
ಬಯಕೆ ಮುಗಿಲ
ತೂಗು ನಿಲ್ಲುವುದಿಲ್ಲ
ಕೈಗಳಷ್ಟೇ ಬದಲು.


ಸವಿ(ಯಾಗಿ)ದೆ?



ಅಡಿಗಡಿಗೆ ಕಡೆಯುತ್ತ ಮಜ್ಜಿಗೆ
-ಪ್ರೀತಿ ಕಡೆಗೋಲೇ ಅವನಾಗಿ,
ತುಟಿಯಾಚೆಗೀಚೆ
ಆದೀತದು ಬೆಣ್ಣೆ,
ಹೋಗದಿರಲಿ ಮಾತುಗಾವಿಗೆ
ಹರಿದೆಂದು,
ಎದೆಕಾವಲಿಯೂ ತಾನಾಗಿದ್ದಾನೆ
ತುಪ್ಪವಾಗಿಸಲು.

ಹಾಲ್‌ಕೆನೆಗೆ ಹನಿ ಹೆಪ್ಪು,
ಹದಮೊಸರು ನೀಡಿದವರ
ವಿಳಾಸ ಹೇಳೆಂದರೆ,

'ಅರಳ ಬೆಣ್ಣೆ
ತುಣುಕುಗಳವು ತೇಲುತಿವೆ
ನೋಡೇ ಅಲ್ಲಿ
ಮರೆತು ಮುಳುಗ...?'

ಮೆತ್ತುತ್ತಿದ್ದಾನೆ ತುಣುಕೊಂದ
ಕರಗಲೆಂದು ಮಾತು ಒಳಗೇ.

ಯಾವ ಊರಿನ ಕುಂಬಾರಂವ?
ಎಷ್ಟು ಈ ಮಾಟುಗಡಿಗೆಗೆ?
ತಂದು ಕೊಡುವಾ ಗೆಳತಿಗೊಂದು?

'ಅಲ್ಲ ಕಣೆ ಇದು ಸಮಯ
ಹೇಳಿ, ಕೇಳಿ, ಕೊಳ್ಳಲು.
ಹಿಡಿಯೊಮ್ಮೆ ಬೊಗಸೆ,
ಇಕೋ ಈ ಬೆಣ್ಣೆಚೆಂಡು'!

ಇಟ್ಟು ಕರಗುಚೆಂಡು
ಬೆಸೆಯುತ್ತಿದ್ದಾನೆ ಬಿಚ್ಚದಂತೆ ಕೈ.

ಎಂಥ ಚೆಂದದ ಕಂಬವಿದು
ಬೆಣ್ಣೆ ಪಕಳೆಯುಂಡ
ಮೈಮಿನುಗ ನೋಡು ಅದರ!
ನಿನ್ನಮ್ಮ, ನನ್ನಮ್ಮನ
ಕೈಹಿಸುಕುಗಳೆಲ್ಲ
ಸವೆಸಿದಂತಿಲ್ಲ ಇದನ?

'ತಗೊ.. ಕಡೆಗೋಲಿಗಂಟಿದ
ಚುಕ್ಕೆಬೆಣ್ಣೆಗಳೂ ನಿನ್ನವೇ..
ಸವಿಯೇ ರಾಣಿ
ಮೆಲ್ಲಗೆ...’

'ಬೆಣ್ಣೆಯದು ಮೆದುವು
ನಿನಗಿಂತ, ನನಗಿಂತ;
ಕರಗುವ ಮೊದಲೇ ಸವಿಯೆ
ನನ್ನ ಜಾಣೇ..'

ಗಡಿಗೆಯೆಂಬ ಬ್ರಹ್ಮಾಂಡದಲಿ
ಆಡಿಸಿದಂತೆ ಆಡುವ
ಕಡೆಗೋಲು ಕಣೋ ಇದು.

ಕಡೆದಾಗೆಲ್ಲ
ಉಕ್ಕಿದೆ ನೊರೆ
ತೇಲಿದೆ ಬೆಣ್ಣೆ
ಅಮೃತಭಾಂಡವಲ್ಲವೆ?

ಸದ್ಯ
ನನ್ನಪ್ಪ-ನಿನ್ನಪ್ಪನಿಗೆ
ಸಿಗದಿದ್ದರೆ ಸಾಕಷ್ಟೆ!

-ಶ್ರೀದೇವಿ ಕಳಸದ 

 

ವಸುಂಧರೆ



ಹಸಿರು ಸೀರೆ ರವಿಕೆಯ ಉಟ್ಟು,
ಆಗೊಮ್ಮೆ ಈಗೊಮ್ಮೆ ಹಣೆಗೆ
ಕೆಂಪು ಬೊಟ್ಟನಿಟ್ಟು,
ಮುಡಿಯ ತುಂಬೆಲ್ಲ ಘಮ ಬೀರೊ
ಹೂವಮುಟ್ಟು,
ಸುರಿಯುತಿರೊ ಸೋನೆ ಮಳೆಗೆ
ಮೈಯೊಡ್ಡಿ ನಿಂತಿಹಳು ಈಕೆ,
ಹನಿಗಳಾಲಿಂಗನಕೆ ನೆನೆದಷ್ಟು
ಹಸನಾಕೆ,
ಹಕ್ಕಿಪಕ್ಕಿಗಳ ಕಲರವಕೆ
ಮತ್ತಷ್ಟು ಮೆರಗು,
ಹರಿವ ತೊರೆಗಳಿಗೆ
ಸಾಗುತಿಹ ದಾರಿಗಾಗದೆ ಬೆರಗು,

ಗಿಡ ಹಸಿರು, ಮರ ಹಸಿರು
ನೆಲವೆಲ್ಲ ಹಸಿರು,
ಅಷ್ಟೇಕೆ ಕಲ್ಲು ಬಂಡೆಗಳೆ ಹಸಿರು,
ಇಷ್ಟೆಲ್ಲಕೆ ಕಾರಣಳು
ಭುವಿಗೊಡತಿ, ಜಗಕೊಡತಿ
ಈ ಭೂಮಾತೆಯು ತಾನೆ

ಇವಳು ವಸುಂಧರೆಯು
ಸಿಟ್ಟು ಬಂದರೆ ಬರ,
ಅಳು ಬಂದರೆ ನೆರೆ,
ಇವಳ ನಗುಮೊಗದಿಂದ
ನಾವೆಲ್ಲ ಸೌಖ್ಯ. 
 
 

ಬುಧವಾರ, ಜುಲೈ 20, 2011

ಶಹರದಲ್ಲಿ ಹದಿಹರೆಯ





















ನಾನು ಮುಂಬೈಯಲ್ಲಿದ್ದಾಗ ಬರೆದ ಪದ್ಯ ಇದು. ಪ್ರವಾದಿಯ ಕನಸು ಸಂಕಲನದಲ್ಲಿ ಇದು ಪ್ರಕಟವಾಗಿದೆ.

ಕೋಣೆಯ ಮಧ್ಯೆ
ಗೋಡೆ ಬಿತ್ತಿ
ಮನೆಗಳ ಬೆಳೆ ತೆಗೆವ ಶಹರದಲ್ಲಿ
ಹದಿಹರೆಯ ಕಾಲಿರಿಸಿ
ಮರಗಿಡಗಳ ನೆನಪು ಹುಟ್ಟಿಸುವುದು!

ಪ್ರಾಯದ ತೆನೆ ತೂಗಿ ಬಾಗುವ ಮಕ್ಕಳು
ಬಿಸಿಯುಸಿರಗರೆದರೆಂದು
ಕನಸಿನಲ್ಲಿ ಬೆಚ್ಚಿ
ತಾಯಿ ದೀಪ ಹಚ್ಚಿ ಕೂರುವಳು

ಕತ್ತಲಲ್ಲಿ ಬೆವರುತ್ತಾ
ನಿದ್ದೆ ಹೋದ ಹೆಣ್ಣು ಮಗಳು
ಸ್ವಪ್ನದ ಹಿತ್ತಲಲ್ಲಿ
ಜಾತ್ರ್ರೆ ಹೂಡಿದ್ದ
ಏಕಾಂತದ ಜತೆ ವ್ಯಾಪಾರಕ್ಕಿಳಿದು
ತನಗೆ ತಾನೆ ನಗುವಳು

ಅಣ್ಣ ಆಯಿಯ ನಡುವೆ
ಒದ್ದೆಯಾದ
ಜೀನ್ಸ್ ಹುಡುಗನ
ಬಿಸಿಯುಸಿರು ಬಡಿದು
ಕೋಣೆಯ ಗೋಡೆ ಬಿರುಕು ಬಿಡುವವು!



ಚಪ್ಪರ ಕಳಚುವ ಹೊತ್ತು

 


ನನ್ನ ‘ಪ್ರವಾದಿಯ ಕನಸು’ ಸಂಕಲನದಿಂದ ಆಯ್ದ ಇನ್ನೊಂದು ಕವಿತೆ ನಿಮ್ಮ ಮುಂದಿದೆ.


ಹಸಿದ ಹೊಟ್ಟೆ
ತೆರೆದ ಬಾಯಿ
ಕಸದ ಬುಟ್ಟಿಗೆ ಗೊತ್ತು
ಇದು
ಚಪ್ಪರ ಕಳಚುವ ಹೊತ್ತು!

ಹಳಸಿದ ಅನ್ನ
ಮಾಸಿದ ಬಣ್ಣ-ಸುಣ್ಣ
ಕಟ್ಟಿದ ತೋರಣ
ಯಾರಲ್ಲಿ....ಕಸಬರಿಕೆ ತನ್ನಿ
ಅದರ ಹೊಟ್ಟೆಗೆ ಸುರಿದು ಬನ್ನಿ!

ಬೇರು ಬಿಟ್ಟರೆ ಕಂಬಗಳು
ನೆಲದಾಳಕ್ಕೆ
ಕೊಡಲಿಯಿಟ್ಟು ಮುರಿದು ಬಿಡಿ
ಸುಕ್ಕು ಬಿದ್ದ ಜರಿ ಕಾಗದಗಳ ಕಿತ್ತು
ಬಿಸಿ ನೀರು ಕಾಯಿಸುವುದಕ್ಕೆ
ಒಳಗೆ ಕೊಡಿ!

ಬಾಡಿಗೆ ತಂದ ಪ್ಲೇಟು-ಲೋಟ
ಲೆಕ್ಕ ಮಾಡಿ
ನಿಮ್ಮ ನಿಮ್ಮ ಎದೆಗಳನ್ನು ತಡವಿ
ಇನ್ನೂ ಉರಿಯುತ್ತಿದ್ದರೆ ಬಣ್ಣದ ದೀಪ
ಆರಿಸಿ ಜಾಗೃತೆ
ಬಾಡಿಗೆಯವನದು ಪಾಪ!

ನಿದ್ದೆ ಕಳಚಿ ಎದ್ದವರ ಕಣ್ಣುಗಳಲ್ಲಿ
ಪಾಳು ಬಿದ್ದ ಮನೆ
ಆಕಾಶವ ತುಂಬಿಕೊಂಡು ನಿನ್ನೆ
ನಕ್ಷತ್ರಗಳ ಗಿಲಕಿ ಆಡಿದವರು
ಇರುಳ ಕಂಬಳಿಯಂತೆ ಹೊದ್ದು
ನೆಲ ಮುಟ್ಟಿದ ಚಪ್ಪರ-
ವನ್ನೇ ನೋಡುತ್ತಾರೆ ಕದ್ದು!

ಗೋಡೆ ತುಂಬಾ...
ಹಚ್ಚಿಟ್ಟ ಮದಿರಂಗಿಯಂತೆ
ಯಾರ್ಯಾರೋ ಊರಿದ್ದ ಗುರುತು
ಇನ್ನೊಂದು ಹಬ್ಬ-ಹರಿದಿನದ
ನಿರೀಕ್ಷೆಯಲ್ಲಿ
ನೆರಳಂತೆ ಮನೆ ತುಂಬಾ ಸುಳಿಯುವವರು
ಉಳಿಯುವವರು!

ಕತ್ತಲು ಇನ್ನೂ ಹರಿದಿಲ್ಲ
ವೌನ ಮುರಿದಿಲ್ಲ
ಗಪ್ಪೆಂದರೂ ಹಕ್ಕಿ-ಪಿಕ್ಕಿಗಳ ದನಿಯಿಲ್ಲ
ಓಯ್...ಚಪ್ಪರ ಕಳಚುವುದಕ್ಕೆ
ಇನ್ನೇಕೆ ಹೊತ್ತು!?
ಮದುವೆ ಮುಗಿಯಿತು
ಮದುಮಗಳೀಗ ಮದುಮಗನ ಸೊತ್ತು!



ಪ್ರವಾದಿ















ನಾನು ಎಂ.ಎ. ಮಾಡುತ್ತಿದ್ದ ಸಂದರ್ಭದಲ್ಲಿ ಹೊರಬಂದ ‘ಪ್ರವಾದಿಯ ಕನಸು’ ಕವನ ಸಂಕಲನದ ಒಂದು ಪುಟ್ಟ ಕವಿತೆಯನ್ನು ಇಲ್ಲಿ ನೀಡಿದ್ದೇನೆ. ಈ
ಕವಿತೆಯನ್ನು ನೀವು ಈ ಹಿಂದೆ ಓದಿರುವ ಸಾಧ್ಯತೆ ತೀರಾ ಕಡಿಮೆ.


ದೇವರ ಪಟ-

ದ ಮೇಲೆ ಗುಬ್ಬಚ್ಚಿ

ಬೆಳಕಿನ ಕಡ್ಡಿ

ಕೊಕ್ಕಲ್ಲಿ ಕಚ್ಚಿ

ನಿವೇಶ ಕೋರಿ

ಕಣ್ಣಲ್ಲಿ ಸಣ್ಣ ಅರ್ಜಿ


ಎಡವಿ ಅಮ್ಮನ
ಭಕ್ತಿ-

ಹಚ್ಚಿಟ್ಟ ಬತ್ತಿ

ದೇವರ ನೆತ್ತಿ ಮೇಲೆ ಪಾದ

ಇದಾವ ಚಾರ್ವಾಕ ವಾದ!?


ನಿಂತಲ್ಲೇ ಸೆಟೆದ

ದಿಟ್ಟ

ಪುಟ್ಟ ಸಾಮ್ರಾಟ

ಗರಿಗಳೆಡೆ ಬಚ್ಚಿಟ್ಟ

ಹತ್ಯಾರುಗಳ ಪಟಪಟ ಬಿಚ್ಚಿಟ್ಟ

ಕಟ್ಟುವುದಕ್ಕೀಗ ರೆಡಿ

ಬಹುಶಃ ಪುಟ್ಟ ಒಂದು ಗುಡಿ!


ಇರುಳು ಮುಗಿಯುವುದರಲ್ಲಿ

ಮನೆ ತುಂಬಾ

ಪ್ರೀತಿಗೆ ಭಾಷೆ

ಭಕ್ತಿಯ ಮಡಿಯುಟ್ಟು ಉಷೆ!


 

ವ್ಯಾಯಾಮ



ಅವಳು ಬಾಗಿದ  ಬಿಲ್ಲು ಗಟ್ಟಿಯಾಗಿದೆ ದಿಲ್ಲು
ಅವನೆದೆಯ ತೋಟದಲಿ ಹೊಳೆವ ಕಾಮನಬಿಲ್ಲು
ಬಿಟ್ಟ ಬಾಣದ ಚಿತ್ತ  ನೆಟ್ಟಿಹುದು ಗುರಿಯತ್ತ
ಬಾಳೆ೦ಬ ಹುತ್ತದಲಿ ಸುಖವು  ತಪ್ತ 


ತಾನು ಮೇಲೆ೦ಬುದನು ಮರೆತುಬಿಡು ಓ ಮಿತ್ರ
ಮೇಲು  ಕೀಳೆ೦ಬುದು ಬದಲಾಗುವಾ ಚಿತ್ರ
ಕುಸುಮಕೋಮಲೆ ಅವಳು ನಿನ್ನ ಸೈರಿಸುತಿಹಳು
ಒಲವ ಧಣಿ ನೀನಾಗು ನಿರತ ಹಗಲಿರುಳು


ಬದುಕೊ೦ದು ವ್ಯಾಯಾಮ ಅದಕೆಲ್ಲಿ
ಆಯಾಮ
ಬದಲಾಗುವಾ ಕಲೆಯೇ ಜಗದ ನಿಯಮ
ಸಾಗರದ ತಡಿಯದು ಮುಳುಗುಸೂರ್ಯನ ಗುಡಿ
ಈ ಆಸನಕ್ಕೊ೦ದು  ಹೆಸರ
ಕೊಟ್ಟುಬಿಡಿ

ರಂಗೋಲಿ

ರಂಗೋಲಿ

ಅಜ್ಜಿ
ಸೂರ್ಯ ಹುಟ್ಟುವ ಮೊದಲೇ
ಅಂಗಳಕೆ ನೀರು ಚೆಲ್ಲಿ ರಂಗೋಲಿ ಬರೆಯುತ್ತಿದ್ದಳು
ಸರಳ ರೇಖೆಗಳ ನೇರ ನಡೆ
ಎಲ್ಲವೂ ಕ್ರಮಬದ್ಧಚಿತ್ರ ಚಿತ್ತಾರಗಳು
ಬಳ್ಳಿ ಹೂವುಗಳುಸದಾ ಚಿಗುರಿ ಆಕಾಶಕ್ಕೆ
ಅಮ್ಮ
ಸೂರ್ಯ ಹುಟ್ಟುವಾಗ
ಅಂಗಳ ಗುಡಿಸಿ ಧೂಳು ಸಾರಿಸಿ
ರಂಗೋಲಿ ಬರೆಯುತ್ತಿದ್ದಳು
ಅಮ್ಮನ ರಂಗೋಲಿಯಲ್ಲಿ ಬಣ್ಣ ಬಹಳ
ಅಡ್ಡ ದಿಡ್ಡಿ ರೇಖೆಗಳಿಗೆ ಜೋಡಣೆ
ಹಣ್ಣು ಕಾಯಿಗಳ ಮೊಳಕೆ ಬೇರುಗಳು
ಸದಾ ನೀರಿನಾಳಕ್ಕೆ
ಹುಡುಗಿ
ಸೂರ್ಯ ಹುಟ್ಟಿದ ಮೇಲೆ
ಕೈಕಾಲುಗಳು ಸವರಿ ನೆಲ ತೆವರುಗಳ ತೀಡಿ
ರಂಗೋಲಿ ಬರೆಯುತ್ತಾಳೆ
ಅಲ್ಲೊಂದು ಇಲ್ಲೊಂದು ಅಡ್ಡ ದಿಡ್ಡಿ ಚುಕ್ಕೆಗಳ ಇಟ್ಟು
ಹೇಗೆ ಹೇಗೋ ಒಂದರೊಡನೊಂದು ಸೇರಿಸಿ
ಬರೆಯುತ್ತಲೇ
ಎಲ್ಲಿಂದೆಲ್ಲಿಗೋ ಬಂಧ ನಿಗೂಢ
ಸದಾ ಸಂಕೇತದಾಳಕ್ಕೆ.

ಡಾ. ಪುರುಷೋತ್ತಮ ಬಿಳಿಮಲೆ

ಏನನ್ನಿಸಿತು ನನಗೂ ಹೇಳಿ .....


ನಿಮ್ಮ ಕಲ್ಪನೆಗೆ, ಭಾವನೆಗೆ ಬಿಟ್ಟಿದ್ದು ... ಏನನ್ನಿಸಿತು ನನಗೂ ಹೇಳಿ .....

ಯಾರು ಬಿಟ್ಟು ಹೋದ ಚಿಹ್ನೆಗಳು



ಕಡಲಿಗೆ ಬಿದ್ದ ಕಣ್ಣ ನೀಲಿ
ಸಮುದ್ರವಾಯಿತೇ-
ಮಿಲಿಯಾಂತರ ಉಲ್ಕಾಪಾತಗಳ
ಕೊಲೆಯಾಗಿ ಸಮುದ್ರ ತುಂಬಿಹೋಯಿತೆ-
ನಮ್ಮೂರ ಗಿಡ ಮರ, ಕೆರೆ ಕುಂಟೆ,
ಬೆಟ್ಟ ಗುಡ್ಡ, ಭೂಮಿ ಆಕಾಶ
ಬ್ರಹ್ಮಾಂಡ-
ಕಣ್ಣ ನೀಲಿಯೊಳಗೆ ಸೇರಿಕೊಂಡಿದ್ದೇಗೇ?
ಭೂಮಿಗೆ ಬೆಂಕಿ ಬಿದ್ದಾಗೆಲ್ಲ
ಓಡಿ ಬರುವ ಕಡಲು-
ಸೂರ್ಯನಿಂದ ಬೆಳಕು ತಂದು
ಮಣ್ಣಿನಿಂದ ಕಪ್ಪು ಆಮೈನೊ ಆಸಿಡ್
ತಿಂದು ನೇಯ್ದುಕೊಂಡಿದ್ದೇಗೆ
ತನ್ನ ಸುತ್ತಲ ಜೀವಜಾಲ-
ಕೋರಲ್ ಬಣ್ಣಗಳ, ಮೀನ ಕಣ್ಣುಗಳ
ಆಕಾಶ ಕಾಯಗಳ ಗುರುತ್ವಕ್ಕೆ
ತಕಥೈ ಥೈತಕ ಕುಣಿಯುವ
ಸಮುದ್ರದ ಅಲೆಗಳ ಮೇಲೆ-
ನೀಲಿ ರಥಗಳಲ್ಲಿ ಹೋಗಿ ಬರುವವರು
ಯಾರು? ದೇವಲೋಕಕ್ಕೆ-
ಇಲ್ಲಿದ್ದವರೆಲ್ಲ ಎಲ್ಲಿಗೆ ಹೋಗವರು
ಇಲ್ಲಿಗೆ ಬಂದವರೆಲ್ಲ ಎಲ್ಲಿದ್ದವರು-
ಗಿಡ ಮರ, ಕೆರೆ ಕುಂಟೆ, ಬೆಟ್ಟ ಗುಡ್ಡ;
ಬಸ್ಸು ಕಾರು ರೈಲು ವಿಮಾನಗಳೆಲ್ಲ
ಯಾರು ಬಿಟ್ಟು ಹೋದ ಚಿಹ್ನೆಗಳು?

ಎಂ.ವೆಂಕಟಸ್ವಾಮಿ 

ಫೈಜ್ ಕವಿತೆಗಳು

ಸೆರೆಮನೆಯಲ್ಲೊಂದು ಸಂಜೆ


ನೀಹಾರಿಕೆಗಳ ಸುರುಳಿ ಸುರುಳಿ ಮೆಟ್ಟಿಲುಗಳ
ಇಳಿಯುತ್ತಾ ಬರುತ್ತಿದೆ ಸದ್ಡಿಲ್ಲದೆ ರಾತ್ರಿ.
ಬೀಸುವ ಗಾಳಿ ಹತ್ತಿರ, ಹತ್ತಿರ ಸುಳಿದಿದೆ
ಯಾರೋ ಪ್ರೀತಿ ಮಾತು ಕಿವಿಯಲುಸುರಿದ ಹಾಗೆ.
ಅಂಗಳದಲಿ ನಿಂತ ನಿರಾಶ್ರಿತ ಮರಗಳು
ನಭದ ಸೆರಗಲಿ ಬಿಡಿಸಿವೆ ಮರಳುವ ನಾಡಿನ ನಕ್ಷೆ.
ಚಾವಣಿಯ ಮೇಲೆ ಮೆರುಗುತ್ತಿವೆ
ಬೆಳದಿಂಗಳ ಕರುಣೆಯ ಬೆರಳು.
ಕಣಕಣದಲಿ ಕರಗಿದೆ ನಕ್ಷತ್ರದ ಹೊಳಪು
ನೀಲಿ ಕದಡಿದೆ ಆಗಸದ ತುಂಬಾ.
ಹಸಿರು ಮೂಲೆಗಳಲ್ಲಿ ಕಡು ನೀಲಿ ನೆರಳು,
ಆವರಿಸಿದಂತೆ ಮನಸ
ಸ್ವಲ್ಪ ಸ್ವಲ್ಪವೇ ವಿರಹದ ನೋವು.
ಆಹಾ! ಎಷ್ಟು ಸಿಹಿ ಈ ಗಳಿಗೆ.
ಗೆಲ್ಲಲಾರದು ಇಂದು ಎಂದೆಂದೂ
ಇಲ್ಲಿ ವಿಷವ ಬೆರೆಸುವ ಮನಸು.
ಮಿಲನದ ಮನೆಯ ದೀಪ
ಆರಿಸಿಯಾರು ಬಿಡಿ.
ಚಂದ್ರನನ್ನಳಿಸುವವರು
ಯಾರಾದರೂ ಇದ್ದರೆ ಹೇಳಿ.

ಸೆರೆಮನೆಯಲ್ಲೊಂದು ಬೆಳಗು 


ಚಂದ್ರ ದಿಂಬಿನ ಪಕ್ಕ ನಿಂತು ‘ಏಳು, ಬೆಳಗಾಯಿತು’
ಅಂದಾಗ ಇನ್ನೂ ರಾತ್ರಿ ಸ್ವಲ್ಪ ಬಾಕಿ ಇತ್ತು.
‘ಏಳು! ಈ ರಾತ್ರಿಯ ನಿನ್ನ ಪಾಲಿನ ನಿದ್ದೆಯ ಮದಿರೆ
ತುಟಿಯಿಂದ ಇಳಿದಿಳಿದು ತಳ ಕಂಡಿದೆ’ ಅಂದ.
ಪ್ರಿಯತಮೆಯ ಬಿಂಬಕ್ಕೆ ವಿದಾಯ ಹೇಳಿ ಹೊರಳಿದೆ.
ರಾತ್ರಿಯ ಕರಿ ಹೊದಿಕೆಯ ತೆರೆತೆರೆಗಳ  ಮೇಲೆ
ಅಲ್ಲಿಲ್ಲಿ ಬೆಳ್ಳಿ ಸುಳಿಸುಳಿಗಳ ನರ್ತನ.
ಚಂದ್ರನ ಕೈಯ್ಯಿಂದ ಉದುರುತ್ತಿವೆ
ಒಂದೊಂದೆ ತಾರೆ ತಾವರೆಯ ಪಕಳೆಗಳು.
ಮುಳುಗುತ್ತ, ಏಳುತ್ತ, ಈಜುತ್ತ, ಮುದುಡುತ್ತ, ತೆರೆಯುತ್ತ
ರಾತ್ರಿ ಬೆಳಗನು ತಬ್ಬಿ ಕರಗಿದ್ದು ಅದೆಷ್ಟೋ  ಹೊತ್ತು.
ಸೆರೆಮನೆಯ ಅಂಗಳದಲ್ಲಿ ನನ್ನ ಸಂಗಾತಿಗಳ ಹೊಳೆವ ಮುಖ
ಮೆಲ್ಲನೆ ಮೂಡುತ್ತಿದೆ ಕಪ್ಪು ಕತ್ತಲೆಯ ಮೀರಿ.
ನಿದ್ದೆ ಚೆಲ್ಲಿದ ಮರವಳಿಕೆಯ ಹನಿಹನಿ ಅಳಿಸಿದೆ
ದೇಶದ ಚಿಂತೆ, ಕಾಣದ ಗೆಳತಿಯ ನೆನಪಿನ ನೋವು.
ದೂರದಲ್ಲೆಲ್ಲೋ ನಗಾರಿ ಬಡಿವ, ವಜ್ಜೆ ಹೆಜ್ಜೆ ಎಳೆವ ಸದ್ದು.
ಸತಾಯಿಸುವ ಹಸಿವ ಹೊತ್ತು ಗಸ್ತಿಗೆ ಹೊರಟ ಕಾವಲುಗಾರ.
ಜೊತೆಗೆ ಕೈಕೈ ಹಿಡುದು ನಡೆದಿದೆ ಕೈದಿಗಳ ಆಕ್ರಂದನ.
ಕಮ್ಮನೆ ಕನಸಿನ ಕಂಪ ಇನ್ನೂ ಹೊತ್ತ ಗಾಳಿ ಮೆಲ್ಲನೆದ್ದಿದೆ.
ಎದ್ದಿವೆ ಹಾಲಾಹಲ ಕದಡಿ ಒಡೆದ ಸೆರೆಮನೆಯ ಸದ್ದುಗಳು.
ಅಲ್ಲಿ ಯಾರೋ ಕದ ತೆರೆದ, ಇಲ್ಲಿ ಯಾರೋ ಮುಚ್ಚಿದ ಸಪ್ಪಳ.
ಮೆಲ್ಲ ಮುಲುಕಾಡಿದೆ ಸರಪಳಿ, ಮುಲುಕಿ ಬಿಕ್ಕುತ್ತಿದೆ ಎಲ್ಲೋ.
ಯಾವುದೋ ಬೀಗದ ಎದೆ ಹೊಕ್ಕಿದೆ ಚೂರಿಯ ಚೂಪು.
ಕಿಟಕಿ ಡಬಡಬಡಬ ತಲೆಯ ಚಚ್ಚಿಕೊಂಡಿದೆ  ಇನ್ನೆಲ್ಲೋ.
ನಿದ್ದೆಯಿಂದ ಮತ್ತೆ ಎದ್ದಂತಿದೆ ಜೀವದ  ವೈರಿಗಳು.
ಕಲ್ಲು ಕಬ್ಬಿಣವ ಕಡಿದು ಕೆತ್ತಿದ ಗಟ್ಟಿ ರಕ್ಕಸರು,
ಹಿಂಡಿ ಹಿಪ್ಪೆ ಮಾಡಿ ಅಹೋರಾತ್ರಿ ಅಳಿಸುತ್ತಿದ್ದರೆ
ನನ್ನ ನಾಜೂಕು ಬೆಳಗು ಬೈಗಿನ ಕಿನ್ನರಿಯರ.
ಉರಿವ ಭರವಸೆಯ ಬಾಣ ತುಂಬಿದ ಬತ್ತಳಿಕೆ ಹೊತ್ತು
ಬರುವ ರಾಜಕುವರನ ಹಾದಿ ಕಾದಿವೆ ಹಿಡಿದಿಟ್ಟ ಜೀವಗಳು .

   Tr :    Bageshree

ಸೋಮವಾರ, ಜುಲೈ 4, 2011

ಥೊಮಸ್ ಹಾರ‍್ಡಿಯ ಕವನ.



‘ಆತ ಕೊಂದ ಮನುಷ್ಯ’
ನಾನು ಅವನು ಇಲ್ಲಲ್ಲದೆ
ಎಲ್ಲಾದರೊಂದು ಹಳೇ ಪಡಖಾನೆಯಲ್ಲಿ
ಸಿಕಿದ್ದರೆ ಇಬ್ಬರೂ ಒಂದಿಷ್ಟು ಹೆಂಡ ಕುಡಿದು
ಗಂಟಲೊಣಗಿಸಿ ಕೊಳ್ಳಬಹುದಿತ್ತು
ಕುಡಿದಿಷ್ಟು ಮತ್ತಾಗಬಹುದಿತ್ತು.
ಕಾಲ್ದಳದ ಯೋಧರಾಗಿ ನಾವು
ಒಬ್ಬರಿನ್ನೊಬ್ಬರನ್ನೆದುರಿಸಿದೆವು
ನನ್ನಂತೆಯೇ ಅವನೂ ಗುರಿ ಇಟ್ಟ
ನಾನವನ ಮುಗಿಸಿದೆ ಅವನಿದ್ದಲ್ಲೇ.
ನಾನವನ ಸಾಯಿಸಿದೆ ಯಾಕೆಂದರೆ
ಯಾಕೆಂದರೆ ಅವನೆನ್ನ ಶತ್ರು.
ನಿಜ ಅವನೆನ್ನ ಶತ್ರು ಆದರೂ
ಸೈನ್ಯ ಸೇರಲು ಅವನೂ ನನ್ನಂತೇ
ಆಗಿರಬೇಕು ನಿರುದ್ಯೋಗಿ ಅವನೂ
ಮಾರಿರಬೇಕು ತನ್ನೆಲ್ಲ ಹೊಟ್ಟೆಪಾಡಿನ
ಸಲಕರಣೆ ಕಾರಣವಿರದು ಬೇರೇನೂ
ಯುದ್ಧ ಒಂದು ವಿಪರೀತ ವಿಚಿತ್ರ
ಹೊಡೆದುರಿಳಿಸುವಿರಿ ನೀವೊಬ್ಬನನ್ನ
ಆಚೆ ಬಾರೊಂದರಲ್ಲಿ ಸಿಕ್ಕಿದರೆ ಅದೇ ಆತ
ಕೊಡಿಸಬಹುದು ಒಂದಿಷ್ಟು ಹೆಂಡ
ಕೊಡಬಹುದು ಒಂದಿಷ್ಟು ಪುಡಿಗಾಸು ಕೂಡಾ
ಕೈಫಿ ಆಜ್ಮಿ ಕವನ
‘ಮೈ ಏ ಸೋಚ್ ಕರ್...’
ನಾನು ಹೀಗಂದುಕೊಂಡು
ಆಕೆಯ ಮನೆ ಬಾಗಿಲಿಂದ ಹೊರಟೆ
ಆಕೆ ನನ್ನನ್ನ ತಡೀತಾಳೆ
ಮನವೊಲಿಸ್ತಾಳೆ ಅಂತ
ಗಾಳಿಯಲ್ಲಿ ತೇಲಿ ಬರುವ ಕೈಗಳು
ನನ್ನ ಕೈ ಹಿಡಿದು ನಿಲ್ಲಿಸುತ್ತವೆ
ನನ್ನನ್ನಾಕೆ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾಳೆ
ಹೆಜ್ಜೆಗಳು ಹೇಗಿದ್ದವು ಅಂದರೆ
ಆಕೆ ಈಗ ಕೂಗಿ ವಾಪಸ್ಸು
ಕರೆಯುತ್ತಾಳೆನೋ ಅಂತ
ಆದರೆ ಆಕೆ ನನ್ನ ತಡೆಯಲಿಲ್ಲ
ಮನವೊಲಿಸಲಿಲ್ಲ
ನನ್ನ ಕೈ ಹಿಡಿದು ತಡೆಯಲಿಲ್ಲ
ಹಿಡಿದು ಕೂರಿಸಲೂ ಇಲ್ಲ
ಕೂಗಿ ಕರೆಯಲೂ ಇಲ್ಲ
ನಾನು ಹಾಗೆಯೇ ನಿದಾನವಾಗಿ
ಹೆಜ್ಜೆ ಹಾಕುತ್ತಲೇ ಇದ್ದೆ
ಎಷ್ಟೆಂದರೆ
ನಾನವಳಿಂದ ದೂರವಾದೆ
ಬೇರೆಯಾದೆ...
ದೂರವಾದೆ... ಬೇರೆಯೇ ಆದೆ

ಭಾನುವಾರ, ಜುಲೈ 3, 2011

ಪ್ರೀತಿಯೆಂದರೆ

ಪ್ರೀತಿಯೆಂದರೆ
ಎಂ ಜಿ ರಸ್ತೆಯಲ್ಲಿ ಕೈಗೆ ಕೈಗೆ ಮೈಗೆ ಮೈ
ಬೆಸೆದುಕೊಂಡು ಅಲೆದಾಡುವುದು
ಪ್ರೀತಿಯೆಂದರೆ ಸೈಬರ್ ಸೆಂಟರ್ ನ ಕ್ಯಾಬಿನ್ ನೊಳಗೆ ಮುದ್ದಾಡುವುದು
ಪ್ರೀತಿಯೆಂದರೆ
ಫೇಸ್ ಬುಕ್ಕಿನೊಳಗೆ ಇಣುಕಿ
ಐ ಫೋನ್ ಗಳ ಗೋಡೆಚಿತ್ರವಾಗುವುದು
ಪ್ರೀತಿಯೆಂದರೆ ಆಕ್ಸ್ ಮತ್ತು ಇವಾಗಳ ಮೇಲಾಟ,ತಡಕಾಟ !

ಪ್ರೀತಿಯೆಂದರೆ
ಕಾಲ್ಗೆಜ್ಜೆ ನಾದಕ್ಕೆ ಸೋತು
ಧ್ವನಿಗೆ ಕಾತರಿಸಿ
ಕಣ್ಣ ಸನ್ನೆಗಳೇ ಭಾಷೆಯಾಗುವುದು


ಪ್ರೀತಿಯೆಂದರೆ
ಕಲ್ಲು ಕೋಟೆಗಳ ಮೇಲೆ
ಮರಗಿಡಗಳ ಮೇಲೆ
ಅಮರ ಅಕ್ಷರಗಳಾಗುವುದು

ಪ್ರೀತಿಯೆಂದರೆ
ಮೌನದಲಿ ಮಾತಾಗಿ
ಕಣ್ಣೊಳಗಿನ ಬಿಂಬವಾಗಿ, ಚಿತ್ರಗಳಾಗಿ
ಕಾಲನ ಕೈಯಲ್ಲಿ ಕರಗಿಹೋಗುವುದು

ಪ್ರೀತಿಯೆಂದರೆ......
ಶಿರಾಜ ಬಿಸರಳ್ಲಿ