ಗುರುವಾರ, ಅಕ್ಟೋಬರ್ 27, 2011

ದೀಪಾವಳಿ – ಕೆಲ ಪದ್ಯಗಳು



-ಲಡಾಯಿ ಬಸು


ಹಣತೆ ಸುಟ್ಟುಕೊಳ್ಳುವಾಗ
ಲೋಕಕ್ಕೆ
ಬೆಳಕಿನ ಸಂಭ್ರಮ ..!

ನಿನಗೆ
ಬೆಳಕಿನ ಅನುಭವವಾಗುವುದು
ನೀನು ಹಣತೆಯಾದರಷ್ಟೇ  ..!

ಹಣತೆ ಹಚ್ಚಿಟ್ಟವರ ಓಣಿಯಲ್ಲಿ ಸಂಚಾರವಿತ್ತು
ಬರೀ ಚಾಳೀಸು ತೊಟ್ಟ ಕುರುಡರೇ ಎದುರಾದರು ..!

ಇಡೀ ಇರುಳು
ಪ್ರೇಮಿಸಿದ ಫಲವೆನ್ನುವ ಹಾಗೆ
ಕತ್ತಲು ಬೆಳಕಾಗಿ ಮಾರ್ಪಟ್ಟಿತು
ಹೆಚ್ಚೇನಿಲ್ಲ
ಪ್ರೇಮಿಸುವದೆಂದರೆ
ಕತ್ತಲನ್ನು ಬೆಳಕಾಗಿಸುವುದು
ಇದು ಇರುಳಿನ
ನೀತಿಪಾಠವಂತೂ ಅಲ್ಲ ..!

ಸೂರ್ಯನಿರುವ ಹಗಲಿನಲ್ಲಿ
ಹಣತೆ ಹಚ್ಚುವ
ನಿನ್ನ  ಸಂಭ್ರಮಕೆ ಏನನ್ನಲಿ ?
ಉರಿವ ಹಣತೆ
ಹೇಳುವುದು ಇದನ್ನೇ
ಸುಡದೆ ಬೆಳಕಾಗಲು
ಬರದು ..!


ತನ್ನಷ್ಟಕ್ಕೆ ತಾನು
ಉರಿದು ಬೆಳಕಾದ
ಸೂರ್ಯನ ಪಾಠ ಓದಲಾಗದ
ಕುರುಡರು
ಈ ದಿನ ಹಣತೆ ಹಚ್ಚಿ
ಕತ್ತಲೆ ಕಳೆಯಲೆಂದು
ಪ್ರಾರ್ಥನೆಗೆ ಕುಳಿತರು
ಒಂದು ಕರುಣೆಯ ನೋಟ
ಬಿಟ್ಟರೆ
ಅವರ ನಡೆ
ನನ್ನ ಶಬ್ದಗಳಿಗೆ ನಿಲುಕದು
ಎಲ್ಲ ದಾಖಲೆ ಮುರಿದಿದೆ
ಕುರುಡರ ಲೋಕದಲ್ಲಿ
ಕನ್ನಡಿಯ ಮಾರಾಟ
-ಚಿತ್ರಕೃಪೆ- ಅಂತರ್ಜಾಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ