ಸೋಮವಾರ, ಜೂನ್ 20, 2011

ಚಳಿಗಾಲದ ಎಲೆ ಸಾಲು'' ಕವನ ಸಂಕಲನ ಬಿಡುಗಡೆ


chaligala cover page.jpg

ಎಸ್.ಕುಮಾರ್ ಎರಡು ಕವಿತೆಗಳು


ಎಸ್ ಕುಮಾರ್ ಅವರ ಪ್ರಥಮ ಸಂಕಲನ ಚಳಿಗಾಲದ ಎಲೆ ಸಾಲು ಬರುತ್ತಿರುವ ಸಂದರ್ಭದಲ್ಲಿ ಸಂಕಲನದ ಎರಡು ಕವಿತೆಗಳು ನಿಮಗಾಗಿ


ಸಂಜೆಗತ್ತಲ ಹಾಡು

ನೆರಳು ಬಿಡಿಸಿಕೊಂಡಾಗಿದೆ
ಕನಸುಗಳ ಮಾತೆಲ್ಲಿ?
ಮಾತು ತರಗೆಲೆ
ಹಿಡಿದು ಪ್ರಯೋಜನವಿಲ್ಲದೆಯೆ
ಪಾಲೋ ಕಾವೋ, ಖಲೀಲ್ ಗಿಬ್ರಾನ್
ಕಡೆಗೆ…
ರಾಬಿನ್ ಶಮರ್ಾನ
ಫೆರಾರಿ ಕೂಡ
ಬೀದಿ ದೀಪದ ಸಾಲಿನಲ್ಲಿ…

ಸಿಗರೇಟಿನ ಬೂದಿ ಜತೆ
ಕೊಡವಿದರೆ ಬೇಸರ ಬೀದಿಗೆ
ಸಿಗ್ನಲ್ಲಿನ ಕೆಂಪು ದೀಪ
ದಾರಿಗೆ!

ಕಾಫಿ ಡೇ ಎದುರು
ಚಹಾ ಮಾರುವ
ಹುಡುಗನಿಗೆ ಕಂಡಿದ್ದು
ಶಾಪಿಂಗ್ ಮಾಲ್
ಹುಡುಗಿಯರ ಸೊಂಟ,
ತನ್ನೂರ ಹುಡುಗಿಯರ
ಕೊಡಪಾನದ ನೆನಪು…

ರಾತ್ರೋರಾತ್ರಿ
ಕಂಪ್ಯೂಟರ್ ಪರದೆ
-ಯಿಂದ
ಎದ್ದು ಬಂದ
ಯಾರದ್ದೋ ಫ್ರೆಂಡ್ ರಿಕ್ವೆಸ್ಟ್…
ಈ ಮೇಲು
ಫೀಮೇಲು
ಆಮೇಲಾಮೇಲೆ
ಮೇಲೆ.. ಮೇಲೆ..
ಲೆ…
ಲೆ…
ಎಂದ ಮೇಷ್ಟ್ರು ಕೂಡ
ಕಣ್ಣ ಮುಂದೆ..
*
ಲಜ್ಜೆಗೇಡಿ ಸಂಜೆ
ಬೇಡದ ಚಿತ್ರಗಳು
ಯಾರದ್ದೋ ಪುಳಕದ ನಗು
ಮೂಲೆಯಲ್ಲಿ ಸೆಳಕಿನ ಬಿಗು
ಮನೆ ದಾರಿಯಲ್ಲಿ

ಧ್ಯಾನ ಮೌನ
ಬುದ್ಧ, ತಾವೋ..
ಮೂರು ಮುಕ್ಕಾಲು ಕೋಟಿ
ದೇವರುಗಳೆಲ್ಲಾ
ಊರು ದಾರಿಯಲ್ಲಿ

ಒಳಗೊಳಗೆ ಒದ್ದಾಟ
ಸುಖಾಸುಮ್ಮನೆ ಸಂಕಟ

ಕಂಡರೆ ಕೈ ಮುಗಿಯಿರಿ…

ಕ್ಷಮಿಸುವ ಭಗವಂತನ
ಕೈಯೂ ರಕ್ತವಾಗಿದೆ
ಅವನಿಗೂ ಕಾಡುತ್ತಿರಬಹುದು ಪಾಪಪ್ರಜ್ಞೆ.

ಗರ್ಭಗುಡಿ ಮಂದ ಬೆಳಕು,
ಸೂತಕದ ಮನೆ ಹಣತೆಯ ಹಾಗೆ
ಕಂಡಿದೆಯಂತೆ ಅವಗೆ

ಕಣ್ಣುಜ್ಜಿಕೊಂಡಾಗಲೆಲ್ಲ
ಗಪ್ಪನಡುರುವ ರಕ್ತದ ವಾಸನೆ
ಮೂಗಿಗೆ ಮಾತ್ರವಲ್ಲ!

ಭಕ್ತರು ನೂರು ಮಂದಿ
ನೆರೆದು ನಿಂತರೆ
ತತ್ತರಿಸಿ ದುಃಸ್ವಪ್ನ
ಕಂಡಂತೆ ನಡುಗು

ಊರ ಬೀರನು, ಸಾಬರ ಪೀರನು
ಕೂಡಿ ಆಡುತ್ತಿದ್ದರೆ,
ದೇಗುಲದ ಕಟ್ಟೆ ಮೇಲೆ
ಅವನು ಅನಾಥ

ಗಂಟೆ ನಾದ ಮೀರಿದೆ
ಮದ್ದು ಗುಂಡುಗಳ ಸದ್ದು,
ಶಂಖನಾದ ಸೀಳಿದ ಆಕ್ರಂದನ,
ಗುಡಿಯ ಒಳಗೆಲ್ಲಾ ಮಾರ್ದನಿಸಿ ಆಕ್ರೋಶ

*
ಅಮಲುಗತ್ತಲು, ಬರೀ ಮಂತ್ರಗಳು
ಏನೂ ಕೇಳದೆ,
ಜಗದಲ್ಲೇನುಗುತ್ತದೆ ತಿಳಿಯದೆ
ಮೂಡನಾಗಿಹನೆಂದು ಊರಾಚೆ
ಬೆಟ್ಟದ ಮೇಲೆ ಕೂತಿಹನಂತೆ…
ಕಂಡರೆ ಕೈ ಮುಗಿದು
ಅಲ್ಲಿಂದಲೂ ಕಳಿಸಿಕೊಟ್ಟು ಬಿಡಿ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ